ಪಾಲೆ ಮರದ ಕಷಾಯ ಕುಡಿದು ಆಟಿ ಅಮಾವಾಸ್ಯೆ ಆಚರಿಸಿದ ಕರಾವಳಿಗರು
ಮಂಗಳೂರು , ಜುಲೈ 23: ಕರಾವಳಿಯಲ್ಲಿ ಇಂದು 'ಆಟಿ ಅಮಾವಾಸ್ಯೆ'; ಈ ಪ್ರಯುಕ್ತ ಕರಾವಳಿಯಾದ್ಯಂತ ಜನರು ಆಟಿ ಕಷಾಯ ಸೇವನೆ ಮಾಡಿದರು. ಆಟಿ ಅಮಾವಾಸ್ಯೆ ಪ್ರಯುಕ್ತ ಕರಾವಳಿಯ ನಾನಾ ಶಿವ ಕ್ಷೇತ್ರಗಳಲ್ಲಿ ಭಾನುವಾರ ತೀರ್ಥ ಸ್ನಾನ ಸಂಭ್ರಮ- ಸಡಗರದೊಂದಿಗೆ ನಡೆಯಿತು.
ಐತಿಹಾಸಿಕ ಹಿನ್ನೆಲೆಯ ಮಹತೋಭಾರ ಕಾರಿಂಜ ಶ್ರೀಕಾರಿಂಜೇಶ್ವರ ದೇವಸ್ಥಾನ ಮತ್ತು ನರಹರಿ ಪರ್ವತ ಶ್ರೀ ಸದಾಶಿವ ದೇವಸ್ಥಾನಗಳಲ್ಲಿ ತೀರ್ಥಸ್ನಾನ ವಿಶೇಷ ಸ್ಥಾನ ಪಡೆದಿದ್ದು, ಭಾನುವಾರ ನಸುಕಿನ ಜಾವದಿಂದಲೇ ಇಲ್ಲಿಗೆ ಊರ- ಪರವೂರ ಅಸಂಖ್ಯಾತ ಭಕ್ತಾದಿಗಳು ಬಂದು ತೀರ್ಥಸ್ನಾನ ಮಾಡಿದರು.
ಸಮುದ್ರ ಮಟ್ಟದಿಂದ ಸಾವಿರಾರು ಅಡಿ ಎತ್ತರದಲ್ಲಿರುವ ಈ ಕ್ಷೇತ್ರಗಳ ಪವಿತ್ರ ತೀರ್ಥಕೆರೆಗಳಲ್ಲಿ ಮಿಂದು ದೇವರ ದರ್ಶನ ಪಡೆದರೆ ಸಕಲ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎನ್ನುವುದು ಭಕ್ತರ ಅನಾದಿ ಕಾಲದ ನಂಬಿಕೆ. ಹೀಗಾಗಿ ಪ್ರತಿ ವರ್ಷದಂತೆ ಈ ವರ್ಷವೂ ಭಕ್ತರು ಸರತಿ ಸಾಲಿನಲ್ಲಿ ನಿಂತು ತೀರ್ಥ ಸ್ನಾನದಲ್ಲಿ ಪಾಲ್ಗೊಂಡರು. ಬಳಿಕ ದೇವರ ದರ್ಶನ ಪಡೆದರು.
ಕಾರಿಂಜದಲ್ಲಿ ತೀರ್ಥಸ್ನಾನ
ಕಾರಿಂಜ ಶ್ರೀ ಮಹಾತೋಭಾರ ಕಾರಿಂಜೇಶ್ವರ ದೇವಸ್ಥಾನದಲ್ಲೂ ತೀರ್ಥಸ್ನಾನ ನಡೆಯಿತು. ಐತಿಹಾಸಿಕ ಹಿನ್ನೆಲೆಯ ಕಾರಣಿಕ ಕ್ಷೇತ್ರವಾಗಿರುವ ಇಲ್ಲಿನ ಗದಾತೀರ್ಥ, ಉಂಗುಷ್ಠ ತೀರ್ಥ ಹಾಗೂ ಜಾನು ತೀರ್ಥಗಳೆಂಬ ಕೆರೆಗಳಲ್ಲಿ ಭಕ್ತರು ನೀರಿಗೆ ತರ್ಪಣ ಮಾಡಿ ತೀರ್ಥ ಸ್ನಾನ ಮಾಡಿದರು.
ನಸುಕಿನಿಂದಲೇ ಊರು ಹಾಗೂ ದೂರದೂರಿನಿಂದ ಭಕ್ತರು ತಂಡೋಪತಂಡವಾಗಿ ಬಂದು ಈ ತೀರ್ಥ ಕೆರೆಗಳಲ್ಲಿ ಮಿಂದು, ಬಳಿಕ ಸರತಿ ಸಾಲಿನಲ್ಲಿ ಒಂದೊಂದೇ ಮೆಟ್ಟಲೇರುತ್ತಾ ಶಿವ-ಪಾರ್ವತಿಯರ ದರ್ಶನ ಪಡೆದರು.
ಹಾಲೆ ಮರದ ಕಷಾಯವೇ ವಿಶೇಷ
ತುಳುನಾಡಿನ ಜಾನಪದ ಸಾಂಸ್ಕೃತಿಕ ಆಚರಣೆಗಳಲ್ಲಿ ಆಟಿ (ಆಷಾಢ) ತಿಂಗಳಿಗೆ ವಿಶಿಷ್ಟ ರೀತಿಯ ಮಾನ್ಯತೆ ಇದೆ. ಆಟಿ ತಿಂಗಳಲ್ಲಿ ಹಾಲೆ ಮರದ ತೊಗಟೆಯ ಕಷಾಯ ಕುಡಿಯುವುದು ಕರಾವಳಿ ಜನರ ಸಂಪ್ರದಾಯ. ಈ ಮರಕ್ಕೆ ಮಲೆನಾಡಿನಲ್ಲಿ ಪಾಲೆ, ಅಂಕೋಳಿ ಎನ್ನುತ್ತಾರೆ.
ಕಷಾಯ ತೆಗೆಯಲೂ ಸಂಪ್ರದಾಯವಿದೆ
ಆಟಿ ಅಮಾವಾಸ್ಯೆಯ ದಿನದಂದು ಸೂರ್ಯೋದಯಕ್ಕೂ ಮುನ್ನ ಹಾಲೆಮರದ ತೊಗಟೆಯನ್ನು ಬಿಳಿಕಲ್ಲಿನಿಂದ ಜಜ್ಜಿ ತೆಗೆದು ತೊಗಟೆ ತರಲಾಗುತ್ತದೆ. ತೊಗಟೆಯನ್ನು ಜಜ್ಜಿ ರಸ ತೆಗೆದು ಕರಿಮೆಣಸು, ಬೆಳ್ಳುಳ್ಳಿ, ಓಮ ಸೇರಿಸಿ ಅರೆದು ಮನೆಮಂದಿಯೆಲ್ಲಾ ಖಾಲಿ ಹೊಟ್ಟೆಯಲ್ಲಿ ಸೇವಿಸುವ ಸಂಪ್ರದಾಯವಿದೆ.
ಔಷಧೀಯ ಗುಣಗಳ ಆಗರ
ಮರಕ್ಕೆ ಆಟಿ ತಿಂಗಳ ಅಮಾವಾಸ್ಯೆಯಂದು ವಿಶೇಷ ಔಷಧಿ ಗುಣ ಬರುತ್ತದೆ ಎಂಬ ನಂಬಿಕೆ. ಹಾಲೆಮರದ ತೊಗಟೆಯ ರಸ ಸೇವಿಸಿದರೆ ಹೊಟ್ಟೆನೋವು, ಕಫ ಮತ್ತಿತರೆ ಕಾಯಿಲೆಗಳು ಒಂದು ವರ್ಷ ಬರುವುದಿಲ್ಲ ಎಂಬ ನಂಬಿಕೆ ಇದೆ.
ಹೀಗೆ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಕರಾವಳಿ ಜನರು ಆಟಿ ಅಮಾವಾಸ್ಯೆ ದಿನದಂದು ಸಾಮೂಹಿಕವಾಗಿ ಕಷಾಯ ಸೇವಿಸುವ ಪದ್ಧತಿ ಬೆಳೆದು ಬಂದಿದೆ. ಔಷಧೀಯ ಕ್ಷೇತ್ರದಲ್ಲಿ ಎಷ್ಟೆ ಬದಲಾವಣೆಗಳಾದರೂ ಹಾಲೆಮರದ ತೊಗಟೆ ರಸದ ಕುರಿತು ಜನರ ನಂಬಿಕೆ ಬದಲಾಗದೆ ಸಾಮಾಜಿಕ, ಧಾರ್ಮಿಕವಾಗಿ ತನ್ನದೇ ಆದ ಸ್ಥಾನ ಉಳಿಸಿಕೊಂಡಿದೆ.
ಕರಾವಳಿಗೂ-ಮಲೆನಾಡಿಗೂ ನಂಟು
ಕರಾವಳಿಗೂ ಮತ್ತು ಮಲೆನಾಡಿಗೂ ಅನನ್ಯ ಸಂಬಂಧವಿದ್ದು, ಕರಾವಳಿ ಜಿಲ್ಲೆಗಳಲ್ಲಿ ನಡೆಯುವ ಪ್ರತಿ ಹಬ್ಬಹರಿದಿನಗಳು ಮಲೆನಾಡಿನಲ್ಲಿ ನಡೆಯುವುದು ಸಾಮಾನ್ಯವಾಗಿದೆ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳನ್ನು ಪಶ್ಚಿಮಘಟ್ಟಗಳು ವಿಭಾಗಿಸಿದ್ದು ಕರಾವಳಿ ಹಬ್ಬಹರಿದಿನಗಳನ್ನು ಆಚರಿಸುವ ಜನರು ಮಲೆನಾಡಿನಲ್ಲಿಯೂ ಇದ್ದಾರೆ.
ಹಳ್ಳಿ ಆಹಾರಗಳೇ ವಿಶೇಷ
ಆಟಿ ತಿಂಗಳು ಮಳೆಗಾಲವಾದ್ದರಿಂದ ಜನರಿಗೆ ಕೆಲಸ ಇಲ್ಲದೆ ಕೈಯಲ್ಲಿ ಹಣ ಇಲ್ಲದಂತಾಗುತ್ತದೆ. ಆ ಸಂದರ್ಭ ಮರಗೆಸದ ಎಲೆ, ಕಳಿಲೆ, ಹಲಸಿನಬೀಜ ಮೊದಲಾದ ಹಳ್ಳಿಯಲ್ಲಿ ಸಿಗುವ ಆಹಾರವನ್ನು ಸೇವಿಸುತ್ತಾರೆ. ಆಟಿ ಅಮವಾಸ್ಯೆಯ ದಿನ ಹೀಗೆ ಹಳ್ಳಿಯಲ್ಲಿ ಸಿಗುವ ವಸ್ತುಗಳಿಂದಲೇ ವಿಶೇಷ ಭಕ್ಷ್ಯಗಳನ್ನು ತಯಾರಿಸುತ್ತಾರೆ.