In pics: ಮನಸೂರೆಗೊಂಡ ನಿವೇದಿತಾ ಸಾಹಿತ್ಯ ಸಮ್ಮೇಳನ
ಯುವ ಬ್ರಿಗೇಡ್ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ 'ಸ್ವಾಮಿ ವಿವೇಕಾನಂದ ಅಕ್ಕ -ನಿವೇದಿತಾ ಸಾಹಿತ್ಯ ಸಮ್ಮೇಳನ'ಕ್ಕೆ ಭಾನುವಾರ ತೆರೆ ಎಳೆಯಲಾಯಿತು.
ಮಂಗಳೂರು, ಫೆಬ್ರವರಿ 13: ಯುವ ಬ್ರಿಗೇಡ್ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ 'ಸ್ವಾಮಿ ವಿವೇಕಾನಂದ ಅಕ್ಕ -ನಿವೇದಿತಾ ಸಾಹಿತ್ಯ ಸಮ್ಮೇಳನ'ಕ್ಕೆ ಭಾನುವಾರ ತೆರೆ ಎಳೆಯಲಾಯಿತು.[ಫೆ.11ರಿಂದ ಮಂಗ್ಳೂರಿನಲ್ಲಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ]
ಫೆಬ್ರವರಿ 11 ಮತ್ತು 12 ರಂದು ನೆಹರೂ ಮೈದಾನದಲ್ಲಿ ಮೊದಲ ಬಾರಿಗೆ ಸ್ವಾಮಿ ವಿವೇಕಾನಂದ ಅಕ್ಕ -ನಿವೇದಿತಾ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿತ್ತು. ಫೆಬ್ರವರಿ 11ರ ಅದ್ಧೂರಿ ಉದ್ಘಾಟನೆಯಿಂದ ಆರಂಭವಾಗಿ ಸಮಾರೋಪ ಸಮಾರಂಭದವರೆಗೆ ಸಾವಿರಾರು ಜನ ಸಮ್ಮೇಳನಕ್ಕೆ ಸಾಕ್ಷಿಯಾದರು. ಸಮ್ಮೇಳನದ ಆಕರ್ಷಕ ಮೆರವಣಿಗೆ, ವಿವೇಕಾನಂದರ ಚಿತ್ರಗಳ ಪ್ರದರ್ಶನ ಮನಸೂರೆಗೊಂಡವು.[ಮಂಗಳೂರು: ಧರಣಿ ನಿರತರ ಬಂಧನ; ಅನಿರ್ಧಿಷ್ಟಾವಧಿ ಜಿಲ್ಲಾ ಬಂದ್ಗೆ ಕರೆ]
ಪಲ್ಲಕ್ಕಿ ಉತ್ಸವ
ಆರಂಭದ ದಿನ ಸಭಾ ಕಾರ್ಯಕ್ರಮಕ್ಕೆ ಮುನ್ನ ಜಿಲ್ಲಾಧಿಕಾರಿ ಕಚೇರಿ ಬಳಿಯಿಂದ ವಿವೇಕಾನಂದ ಮತ್ತು ನಿವೇದಿತಾರ ಪ್ರಕಟಿತ ಸಾಹಿತ್ಯಗಳ ಪಲ್ಲಕ್ಕಿ ಉತ್ಸವದ ಮೆರವಣಿಗೆ ನಡೆಯಿತು. ಯುವ ಬ್ರಿಗೇಡ್ ಕಾರ್ಯಕರ್ತರು ಪಲ್ಲಕ್ಕಿ ಹೊತ್ತರು.
ಜಥಾಗೆ ಚಾಲನೆ
'ವಂದೇ ಮಾತರಂ' ಎಂದು ಬರೆದಿದ್ದ ಪತಾಕೆ ತೋರಿಸುವುದರೊಂದಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಜಾಥಾಗೆ ಚಾಲನೆ ನೀಡಿದರು. ಯುವಕರ ತಂಡ ಪಲ್ಲಕ್ಕಿಯನ್ನು ಹೊತ್ತು ಮೈದಾನದತ್ತ ಸಾಗಿತು.
ಬೆಳ್ಳಿ ರಥದಲ್ಲಿ ನರೇಂದ್ರ
ಮೆರವಣಿಗೆಯ ಮುಂಭಾಗದಲ್ಲಿ ವಿವೇಕಾನಂದರನ್ನು ಹೊತ್ತ ರಥ ಸಾಗುತ್ತಿದ್ದರೆ, ಯುವ ಸಮೂಹ ಸರತಿ ಸಾಲಿನಲ್ಲಿ ಸಾಗಿ ಸಮ್ಮೇಳನಕ್ಕೆ ಮತ್ತಷ್ಟು ಮೆರುಗು ನೀಡಿತು. ವಿವೇಕಾನಂದರ ಪುತ್ಥಳಿಯ ಹಿಂದೆ ಭಾರತ ಮಾತೆಯ ಬೃಹತ್ ಫೊಟೋವನ್ನೂ ಇಡಲಾಗಿತ್ತು.
ವಿವೇಕಾನಂದ ಇನ್ ಕೊಲಾಜ್
ಸಮ್ಮೇಳನದಲ್ಲಿ 21 ಅಡಿ ಎತ್ತರ ಮತ್ತು 16 ಅಡಿ ಅಗಲ ವಿಸ್ತೀರ್ಣದ ಸ್ವಾಮಿ ವಿವೇಕಾನಂದರ ಬೃಹತ್ ಕೊಲಾಜ್ ನೆರೆದವರ ಗಮನ ಸಳೆಯಿತು.
ಮೊಳಗಿದ ಶಂಖನಾದ
ಸಮಾಜವನ್ನು ಬಡಿದೆಬ್ಬಿಸಲು ಬೇಕಾದ ಚಂಡೆ, ಶಂಖನಾದ, ಜಾಗಟೆ, ನಗಾರಿ ವಾದ್ಯಗಳು ಮೆರವಣಿಗೆಯಲ್ಲಿ ಮೇಳೈಸಿದವು. ವಾದ್ಯಗಳ ಆಕರ್ಷಕ ವಾದನ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗನ್ನು ನೀಡಿತು.
ಪುಷ್ಪ ನಮನ
ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಲಾಯಿತು. ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ, ಉದ್ಯಮಿ ಸಂಧ್ಯಾ ಪೈ ಮೊದಲಾದವರು ಪುಷ್ಪ ನಮನ ಸಲ್ಲಿಸಿದರು.
ನಿವೇದಿತಾ ಗುಣಗಾನ
ಬರೋಡಾ ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ನಿಖಿಲೇಶ್ವರನಂದಜೀ ಮಹಾರಾಜ್ ದೀಪ ಬೆಳಗಿಸಿ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಸ್ವಾಮಿ ವಿವೇಕಾನಂದರಂತೆಯೇ ಸೋದರಿ ನಿವೇದಿತಾ ಕೂಡ ದೇಶಕ್ಕೆ ಮಹತ್ತರ ಕೊಡುಗೆಯನ್ನು ನೀಡಿದ್ದು, ಅವರ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವಂತೆ ಯುವ ಜನತೆಗೆ ಕರೆ ನೀಡಿದರು.
ವಿವೇಕಾನಂದರ ಪುಸ್ತಕ ಓದಿ
ಸಾಹಿತ್ಯದ ಪ್ರಚಾರವಾದಂತೆ ಜಾಗೃತಿಯೂ ಹೆಚ್ಚಾಗುತ್ತದೆ. ಇದರಿಂದ ಜನರಲ್ಲಿ ಸೇವಾ ಮನೋಭಾವನೆ ಬೆಳೆಯುತ್ತದೆ. ಆದ್ದರಿಂದ ಯುವ ಜನಾಂಗ ವಿವೇಕಾನಂದರ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕೆಂದು ನಿಖಿಲೇಶ್ವರನಂದಜೀ ಹೇಳಿದರು.
ವಿವೇಕ ಮೀರಿದ ಸಾಹಿತ್ಯವಿಲ್ಲ
ಗದಗ ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದಜೀ ಮಾತನಾಡಿ, ಬರಹಗಳೆಲ್ಲವೂ ಸಾಹಿತ್ಯ ಆಗಲಾರದು. ಸಾಹಿತ್ಯವೆಂದರೆ ಮೌಲ್ಯಗಳನ್ನು ಎತ್ತಿ ಹಿಡಿಯುವಂತಾಗಬೇಕು. ಮಾನಸಿಕ ಸಂತೃಪ್ತಿ ನೀಡುವುದೇ ಸಾಹಿತ್ಯ. ಆದ್ದರಿಂದ ವಿವೇಕಾನಂದರನ್ನು ಮೀರಿದ ಸಾಹಿತ್ಯ ಬೇರೆ ಇಲ್ಲ ಎಂದರು.
ಪುಸ್ತಕ ಬಿಡುಗಡೆ
ಸಮ್ಮೇಳನದಲ್ಲಿ ಸೋದರಿ ನಿವೇದಿತಾ ಪ್ರತಿಷ್ಠಾನದ ಪ್ರಿಯಾ ಶಿವಮೊಗ್ಗ ಅವರು ಬರೆದ 'ಗುರು ಶಿಷ್ಯೆ' ಹಾಗೂ ನಿತ್ಯಾನಂದ ವಿವೇಕವಂಶಿ ಅವರು ಬರೆದ 'ಸಾಗರದಾಚೆ ವಿವೇಕಾನಂದ' ಪುಸ್ತಕ ಬಿಡುಗಡೆಗೊಂಡಿತು.
ನರೇಂದ್ರ ಜೀವನ ಅನಾವರಣ
ಸಾಹಿತ್ಯ ಸಮ್ಮೇಳದಲ್ಲಿ ಸ್ವಾಮಿ ವಿವೇಕಾನಂದರ ಜೀವನಕ್ಕೆ ಸಂಬಂಧಿಸಿದ ಪ್ರತಿಕೃತಿಗಳು, ಭಾವಚಿತ್ರಗಳು, ಭಿತ್ತಿ ಪತ್ರಗಳ ಪ್ರದರ್ಶನ ನಡೆಯಿತು. ಚಿತ್ರದಲ್ಲಿ ಅತಿಥಿಗಳು 'ದಿ ಆರ್ಟ್ ಇನ್ಸ್ಟಿಟ್ಯೂಟ್ ಆಫ್ ಚಿಕಾಗೋ' ಪ್ರತಿಕೃತಿಯನ್ನು ಗಮನಿಸುತ್ತಿದ್ದಾರೆ.