ದಕ್ಷಿಣ ಕನ್ನಡದಲ್ಲಿ ಮತ್ತೆ ಡೆಂಗ್ಯೂ; ಇಬ್ಬರು ಬಲಿ
ಮಂಗಳೂರು, ಆಗಸ್ಟ್ 29: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ ಮತ್ತೆ ಕಾಣಿಸಿಕೊಂಡಿರುವುದು ಆತಂಕ ಸೃಷ್ಟಿಸಿದೆ. ಡೆಂಗ್ಯೂ ಜ್ವರದಿಂದ ಮತ್ತಿಬ್ಬರು ಮೃತಪಟ್ಟಿರುವುದು ತಿಳಿದುಬಂದಿದೆ.
ಒಬ್ಬ ಡೆಂಗ್ಯೂ ಜ್ವರದಿಂದ ಮೃತಪಟ್ಟರೆ, ಇನ್ನೋರ್ವ ಮಹಿಳೆ ಶಂಕಿತ ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದಾರೆ. ಮೃತಪಟ್ಟ ಇಬ್ಬರೂ ಮಂಗಳೂರು ಹೊರವಲಯದ ತೊಕ್ಕೊಟ್ಟು ನಿವಾಸಿಗಳು.
ಬಂಟ್ವಾಳದಲ್ಲಿ ಯುವತಿ ಸಾವು; ಡೆಂಗ್ಯೂ ಶಂಕೆ
ಡೆಂಗ್ಯೂ ಜ್ವರಕ್ಕೆ ಬಲಿಯಾದವರನ್ನು ತೊಕ್ಕೊಟ್ಟು ಕುಂಪಲ ನಿವಾಸಿ ಜಯ ಪ್ರಕಾಶ್ ಗಟ್ಟಿ (41) ಮತ್ತು ಚೆಂಬುಗುಡ್ಡೆ ನಿವಾಸಿ ಸುಮತಿ (36) ಎಂದು ಗುರುತಿಸಲಾಗಿದೆ. ಮೃತ ಜಯಪ್ರಕಾಶ್ ಅವರು ಡೆಂಗ್ಯೂ ಜ್ವರದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮತ್ತೋರ್ವ ಮೃತ ಮಹಿಳೆ ಸುಮತಿ ಅವರು ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು, ಬ್ಯಾಕ್ಟೀರಿಯಲ್ ಇನ್ಫೆಕ್ಷನ್ನಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಆದರೆ ಸುಮತಿ ಅವರ ಸಾವಿಗೆ ಡೆಂಗ್ಯೂ ಜ್ವರ ಕಾರಣ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಅವರಲ್ಲಿ ಡೆಂಗ್ಯೂ ಲಕ್ಷಣ ಇರಲಿಲ್ಲ. ಪ್ಲೇಟ್ಲೆಟ್ ಕೂಡ ಒಂದು ಲಕ್ಷಕ್ಕೂ ಹೆಚ್ಚಿತ್ತು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈಚೆಗೆ ಡೆಂಗ್ಯೂ ಪ್ರಕರಣ ಕಡಿಮೆಯಾಗಿತ್ತು. ಇದೀಗ ಮತ್ತೆ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಹಿಂದೆ ನಾಗೇಶ್ ಪಡು, ವೀಣಾ ನಾಯಕ್, ವಿದ್ಯಾರ್ಥಿನಿ ಶ್ರದ್ಧಾ ಅವರೂ ಡೆಂಗ್ಯೂನಿಂದ ಮೃತಪಟ್ಟಿದ್ದರು.