ಶಿರೂರು ಮಠಕ್ಕೆ ಉತ್ತರಾಧಿಕಾರಿಯಾದ 16 ವರ್ಷದ ಹಳ್ಳಿಯ ಬಾಲಕ
ಉಡುಪಿ, ಏಪ್ರಿಲ್ 22: ಉಡುಪಿಯ ಅಷ್ಟ ಮಠಗಳಲ್ಲಿ ಒಂದಾದ ಶಿರೂರು ಮಠಕ್ಕೆ ನೂತನ ಉತ್ತರಾಧಿಕಾರಿ ನೇಮಕಗೊಂಡಿದ್ದಾರೆ. ಹಲವು ವಿವಾದದ ನಡುವೆಯೂ ಶಿರೂರು ಮಠಕ್ಕೆ ಕೊನೆಗೂ ಉತ್ತರಾಧಿಕಾರಿ ನೇಮಕವಾಗಿದ್ದು, 16 ವರ್ಷದ ಬಾಲಕ ಅನಿರುದ್ಧ್ ಎಂಬ ವಟು ಶಿರೂರು ಮಠದ ನೂತನ ಮಠಾಧಿಪತಿಯಾಗಿ ಪಟ್ಟಾಭಿಷಿಕ್ತರಾಗಲಿದ್ದಾರೆ.
ನೂರಾರು ವರ್ಷಗಳ ಇತಿಹಾಸವಿರುವ ಶಿರೂರು ಮಠದ 31ನೇ ಯತಿಯಾಗಿ ಅಧಿಕಾರ ಸ್ವೀಕರಿಸಲಿರುವವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಸಮೀಪದ ನಿಡ್ಲೆ ಗ್ರಾಮದ ಅನಿರುದ್ಧ್ ಎಂಬ ವಟು.
16 ವರ್ಷದ ಅನಿರುದ್ಧ್, ಶ್ರೇಷ್ಠ ಪರಂಪರೆಯುಳ್ಳ ಶಿರೂರು ಮಠದ ಉತ್ತರಾಧಿಕಾರಿಯಾಗಿ ನೇಮಕಗೊಂಡ ಪ್ರಕ್ರಿಯೆಯೇ ಕುತೂಹಲಕಾರಿಯಾಗಿದೆ. ಶಿರೂರಿನಿಂದ ನೂರಾರು ಕಿಲೋಮೀಟರ್ ದೂರದಲ್ಲಿರುವ ನಿಡ್ಲೆ ಗ್ರಾಮದ ಅನಿರುದ್ಧ್, ಮಠದ ಉತ್ತರಾಧಿಕಾರಿಯಾಗಿ ಸ್ವೀಕರಿಸಲಿದ್ದಾರೆ. ಮೇ 11ರಿಂದ ಮೇ 14ರವರೆಗೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸೋಂದಾ ಕ್ಷೇತ್ರದ ಶ್ರೀ ವಾದಿರಾಜ ಸ್ವಾಮಿಗಳ ವೃಂದಾವನ ಸನ್ನಿಧಿಯಲ್ಲಿ ಅಧಿಕಾರ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ.
ಆಯ್ಕೆ ಪ್ರಕ್ರಿಯೆ ಬಹಳ ಕುತೂಹಲಕಾರಿ
ಅನಿರುದ್ಧ್ ಅವರ ಆಯ್ಕೆ ಪ್ರಕ್ರಿಯೆ ನಡೆದಿರುವುದು ಬಹಳ ಕುತೂಹಲಕಾರಿಯಾಗಿದೆ. ಎರಡು ವರ್ಷಗಳಲ್ಲಿ ಅನಿರುದ್ಧಗೆ ಬೇರೆ ಬೇರೆ ರೀತಿಯಲ್ಲಿ ಪರೀಕ್ಷೆಯನ್ನು ಮಾಡಲಾಗಿದೆ. ಇದರಲ್ಲಿ ಉತ್ತೀರ್ಣವಾದ ಬಳಿಕ ಸಂಸ್ಕೃತ ಗ್ರಂಥಗಳ ಅಧ್ಯಯನ ನಡೆಸಲಾಗಿದೆ. ಬಾಲಕನ ಎಲ್ಲಾ ಚಾತುರ್ಯತೆಯನ್ನು ಗಮನಿಸಿ ಎಲ್ಲಾ ಮಠಾಧಿಪತಿಗಳು ಒಗ್ಗೂಡಿ ಅನಿರುದ್ಧನನ್ನು ಪರೀಕ್ಷೆ ನಡೆಸಿ ಆಯ್ಕೆ ಮಾಡಿದ್ದಾರೆ.
ಅನಿರುದ್ಧ್ ಸೋಂದೆಯಲ್ಲಿ ಉತ್ತಾರಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸೋಂದೆಯಲ್ಲಿ ಉನ್ನತ ಅಧ್ಯಯನ ಮಾಡಲಾಗುತ್ತದೆ. ಇದಕ್ಕಾಗಿ ವಿದ್ವಾಂಸರನ್ನು ನೇಮಕ ಮಾಡಲಾಗುತ್ತದೆ. ಮತ್ತು ವಿವಿಧ ಮಠಾಧೀಶರು ಪಾಠ-ಪ್ರವಚನ ಮಾಡಲಿದ್ದಾರೆ. ಮುಂದಿನ ನಾಲ್ಕು ವರ್ಷಗಳಲ್ಲಿ ಶಿರೂರು ಮಠದ ಪರ್ಯಾಯ ನಡೆಯಲಿದ್ದು, ಈ ವೇಳೆ ಅನಿರುದ್ಧನಿಗೆ ಒಂದು ಹಂತದ ಶಿಕ್ಷಣ ಪೂರ್ಣಗೊಳ್ಳಲಿದೆ.
ಶ್ರೀಕೃಷ್ಣನ ಪೂಜೆ ಮಾಡಬೇಕೆಂಬ ಹಂಬಲ
ನಿಡ್ಲೆ ಡಾ.ಉದಯ ಸರಳಾತ್ತಾಯ ಮತ್ತು ವಿದ್ಯಾ ದಂಪತಿಯ ಏಕೈಕ ಪುತ್ರನಾಗಿರುವ ಅನಿರುದ್ಧ್, ಚಿಕ್ಕಂದಿನಿಂದಲೂ ವೈದಿಕ ಕಾರ್ಯಗಳ ಬಗ್ಗೆ ಬಹಳ ಆಸಕ್ತಿ ಇತ್ತು. ಪ್ರಮುಖವಾಗಿ ಶ್ರೀಕೃಷ್ಣನ ಪೂಜೆ ಮಾಡಬೇಕೆಂಬ ಹಂಬಲವನ್ನು ಎಳವೆಯಿಂದಲೇ ತೋರಿಸುತ್ತಿದ್ದ. ಆಚಾರ- ವಿಚಾರಗಳನ್ನು ಬದುಕಿನಲ್ಲಿ ಈಗಾಗಲೇ ಅಳವಡಿಸಿಕೊಂಡಿದ್ದಾನೆ. ಹೀಗಾಗಿ ನಾವು ಒಮ್ಮತದಿಂದ ಒಪ್ಪಿಗೆ ನೀಡಿದ್ದೇವೆ ಅಂತಾ ಅನಿರುದ್ಧ್ ತಾಯಿ ಶ್ರೀ ವಿದ್ಯಾ ಹೇಳಿದ್ದಾರೆ.
ಎಳವೆ ಪ್ರಾಯದಲ್ಲೇ ವೈರಾಗ್ಯತ್ವ
ಇನ್ನು ಸನ್ಯಾಸತ್ವ ಸ್ವೀಕರಿಸಲು ವೈರಾಗ್ಯವೇ ದಾರಿಯಾಗಿರೋದ್ರಿಂದ ಇಷ್ಟು ಎಳವೆ ಪ್ರಾಯದಲ್ಲೇ ವೈರಾಗ್ಯತ್ವ ಹೇಗೆ ಬಂತು ಅನ್ನುವ ಪ್ರಶ್ನೆಗೆ ಉತ್ತರಿಸಿದ ಅನಿರುದ್ಧ್ ತಂದೆ ಡಾ.ಉದಯ ಸರಳತ್ತಾಯ, ಅನಿರುದ್ಧನು ಕೃಷ್ಣ ಪೂಜೆ, ಗ್ರಹಸ್ಥ- ಸನ್ಯಾಸತ್ವದ ಬಗ್ಗೆ ಚಿಕ್ಕಂದಿನಿಂದಲೇ ಅಧ್ಯಯನ ಮಾಡಿದ್ದಾನೆ. ಶ್ರೀಕೃಷ್ಣನ ಪೂಜೆ ಮಾಡಲು ಎಳವೆಯಿಂದಲೇ ಭಾರೀ ಆಸಕ್ತಿ ಹೊಂದಿದ್ದಾನೆ. ಅನಿರುದ್ಧನ ಆಸಕ್ತಿಯನ್ನು ಗಮನಿಸಿ ಆತನ ಇಚ್ಛೆಯಂತೆ ಸನ್ಯಾಸಾಶ್ರಮವನ್ನು ಸೇರಲು ಒಪ್ಪಿಗೆ ನೀಡಿದ್ದೇವೆ ಅಂತಾ ಹೇಳಿದ್ದಾರೆ.
ಬಾಲಕನ ಆಯ್ಕೆ ಮೂಲಕ ಎಲ್ಲವೂ ಸುಖ್ಯಾಂತ್ಯ
ಇನ್ನು ತನ್ನ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅನಿರುದ್ಧ್, ಹಿಂದಿನಿಂದಲೂ ಕೃಷ್ಣ ಪೂಜೆ ಮಾಡಬೇಕು, ಸನ್ಯಾಸತ್ವದ ವಿಶೇಷ ಅನುಭೂತಿ ಪಡೆಯಬೇಕೆಂದು ಅಭಿಲಾಷೆ ಇತ್ತು. ಈ ಹಿನ್ನೆಲೆ ಶಿರೂರು ಮಠದ ಯತಿಯಾಗಬಹುದೇ ಅಂತಾ ತಂದೆ ಬಳಿ ಕೇಳಿದೆ. ತಂದೆ ವಿಮರ್ಶೆ ಮಾಡಿ ಒಪ್ಪಿಗೆ ನೀಡಿದರು ಅಂತಾ ಅನಿರುದ್ಧ್ ಹೇಳಿದರು.
ಒಟ್ಟಿನಲ್ಲಿ ಶಿರೂರು ಮಠದ ಈ ಹಿಂದಿನ ಪೀಠಾಧಿಪತಿ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ನಿಧನದ ಬಳಿಕ ವಿವಾದದ ಗೂಡಾಗಿದ್ದ ಮಠದ ಉತ್ತರಾಧಿಕಾರಿ ಪ್ರಕ್ರಿಯೆ, ಇದೀಗ ಅಂತಿಮ ಹಂತ ತಲುಪಿದ್ದು, ಬಾಲಕನ ಆಯ್ಕೆ ಮೂಲಕ ಎಲ್ಲವೂ ಸುಖಾಂತ್ಯವಾಗುತ್ತದೆ ಅನ್ನುವ ನಂಬಿಕೆ ಮಠದ ಭಕ್ತರದ್ದಾಗಿದೆ.