ಬಿಎಸ್ಎಫ್ಗೆ ಆಯ್ಕೆಯಾದ ಕರ್ನಾಟಕದ ಇಬ್ಬರು ಯುವತಿಯರು
ಮಂಗಳೂರು, ಮಾರ್ಚ್ 31: ದೇಶದಲ್ಲಿ ಯಾವುದೇ ಅಹಿತಕರ ಘಟನೆ ನಡೆದರೆ ತಕ್ಷಣ ನಮಗೆ ನೆನಪಾಗುವುದ ಗಡಿ ಭದ್ರತಾ ಪಡೆ (ಬಿಎಸ್ಎಫ್). ಅಂತಹ ಗಡಿ ಭದ್ರತಾ ಪಡೆಗೆ ಕರ್ನಾಟಕದ ಇಬ್ಬರು ಯುವತಿಯರು ಆಯ್ಕೆಯಾಗಿದ್ದಾರೆ.
ಅದರಲ್ಲೂ ಕರಾವಳಿ ಯುವತಿಯರಾದ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲ್ಲೂಕು ಬಲ್ನಾಡು ಗ್ರಾಮದ ಪದ್ಮಯ್ಯ ಗೌಡ ಮತ್ತು ತೇಜಾವತಿ ದಂಪತಿ ಪುತ್ರಿ ರಮ್ಯಾ ಹಾಗೂ ಇನ್ನೊಬ್ಬ ಯುವತಿ ಕಡಬ ತಾಲ್ಲೂಕು ಕಾಣಿಯೂರು ಗ್ರಾಮದ ಮೇದಪ್ಪ ದೇವಕಿ ದಂಪತಿ ಪುತ್ರಿ ಯೋಗಿತಾ ಬಿಎಸ್ಎಫ್ಗೆ ಆಯ್ಕೆಯಾಗಿ ಜಿಲ್ಲೆಗೆ ಮಾತ್ರವಲ್ಲ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ.
ಎನ್ಸಿಸಿ ತರಬೇತಿ ಪಡೆದಿದ್ದ ರಮ್ಯಾ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಮೈಕ್ರೋ ಬಯಾಲಜಿ ಸ್ನಾತಕೋತ್ತರ ಪದವಿ ಓದುತ್ತಿದ್ದ ಯೋಗಿತಾ, 2018ರಲ್ಲಿ ಬಿಎಸ್ಎಫ್ ಪರೀಕ್ಷೆ ತೆಗೆದುಕೊಂಡಿದ್ದರು. ಕೊರೊನಾ ಕಾರಣದಿಂದಾಗಿ ತಡವಾಗಿ ಫಲಿತಾಂಶ ಪ್ರಕಟವಾಗಿತ್ತು.
ದೇಶದ ಗಡಿ ಭದ್ರತಾ ಪಡೆಗೆ ಆಯ್ಕೆಯಾಗಿರುವುದಕ್ಕೆ ನಮಗೆ ಹೆಮ್ಮೆಯಾಗುತ್ತಿದೆ ಎಂದು ಈ ಯುವತಿಯರು ಹೇಳಿದ್ದು, ಇನ್ನು ಭಾರತೀಯ ಸೇನೆಯ ಗಡಿ ಭದ್ರತಾ ಪಡೆಗೆ ಆಯ್ಕೆಯಾಗಿರುವ ಈ ಇಬ್ಬರು ಯುವತಿಯರಿಗೆ ಕರವಾಳಿಗರು ಶುಭ ಹಾರೈಸಿದ್ದಾರೆ.
ಅಭಿನಂದಿಸಿದ ಕೇಂದ್ರ ಸಚಿವ ಸದಾನಂದಗೌಡ
ಬಿಎಸ್ಎಫ್ ಸೇರುತ್ತಿರುವ ಕರಾವಳಿ ಕನ್ನಡತಿಯರಾದ ಪುತ್ತೂರು ತಾಲೂಕು ಬಲ್ನಾಡಿನ ರಮ್ಯಾ, ಕಾಣಿಯೂರಿನ ಯೋಗಿತಾ ಅವರಿಗೆ ಹಾರ್ದಿಕ ಅಭಿನಂದನೆಗಳು ಎಂದು ಶುಭ ಹಾರೈಸಿದ್ದಾರೆ.
ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ, ರಾಣಿ ಅಬ್ಬಕ್ಕ, ಝಾನ್ಸಿರಾಣಿ ಲಕ್ಷ್ಮೀಬಾಯಿ ಅವರಂತಹ ವೀರವನಿತೆಯರು ಸದಾ ನಮಗೆಲ್ಲ ಪ್ರೇರಣೆಯಾಗಿದ್ದಾರೆ. ದೇಶ ಕಾಯೋದು ಅತ್ಯಂತ ಪುಣ್ಯದ ಕಾಯಕ. ಮಕ್ಕಳೇ, ನಮಗೆ ನಿಮ್ಮ ಮೇಲೆ ಸಂಪೂರ್ಣ ಭರವಸೆ ಇದೆ, ನಿಮ್ಮ ಕೈಗಳಲ್ಲಿ ದೇಶದ ಗಡಿ ಸುರಕ್ಷಿತ. ನಿಮಗೆ ಶುಭವಾಗಲಿ ಎಂದು ಟ್ವೀಟ್ ಮಾಡಿದ್ದಾರೆ.