ಭಾರೀ ಮಳೆಯ ಮಧ್ಯೆಯೂ ಬೆಳ್ತಂಗಡಿಯ ದಿಡುಪೆಯಲ್ಲಿ ದೈವ ಪವಾಡ
ಮಂಗಳೂರು, ಆಗಸ್ಟ್ 13: ದಕ್ಷಿಣ ಕನ್ನಡ ಸೇರಿದಂತೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿದ ಭಾರೀ ಮಳೆಗೆ ಅನಾಹುತಗಳು ಸಂಭವಿಸಿವೆ. ಬೆಟ್ಟದ ಮೇಲಿಂದ ಹರಿದು ಬಂದ ಭಾರೀ ಪ್ರಮಾಣದ ನೀರು ನದಿ ಪಾತ್ರವನ್ನೇ ಬದಲಿಸಿದ ಪರಿಣಾಮ ಜನವಸತಿ ಪ್ರದೇಶಗಳು ನಾಶಗೊಂಡಿವೆ. ಸೂರು ಕಳೆದುಕೊಂಡ ನೂರಾರು ಜನರು ಸಂತ್ರಸ್ತರಾಗಿದ್ದಾರೆ. ಈ ಅನಾಹುತಗಳ ನಡುವೆ ದೈವ ವಿಸ್ಮಯ ಒಂದು ಬೆಳಕಿಗೆ ಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಹಲವೆಡೆ ಪ್ರಾಕೃತಿಕ ವಿಕೋಪ, ನೆರೆಹಾವಳಿ ಬಳಿಕ ಕೆಲ ವಿಸ್ಮಯಗಳು ಬೆಳಕಿಗೆ ಬರತೊಡಗಿವೆ. ತುಳುನಾಡಿನ ದೈವದ ಶಕ್ತಿಯನ್ನು ಎತ್ತಿ ತೋರಿಸುತ್ತಿದೆ. ಮಳೆ ಆರ್ಭಟಕ್ಕೆ ಮನೆ, ಕೃಷಿ ಭೂಮಿ ಕೊಚ್ಚಿ ಹೋದರೂ ತುಳುನಾಡಿನ ಕಾರಣಿಕ ಶಕ್ತಿಯ ದೇವಸ್ಥಾನಕ್ಕೆ ಕಿಂಚಿತ್ತೂ ಹಾನಿಯಾಗಿಲ್ಲ ಎನ್ನುವುದು ಆಶ್ಚರ್ಯಕ್ಕೆ ಕಾರಣವಾಗಿದೆ.
ಕರಾವಳಿಯ ದೈವಶಕ್ತಿಗೆ ಬೆಚ್ಚಿಬಿದ್ದ ಕಳ್ಳರು: ಕದ್ದ ಆಭರಣ ವಾಪಸ್ ತಂದಿಟ್ಟರು
ಬೆಳ್ತಂಗಡಿ ತಾಲೂಕಿನ ದಿಡುಪೆಯ ಪ್ರದೇಶದಲ್ಲಿ ನೆರೆ ಹಾವಳಿಗೆ ಗುಡ್ಡ ಕುಸಿದು, ಭಾರೀ ಪ್ರಮಾಣದಲ್ಲಿ ಮಣ್ಣು ಮರಗಳ ಜೊತೆಗೆ ನದಿಯಲ್ಲಿ ತೇಲಿ ಬಂದ ಪರಿಣಾಮ ಇಲ್ಲಿರುವ ಸೇತುವೆ ಹಾಗೂ ಅಕ್ಕಪಕ್ಕದಲ್ಲಿರುವ ಮನೆಗಳನ್ನು ಮತ್ತು ಕೃಷಿ ಭೂಮಿಗಳನ್ನು ಬಿಡದೆ ಸರ್ವನಾಶ ಮಾಡಿದೆ.
ಆದರೆ, ಸ್ಥಳದಲ್ಲಿದ್ದ ತುಳುನಾಡಿನ ದೈವಗಳಾದ ರಕ್ತೇಶ್ವರಿ ಹಾಗೂ ಗುಳಿಗನ ಸಾನ್ನಿಧ್ಯವನ್ನು ಒಂದಿಂಚೂ ಮುಟ್ಟದೆ ಮುಂದಕ್ಕೆ ಸಾಗಿದೆ. ಸ್ಥಳೀಯರಲ್ಲಿ ಇದು ಆಶ್ಚರ್ಯವನ್ನು ತಂದಿದ್ದು, ದೈವೀ ಪವಾಡಕ್ಕೆ ಜನರು ಬೆರಗಾಗಿದ್ದಾರೆ. ಇದನ್ನು ನೋಡಲು ನೂರಾರು ಜನ ರಕ್ತೇಶ್ವರಿ ಹಾಗೂ ಗುಳಿಗನ ಸಾನ್ನಿಧ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ತನ್ನೆದುರು ಬಂದ ಎಲ್ಲವನ್ನೂ ಕೊಚ್ಚಿಕೊಂಡು ಸಾಗಿದ ಪ್ರವಾಹವು ದೈವ ಸಾನ್ನಿಧ್ಯವನ್ನು ಮುಟ್ಟದಿರಲು ಕಾರಣ ಏನು ಎಂಬ ಕುತೂಹಲ ಹಲವರನ್ನು ಕಾಡುತ್ತಿದೆ.