ತುಂಬೆ ಅಣೆಕಟ್ಟಿನಲ್ಲಿ ತುಸು ಏರಿದ ನೀರಿನ ಮಟ್ಟ
ಮಂಗಳೂರು ಜೂನ್ 08: ದಕ್ಷಿಣ ಕನ್ನಡ ಜಿಲ್ಲೆಯ ಕೆಲಭಾಗದಲ್ಲಿ ಇತ್ತೀಚೆಗೆ ಅಲ್ಪ ಪ್ರಮಾಣದಲ್ಲಿ ಮಳೆಯಾದ ಕಾರಣ ಮಂಗಳೂರು ಮಹಾನಗರ ವ್ಯಾಪ್ತಿಗೆ ನೀರುಣಿಸುವ ತುಂಬೆ ಅಣೆಕಟ್ಟಿನಲ್ಲಿ ನೀರಿನ ಮಟ್ಟ ತುಸು ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ನಾಗರಿಕರು ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ. ಅಣೆಕಟ್ಟಿನಲ್ಲಿ ನೀರಿನ ಮಟ್ಟ 12 ಸೆ.ಮೀ ಏರಿಕೆಯಾಗಿದೆ.
ಸುಬ್ರಹ್ಮಣ್ಯ ಭಾಗದಲ್ಲಿ ಕೆಲದಿನಗಳಿಂದ ಮಳೆಯಾಗುತ್ತಿರುವುದರಿಂದ ಕುಮಾರಧಾರಾ ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದು, ನೆಕ್ಕಿಲಾಡಿ ಡ್ಯಾಂನಿಂದ ಹೊರಕ್ಕೆ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ನೇತ್ರಾವತಿ ನದಿಯಲ್ಲಿ ಒಳ ಹರಿವು ಕಂಡುಬಂದಿದೆ. ಈ ನಡುವೆ ಎಎಂಆರ್ ಡ್ಯಾಂನಲ್ಲಿ ಹೂಳು ತೆರವು ಮಾಡಿದ್ದು, ಅಲ್ಲಿಂದ ನೀರು ಹೊರ ಹರಿಯಲಾರಂಭಿಸಿ ಬನ್ಪುಗುಂಡಿಯಲ್ಲಿ ತುಂಬಿಕೊಂಡಿತ್ತು. ಮಳೆಯಾಗುತ್ತಿರುವ ಕಾರಣ ಈ ನೀರು ಒಂದಷ್ಟು ಪ್ರಮಾಣದಲ್ಲಿ ತುಂಬೆ ಡ್ಯಾಂಗೆ ಹರಿದು ಬಂದಿದೆ.
ಬತ್ತಿದ ಉಡುಪಿಯ ಜೀವನದಿ; ಇನ್ನೆಷ್ಟು ದಿನ ಸಿಗಬಹುದು ನೀರು?
ಅಣೆಕಟ್ಟಿನಲ್ಲಿ ನೀರಿನ ಮಟ್ಟದಲ್ಲಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜಾರಿಗೆ ತರಲಾಗಿದ್ದ ನೀರಿನ ಪಡಿತರ ಪದ್ಧತಿಯನ್ನು ಪರಿಷ್ಕರಿಸಲು ಅಧಿಕಾರಿಗಳು ನಿರ್ಧರಿದ್ದಾರೆ. ಮನಪಾ ವ್ಯಾಪ್ತಿಯ ಎಲ್ಲ ವಾರ್ಡ್ ಗಳಿಗೆ ಈ ಹಿಂದೆ ಪೂರೈಕೆ ಮಾಡುತ್ತಿರುವ ರೀತಿಯಲ್ಲಿ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ.
ಸಾರ್ವಜನಿಕರು ತಮ್ಮ ಮನೆಗಳಲ್ಲಿರುವ ಕೈ ತೋಟಗಳಿಗೆ, ವಾಹನ ತೊಳೆಯಲು, ಇನ್ನಿತರ ಕೆಲಸಗಳಿಗೆ ಕುಡಿಯುವ ನೀರನ್ನು ಬಳಸಬಾರದು ಹಾಗೂ ನೀರನ್ನು ಪೋಲು ಮಾಡದೆ ಮಿತವಾಗಿ ಬಳಸಿ ಪಾಲಿಕೆಯೊಂದಿಗೆ ಸಹಕರಿಸುವಂತೆ ಪಾಲಿಕೆ ಅಧಿಕಾರಿಗಳು ಜನರಲ್ಲಿ ಮನವಿ ಮಾಡಿದ್ದಾರೆ.