ಉಡುಪಿ: ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ
ಉಡುಪಿ, ಮೇ.29: ವಾರಾಹಿಯಿಂದ ಉಡುಪಿ ನಗರಕ್ಕೆ ನೀರು ತಂದು ಮತ್ತು ಸ್ವರ್ಣ ಮೂರನೇ ಹಂತದ ಯೋಜನೆ ಜಾರಿಗೊಳಿಸುವ ಮೂಲಕ ಉಡುಪಿ ನಗರದ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲಾಗುತ್ತದೆ ಎಂದು ಶಾಸಕ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಬಜೆ ಜಲಾಶಯಕ್ಕೆ ಭೇಟಿ ನೀಡಿದ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು. ಬಜೆ ಜಲಾಶಯದಲ್ಲಿ 70 ದಿನಗಳಿಗೆ ಆಗುವಷ್ಟು ನೀರನ್ನು ಮಾತ್ರ ಸಂಗ್ರಹಿಸಲು ಸಾಧ್ಯವಿದೆ. ಆದ್ದರಿಂದ ಮಳೆ ಬರುವುದು ತಡವಾದಾಗ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುತ್ತದೆ. ಆದ್ದರಿಂದ ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯವನ್ನು 120 ದಿನಗಳಿಗೆ ಹೆಚ್ಚಿಸಬೇಕಿದೆ ಎಂದರು.
ಸ್ವರ್ಣ ಮೂರನೇ ಹಂತದ ಕಾಮಗಾರಿ ಮತ್ತು ವಾರಾಹಿಯಿಂದ ಉಡುಪಿ ನಗರಕ್ಕೆ ನೀರು ತರಲು ಈಗಾಗಲೇ ಕುಡ್ಸೆಂಪ್ ಯೋಜನೆಯಲ್ಲಿ ಸರ್ಕಾರ 35 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ನಿವೃತ್ತ ಸೂಪರಿಂಟೆಂಡೆಂಟ್ ಎಂಜಿನಿಯರ್ ರಾಮ ಐಯ್ಯಂಗಾರ್ ಅವರಿಗೆ ಈ ಬಗ್ಗೆ ಅಧ್ಯಯನ ನಡೆಸಿ ವಿಸ್ತೃತ ವರದಿ ನೀಡುವಂತೆ ಕೇಳಿದ್ದೇವೆ ಎಂದರು.[ಸ್ಥಳೀಯರ ವಿರೋಧ: ನಿಡ್ಡೋಡಿ ಸ್ಥಾವರ ಕೈಬಿಟ್ಟ ಸರ್ಕಾರ]
ವಾರಾಹಿಯಿಂದ ಸಾಯಿಬರಕಟ್ಟೆ ವರೆಗೆ ನೀರು ತರಬಹುದು. ಅಲ್ಲಿಂದ ಉಡುಪಿ ವರೆಗೆ ಸುಮಾರು 25 ಕಿ.ಮೀಗಳ ಕೊಳವೆ ಮಾರ್ಗ ಅಳವಡಿಸಿ ನೀರನ್ನು ಹರಿಸಬೇಕಾಗುತ್ತದೆ ಎಂಬ ಅಭಿಪ್ರಾಯವನ್ನು ಪ್ರಾಥಮಿಕವಾಗಿ ಹೇಳಿದ್ದಾರೆ. ಮಣಿಪಾಲದ ಎಂಡ್ ಪಾಯಿಂಟ್ ಬಳಿ ಸ್ವರ್ಣ ನದಿಗೆ ಇನ್ನೊಂದು ಅಣೆಕಟ್ಟು ಕಟ್ಟುವ ಯೋಚನೆಯೂ ಇದೆ. ರಾಮ ಐಯ್ಯಂಗಾರ್ ಅವರು ವರದಿ ನೀಡಿದ ನಂತರ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.
ಹಣಕಾಸಿಗೆ ಯಾವುದೇ ರೀತಿಯ ಕೊರತೆಯಾಗದು. ಬ್ರಹ್ಮಾವರ, ಉಪ್ಪೂರು ಚಾಂತಾರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನೂ ವಾರಾಹಿ ಯೋಜನೆ ಜೊತೆ ಸೇರಿಸಲಾಗುತ್ತದೆ. ಸ್ವರ್ಣ ಮೂರನೇ ಹಂತ ಮತ್ತು ವಾರಾಹಿ ಯೋಜನೆಗಳು ಜಾರಿಯಾದರೆ ಉಡುಪಿ ನಗರದ ನೀರಿನ ಕೊರತೆ ನೀಗಲಿದೆ. ಅಲ್ಲದೆ ಇನ್ನೂ ಮೂವತ್ತು ವರ್ಷಗಳ ಕಾಲ ಕುಡಿಯುವ ನೀರಿನ ಅಭಾವ ಉಂಟಾಗದು ಎಂದು ಅವರು ಹೇಳಿದರು.
ನಗರಸಭೆ ಅಧ್ಯಕ್ಷ ಪಿ. ಯುವರಾಜ, ಉಪಾಧ್ಯಕ್ಷೆ ಅಮೃತಾ ಕೃಷ್ಣಮೂರ್ತಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಸೆಲಿನಾ ಕರ್ಕಡ, ಸದಸ್ಯರಾದ ಚಂದ್ರಕಾಂತ್ ನಾಯಕ್, ರಮೇಶ್ ಕಾಂಚನ್, ಪ್ರಶಾಂತ್ ಭಟ್, ನಾರಾಯಣ, ಮೀನಾಕ್ಷಿ ಮಾಧವ, ಶಶಿರಾಜ್, ವಿಜಯ ಪೂಜಾರಿ, ಪೌರಾಯುಕ್ತ ಶ್ರೀಕಾಂತ್ ರಾವ್ ಮತ್ತಿತರರು ಉಪಸ್ಥಿತರಿದ್ದರು.
ಕುಡಿಯುವ ನೀರಿನ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಮಾರ್ಚ್ 7ರಿಂದ ನಗರಸಭೆ ವ್ಯಾಪ್ತಿಯಲ್ಲಿ ಮತ್ತು ಕೆಲವು ಪಂಚಾಯಿತಿ ಪ್ರದೇಶಕ್ಕೆ ಎರಡು ದಿನಕ್ಕೊಮ್ಮೆ ಕುಡಿಯು ನೀರು ಪೂರೈಕೆ ಮಾಡಲಾಗುತ್ತಿತ್ತು. ಆದರೆ ಮಳೆಯಾಗಿ ಬಜೆ ಜಲಾಶಯದಲ್ಲಿ ನೀರಿನ ಸಂಗ್ರಹ ಹೆಚ್ಚಾಗಿರುವ ಕಾರಣ ಮೇ29ರಿಂದ ಪ್ರತಿ ದಿನ ನೀರು ಪೂರೈಕೆ ಮಾಡಲಾಗುತ್ತದೆ. ಇನ್ನೂ ಒಂದು ತಿಂಗಳ ಕಾಲ ಸತತವಾಗಿ ಪೂರೈಕೆ ಮಾಡಬಹುದಾದಷ್ಟು ನೀರಿನ ಸಂಗ್ರಹ ಇದೆ ಎಂದು ಪ್ರಮೋದ್ ಮಧ್ವರಾಜ್ ಹೇಳಿದರು.
ನಾವು ಮುಂಜಾಗ್ರತಾ ಕ್ರಮವಾಗಿ ಎರಡು ದಿನಕ್ಕೊಮ್ಮೆ ನೀರು ಪೂರೈಕೆ ಮಾಡುವ ನಿರ್ಧಾರ ಕೈಗೊಂಡಾಗ ಹಲವಾರು ಟೀಕೆಗಳು ಕೇಳಿಬಂದವು. ಆದರೆ ಅದಕ್ಕೆ ಮಣಿಯದೆ ನಾವು ದಿಟ್ಟ ನಿರ್ಧಾರ ಕೈಗೊಂಡೆವು. ಆದ್ದರಿಂದ ಇಲ್ಲಿಯ ವರೆಗೂ ನೀರಿನ ಸಮಸ್ಯೆ ಉದ್ಭವಿಸಲಿಲ್ಲ ಎಂದು ಅವರು ಹೇಳಿದರು.