ಆಗಸ್ಟ್ 10 ರಂದು ಮತ್ತೊಮ್ಮೆ ತುಳು ಭಾಷೆ ಮಾನ್ಯತೆಗಾಗಿ ಟ್ವೀಟ್ ಅಭಿಯಾನ
ಮಂಗಳೂರು, ಜುಲೈ.30: ತುಳುವನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆ ಹೋರಾಟಗಳು ಮುಂದುವರಿಯುತ್ತಲೇ ಇದೆ. ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವಂತೆ 2001ರಲ್ಲಿ ಒತ್ತಾಯಿಸಲಾಗಿತ್ತು.
ನಂತರ 2002ರಲ್ಲಿ ಮತ್ತೆ 14 ಭಾಷೆಗಳು ಇದೇ ಬೇಡಿಕೆ ಇಟ್ಟಿದ್ದರಿಂದ ಕೇಂದ್ರ ಸರ್ಕಾರ ಸಮಿತಿ ರಚಿಸಿ ಸಂವಿಧಾನದ ಎಂಟನೇ ಪರಿಚ್ಛೇದ ಸೇರ್ಪಡೆಯ ಕೆಲವು ನಿಯಮಾವಳಿಗಳಿಗೆ ಬದಲಾವಣೆ ತರಲಾಗಿತ್ತು. ಈ ಹಿನ್ನಲೆಯಲ್ಲಿ ಈಗ ತುಳು ಭಾಷೆ ಸಂವಿಧಾನದ ಎಂಟನೇ ಪರಿಚ್ಛೇದ ಸೇರ್ಪಡೆಗೆ ಮೊದಲು ರಾಜ್ಯದ ಅಧಿಕೃತ ಭಾಷೆ ಎಂಬ ಮಾನ್ಯತೆಯನ್ನು ತುಳು ಭಾಷೆ ಪಡೆಯಬೇಕಾಗಿದೆ.
ತುಳು ಚಿತ್ರರಂಗ ರಾಜಕೀಯದಿಂದ ದೂರ ಉಳಿಯಲು ಕಾರಣಗಳೇನು?
ತುಳು ಭಾಷೆಯ ಉಳಿವಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಸೇರ್ಪಡೆಯಾಗುವವರು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ನಡುವೆ ಮತ್ತೊಮ್ಮೆ ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಲು ಆಗ್ರಹಿಸಿ ತುಳು ಸಂಘಟನೆಗಳು ಮತ್ತೊಮ್ಮೆ ಟ್ವೀಟ್ ಅಭಿಯಾನ ಕೈಗೊಳ್ಳಲಿದ್ದಾರೆ.
ಇದೇ ಆಗಸ್ಟ್ ತಿಂಗಳ 10 ರಂದು ಮತ್ತೊಮ್ಮೆ ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಲು ಟ್ವೀಟರ್ ಅಭಿಯಾನ ನಡೆಯಲಿದೆ. ಆದರೆ ಈ ಬಾರಿಯ ಅಭಿಯಾನ ಸ್ವಲ್ಪಮಟ್ಟಿಗೆ ವಿಭಿನ್ನವಾಗಿ ನಡೆಯಲಿದೆ.
ಕರ್ನಾಟಕ ಹಾಗೂ ಕೇರಳ ಎರಡು ಸರಕಾರಗಳು ಕೂಡ ತುಳು ಭಾಷೆಗೆ ರಾಜ್ಯ ಮಾನ್ಯತೆ ನೀಡಬೇಕೆಂದು ಅಭಿಯಾನದ ಮೂಲಕ ಆಗ್ರಹಿಸುತ್ತಿದ್ದಾರೆ. ತುಳು ಭಾಷೆಗೆ ಸರಕಾರದಿಂದ ಸಿಗಬೇಕಾದ ಮಾನ್ಯತೆ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳು ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲದು ಎಂಬ ನೆಲೆಯಲ್ಲಿ ಟ್ವೀಟ್ ಅಭಿಯಾನವನ್ನು ಮತ್ತೊಮ್ಮೆ ಕೈಗೆತ್ತಿಕೊಳ್ಳಲಾಗಿದೆ.
ಸರಕಾರಕ್ಕೆ ಸಂಬಂಧಿಸಿದ ಹೆಚ್ಚಿನ ಅಧಿಕಾರಿಗಳು, ಜನಪ್ರತಿನಿಧಿಗಳು, ಅಧಿಕಾರಿಗಳು ಟ್ವಿಟ್ಟರ್ನಲ್ಲಿ ಖಾತೆ ಹೊಂದಿದ್ದಾರೆ. ಇಂದಿನ ಯುವ ಪೀಳಿಗೆ ಕೂಡ ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದೆ. ಇವೆರಡರ ಕೊಂಡಿಯಾಗಿ ಈ ಅಭಿಯಾನ ಕೆಲಸ ಮಾಡಲಿದೆ.
ಟ್ವೀಟ್ ಅಭಿಯಾನ ಆಗಸ್ಟ್ 10ರಂದು ಬೆಳಗ್ಗೆ 6 ಗಂಟೆಯಿಂದ ರಾತ್ರಿ 11.59ರ ವರೆಗೆ ನಡೆಯಲಿದೆ. "#TuluOfficialinKA_KL" ಎಂಬ ಹ್ಯಾಶ್ಟ್ಯಾಗ್ ಮೂಲಕ ಟ್ವೀಟ್ ಅಭಿಯಾನ ನಡೆಯಲಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯ ತುಳುವರು ಮಾತ್ರವಲ್ಲದೆ ದೇಶ-ವಿದೇಶಗಳಲ್ಲಿ ನೆಲೆಸಿರುವ ತುಳು ಭಾಷಿಗರು ಕೂಡ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ.