ಮಂಗ್ಳೂರು: ಕೋಮು ಸೌಹಾರ್ದತೆ ಕೆಡಿಸಲು ತುಳಸಿ ಹಬ್ಬವೇ ಬೇಕಿತ್ತಾ?
ಮಂಗಳೂರು, ನವೆಂಬರ್, 24 : ಕೊರಗಜ್ಜ ಸೇವಾ ಸಮಿತಿಯ ಕಟ್ಟಡದ ಕಿಟಕಿಗೆ ಬೈಕ್ ನಲ್ಲಿ ಬಂದ ಆಗಂತುಕರಿಬ್ಬರು ಕಲ್ಲೆಸೆದು ಕಿಟಕಿ ಗಾಜನ್ನು ಹಾನಿಗೈದ ಘಟನೆ ಉಳ್ಳಾಲ ಸಮೀಪದ ತೊಕ್ಕೊಟ್ಟು ಟಿ.ಸಿ.ರೋಡ್ ಬಳಿ ಸೋಮವಾರ ರಾತ್ರಿ ನಡೆದಿದೆ.
ತೊಕ್ಕೊಟ್ಟು ಒಳಪೇಟೆಯಿಂದ ಉಳ್ಳಾಲ ದರ್ಗಾ ಸಂಪರ್ಕಿಸುವ ಟಿ.ಸಿ.ರೋಡ್ ಸಂಪೂರ್ಣ ಜನ ನಿಬಿಡ ಪ್ರದೇಶವಾಗಿದ್ದರೂ ಅಲ್ಲಿ ಯಾವಾಗಲೂ ಜನರ ಸಂಚಾರ ಇದ್ದೇ ಇರುತ್ತದೆ. ಆದರೆ ತುಳಸಿ ಹಬ್ಬದ ಪ್ರಯುಕ್ತ ಸೋಮವಾರ ರಸ್ತೆಯಲ್ಲಿ ಯಾರು ಇಲ್ಲದ್ದನ್ನು ಖಾತರಿ ಪಡಿಸಿಕೊಂಡ ದುಷ್ಕರ್ಮಿಗಳು ಕೋಮು ಸೌಹಾರ್ದತೆ ಕೆಡಿಸಲು ಕಲ್ಲೆಸೆತ ನಡೆಸಿದ್ದಾರೆ ಎನ್ನಲಾಗಿದೆ.[ಮಂಗಳೂರಲ್ಲಿ ಬ್ಯಾಂಕ್ ದರೋಡೆ, 5 ಕೋಟಿ ಲೂಟಿ]
ಎರಡು ತಂಡಗಳ ಮುಖಂಡರ ಭೇಟಿ :
ಘಟನೆ ನಡೆಯುತ್ತಿದ್ದಂತೆ ಎರಡು ಕೋಮುಗಳ ಜನರು ಘಟನಾ ಸ್ಥಳಕ್ಕೆ ಆಗಮಿಸಿದ್ದು, ಮುಖಂಡರಾದ ಚಂದ್ರಹಾಸ್ ಉಳ್ಳಾಲ್, ಭಗವಾನ್ ದಾಸ್, ಭರತ್ ಸೇರಿದಂತೆ ಉಳ್ಳಾಲ ನಗರಸಭಾ ಸದಸ್ಯ ಫಾರೂಕ್ ಯು.ಎಚ್ ಆಗಮಿಸಿ ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಮಾತುಕತೆ ನಡೆಸಿದರು.[ಠಾಣೆಗೆ ನುಗ್ಗಿ ಪೊಲೀಸರಿಗೆ ರಿವಾಲ್ವರ್ ತೋರಿಸಿದ್ರು]
ಬಳಿಕ ಸ್ಥಳಕ್ಕೆ ಆಗಮಿಸಿ ಘಟನೆ ಪರಿಶೀಲಿಸಿದ ಎಸಿಪಿ ಕಲ್ಯಾಣ್ ಶೆಟ್ಟಿ, ಉಳ್ಳಾಲ ಇನ್ಸ್ ಪೆಕ್ಟರ್ ಸವಿತ್ರ ತೇಜ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.