ಮಂಗಳೂರಿನಲ್ಲಿ ಮಗುಚಿಬಿದ್ದ ಲಾರಿ: ಚಾಲಕ ಸಾವು
ಚಾಲಕನ ನಿಯಂತ್ರಣ ತಪ್ಪಿ ಲಾರಿ ಸೇತುವೆ ಮೇಲೆ ಮಗುಚಿ ಬಿದ್ದ ಪರಿಣಾಮ ಚಾಲಕ ಹೊಳೆಗೆ ಬಿದ್ದು ಮೃತಪಟ್ಟ ದಾರುಣ ಘಟನೆ ಇಂದು ಕಾಞಂಗಾಡ್- ಕಾಸರಗೋಡು ರಾಜ್ಯ ಹೆದ್ದಾರಿಯ ಚಂದ್ರಗಿರಿ ಸೇತುವೆ ಮೇಲೆ ನಡೆದಿದೆ.
ಮಂಗಳೂರು, ಏಪ್ರಿಲ್ 22: ಚಾಲಕನ ನಿಯಂತ್ರಣ ತಪ್ಪಿ ಲಾರಿ ಸೇತುವೆ ಮೇಲೆ ಮಗುಚಿ ಬಿದ್ದ ಪರಿಣಾಮ ಚಾಲಕ ಹೊಳೆಗೆ ಬಿದ್ದು ಮೃತಪಟ್ಟ ದಾರುಣ ಘಟನೆ ಇಂದು ಕಾಞಂಗಾಡ್- ಕಾಸರಗೋಡು ರಾಜ್ಯ ಹೆದ್ದಾರಿಯ ಚಂದ್ರಗಿರಿ ಸೇತುವೆ ಮೇಲೆ ನಡೆದಿದೆ.
ಮೃತಪಟ್ಟ ಚಾಲಕನನ್ನು ಆಲಪ್ಪುಯ ಪುನ್ನಪ್ರದ ನಾಸರ್ (36) ಎಂದು ಗುರುತಿಸಲಾಗಿದೆ. ಇನ್ನೋರ್ವ ಚಾಲಕ ಹಾರಿಸ್ (35) ಗಾಯಗೊಂಡಿದ್ದಾರೆ. [ಮಂಗಳೂರಿನಲ್ಲಿ ಗ್ರಾಪಂ ಉಪಾಧ್ಯಕ್ಷನ ಹತ್ಯೆ ಪ್ರಕರಣ: ತನಿಖೆ ಚುರುಕು]
ಗೋವಾದಿಂದ ಅಲಪ್ಪುಯಕ್ಕೆ ಮೀನು ಹೇರಿಕೊಂಡು ತೆರಳುತ್ತಿದ್ದ ಲಾರಿಯು ಮುಂದಿನಿಂದ ಬರುತ್ತಿದ್ದ ಆಟೋಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯ ತಡೆಗೋಡೆಗೆ ಬಡಿದು ಸೇತುವೆ ಮೇಲೆಯೇ ಮಗುಚಿ ಬಿತ್ತು.
ಮಗುಚಿ ಬಿದ್ದ ಸಂದರ್ಭದಲ್ಲಿ ನಾಸರ್ ಹೊಳೆಗೆ ಬಿದ್ದಿದ್ದು, ಈ ಸಂದರ್ಭ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ, ಕರಾವಳಿ ಪಡೆ ಹಾಗೂ ಸ್ಥಳೀಯರು ಶೋಧ ನಡೆಸಿದರೂ ನಾಸರ್ ನನ್ನು ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. ಸತತ ಪ್ರಯತ್ನದ ಬಳಿಕ ಚೆಮ್ನಾಡ್ ಸಮೀಪದ ಹೊಳೆಯಲ್ಲಿ ನಾಸರ್ ಮೃತದೇಹ ತೇಲುತ್ತಿರುವುದು ಕಂಡು ಬಂದಿದೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ.