ಮಂಗಳೂರಿನಲ್ಲಿ ಬೋಟ್ ಮುಳುಗಡೆ; ಮತ್ತಿಬ್ಬರ ಮೃತದೇಹ ಪತ್ತೆ
ಮಂಗಳೂರು, ಡಿಸೆಂಬರ್ 2: ಸೋಮವಾರ ಮಂಗಳೂರಿನ ಉಳ್ಳಾಲದ ಬಳಿ ಆಳ ಸಮುದ್ರದ ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆಯಾಗಿದ್ದು, ನಾಪತ್ತೆಯಾಗಿದ್ದ ಆರು ಮಂದಿ ಪೈಕಿ ಮತ್ತಿಬ್ಬರ ಮೃತದೇಹ ಬುಧವಾರ ಪತ್ತೆಯಾಗಿದೆ.
ಮೀನುಗಾರಿಕೆಗೆ ತೆರಳಿದ್ದ ಬೋಟ್ ನಲ್ಲಿ 22 ಮೀನುಗಾರರಿದ್ದು, ಬೋಟ್ ಮುಳುಗಡೆಯಾಗಿ ಆರು ಮಂದಿ ನಾಪತ್ತೆಯಾಗಿದ್ದರು. 16 ಮಂದಿಯನ್ನು ರಕ್ಷಿಸಲಾಗಿತ್ತು. ಆರು ಮಂದಿಯಲ್ಲಿ ಮಂಗಳವಾರ ಸಂಜೆ ಇಬ್ಬರ ಮೃತದೇಹ ಪತ್ತೆಯಾಗಿದ್ದು, ಬುಧವಾರ ಮತ್ತಿಬ್ಬರ ಮೃತದೇಹ ಪತ್ತೆಯಾಗಿದೆ.
ಪತ್ತೆಯಾಗದ ನಾಲ್ವರು; ಮಂಗಳೂರಿನಲ್ಲಿ ಮೀನುಗಾರಿಕೆ ಸ್ಥಗಿತಗೊಳಿಸುವಂತೆ ಪ್ರತಿಭಟನೆ
ಈ ದುರಂತದಲ್ಲಿ ಒಟ್ಟು ನಾಲ್ವರು ಸಾವನ್ನಪ್ಪಿದ್ದು, ಉಳಿದ ಇಬ್ಬರು ಮೀನುಗಾರರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಮಂಗಳವಾರ ಬೊಕ್ಕಪಟ್ಟ ನಿವಾಸಿಗಳಾದ ಸುವರ್ಣ, ಪ್ರೀತಂ ಎನ್ನುವವರ ಮೃತದೇಹ ದೊರೆತಿತ್ತು. ಇಂದು ಚಿಂತನ್ ಹಾಗೂ ಹಸೈನಾರ್ ಎಂಬುವರ ಮೃತದೇಹ ದೊರೆತಿರುವುದಾಗಿ ತಿಳಿದುಬಂದಿದೆ. ಇಬ್ಬರ ಮೃತದೇಹವನ್ನು ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದೆ.
ಉಳ್ಳಾಲದ ಬೆಂಗರೆ ಪ್ರದೇಶದ ಸಮೀಪ ಸುಮಾರು 15 ನಾಟಿಕಲ್ ಮೈಲಿ ದೂರದಲ್ಲಿ ಸೋಮವಾರ ಮೀನುಗಾರಿಕಾ ಬೋಟ್ ತೆರಳಿದ್ದು, ಮಂಗಳವಾರ ಬೋಟ್ ಮುಳುಗಡೆಯಾಗಿರುವುದಾಗಿ ತಿಳಿದುಬಂದಿತ್ತು. ನಾಪತ್ತೆಯಾಗಿದ್ದ ಆರು ಮಂದಿಗಾಗಿ ನಡೆದ ತೀವ್ರ ಶೋಧದ ಬಳಿಕ ನಾಲ್ವರ ಮೃತದೇಹಗಳು ಪತ್ತೆಯಾಗಿವೆ.