ಗೋಲಿಬಾರ್ಗೆ ಯು ಟಿ ಖಾದರ್ ನೇರ ಹೊಣೆ; ಬಿ ಎಲ್ ಸಂತೋಷ್
ಮಂಗಳೂರು, ಡಿಸೆಂಬರ್ 20: ಪೌರತ್ವ ತಿದ್ದುಪಡಿ ಕಾನೂನು ವಿರೋಧಿಸಿ ನಿನ್ನೆ ಮಂಗಳೂರಿನಲ್ಲಿ ನಡೆದ ಗೋಲಿಬಾರ್ಗೆ ಮಾಜಿ ಸಚಿವ ಯು ಟಿ ಖಾದರ್ ನೇರ ಹೊಣೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೊಷ್ ಆರೋಪಿಸಿದ್ದಾರೆ.
ಯುಟಿ ಖಾದರ್ "ಬೆಂಕಿ" ಮಾತಿಗೆ ಪ್ರತಾಪ ಸಿಂಹ ಕಿಡಿ
ಈ ಕುರಿತು ಗುರುವಾರ ತಡರಾತ್ರಿ ಟ್ವೀಟ್ ಮಾಡಿರುವ ಅವರು, 'ಸಂವಿಧಾನ ಬದ್ದವಾಗಿ ಜಾರಿಗೆ ತಂದಿರುವ ಕಾಯ್ದೆಯನ್ನು ವಿರೋಧಿಸಿ, ಯು ಟಿ ಖಾದರ್ ಜನರು ರೊಚ್ಚಿಗೇಳಲು ಕಾರಣರಾಗಿದ್ದಾರೆ. ಅವರ ವಿರುದ್ಧ ಕಾನೂನಿನಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು. ಖಾದರ್ ಹೇಳಿಕೆ ಪ್ರಚೋದನೆಗೆ ಕಾರಣವಾಗಿದೆ. ಹೀಗಾಗಿಯೇ ಪ್ರಾಣ ಹಾನಿಯಾಗಿದೆ. ಘಟನೆಗೆ ನೇರ ಹೊಣೆ ಅವರೇ. ದೇಶದ ಏಕತೆಗಾಗಿ ಪೌರತ್ವ ಕಾನೂನು ಬಂದಿದೆ. ಶಾಂತಿ ಕಾಪಾಡೋಣ' ಎಂದು ಟ್ವೀಟ್ ಮಾಡಿದ್ದಾರೆ.
ಬುಧವಾರ ಪೌರತ್ವ ತಿದ್ದುಪಡಿ ಕಾನೂನಿನ ಕುರಿತು ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವಾಗ ಶಾಸಕ ಯು ಟಿ ಖಾದರ್, 'ಕಾನೂನು ಜಾರಿಗೊಳಿಸಿದರೆ ಕರ್ನಾಟಕ ಹೊತ್ತಿ ಉರಿಯುತ್ತೆ' ಎಂದು ಪ್ರಚೋದನಾತ್ಮಕ ಹೇಳಿಕೆ ನೀಡಿದ್ದರು. ಇದು ವ್ಯಾಪಕ ವಿವಾದ ಸೃಷ್ಟಿಸಿತ್ತು. ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾನೂನು ವಿರೋಧಿಸಿ ಗುರುವಾರ ಮಂಗಳೂರಿನಲ್ಲಿ ನಿಷೇದಾಜ್ಞೆ ಇದ್ದರೂ ಹಲವು ಸಂಘಟನೆಗಳು ಪ್ರತಿಭಟನೆಗೆ ಕರೆ ಕೊಟ್ಟಿದ್ದವು. ಇದೇ ವೇಳೆ ಪ್ರತಿಭಟನೆ ಹಿಂಸೆಗೆ ತಿರುಗಿದಾಗ ಪೊಲೀಸರಿಂದ ನಡೆದ ಗೋಲಿಬಾರ್ ನಲ್ಲಿ ಮಂಗಳೂರಿನ ಇಬ್ಬರು ಮೃತಪಟ್ಟು, ಐವರು ಗಂಭೀರವಾಗಿ ಗಾಯಗೊಂಡಿದ್ದರು.