ಶಿರಾಡಿ ಘಾಟಿ ರಸ್ತೆಯಲ್ಲಿ ಜನಪ್ರತಿನಿಧಿಗಳ ಕಾರಿಗೆ ತಡೆಯೊಡ್ಡಿದ ಮರ!
ಮಂಗಳೂರು, ಜುಲೈ. 11: ಜನಸಾಮಾನ್ಯರಿಗೆ ಪ್ರವೇಶ ನಿಷೇಧವಿರುವ ಶಿರಾಡಿ ಘಾಟ್ ಹೆದ್ದಾರಿಯಲ್ಲಿ ಪೊಲೀಸ್ ಬೆಂಗಾವಲಿನೊಂದಿಗೆ ಜನಪ್ರತಿನಿಧಿಗಳ ತಂಡ ಆಗಮಿಸಿದಾಗ ಮರ ಬಿದ್ದು ಸಂಚಾರಕ್ಕೆ ಅಡ್ಡಿಯಾದ ಪ್ರಸಂಗ ತಡವಾಗಿ ಬೆಳಕಿಗೆ ಬಂದಿದೆ.
ನಿನ್ನೆ ಮಂಗಳವಾರ ಸಂಜೆ ಮಾಜಿ ಸಚಿವ ಬಿ.ಎ. ಮೊಯ್ದೀನ್ ಅಂತಿಮ ಸಂಸ್ಕಾರಕ್ಕೆಂದು ಸ್ಪೀಕರ್ ರಮೇಶ್ ಕುಮಾರ್, ನಗರಾಭಿವೃದ್ಧಿ ಸಚಿವ ಸಚಿವ ಯು.ಟಿ.ಖಾದರ್ ಮತ್ತು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಇದ್ದ ಕಾರುಗಳು ಶಿರಾಡಿ ಘಾಟಿಯಲ್ಲಿ ಸಂಚಾರ ನಿಷೇಧ ಇದ್ದರೂ ಹಾಸನದ ಸಕಲೇಶಪುರದಿಂದ ಘಾಟಿಗೆ ನುಗ್ಗಿದ್ದವು.
ಅಭಿವೃದ್ಧಿ ಕಾಮಗಾರಿಗಾಗಿ ಜನವರಿ 15ರಿಂದ ಶಿರಾಡಿ ಘಾಟ್ ಬಂದ್
ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಜನಪ್ರತಿನಿಧಿಗಳ ತಂಡ ಸುಲಭದ ದಾರಿಯೆಂದು ಶಿರಾಡಿ ಘಾಟಿಯಲ್ಲಿ ಆಗಮಿಸಿತ್ತು. ಆದರೆ, ಈ ಕಾರುಗಳು ಘಾಟಿ ರಸ್ತೆ ಇಳಿದು ದಕ್ಷಿಣ ಕನ್ನಡ ಭಾಗ ತಲುಪುತ್ತಿದ್ದಂತೆ ಲಾವತ್ತಡ್ಕ ಎಂಬಲ್ಲಿ ಮಳೆಯಿಂದಾಗಿ ಬೃಹತ್ ಮರವೊಂದು ರಸ್ತೆಗಡ್ಡ ಬಿದ್ದು ತಡೆ ನೀಡಿತ್ತು.
ಕೊನೆಗೂ ರಸ್ತೆಗಡ್ಡ ಬಿದ್ದ ಮರವೇ ಅಡ್ಡಿಯಾಗಿ ಪರಿಣಮಿಸಿದ್ದು ವಿಶೇಷ. ಕಳೆದ 6 ತಿಂಗಳಿನಿಂದ ಶಿರಾಡಿಘಾಟ್ ರಸ್ತೆ ಕಾಂಕ್ರೀಟ್ ಕಾಮಗಾರಿ ಹಿನ್ನೆಲೆಯಲ್ಲಿ ಬಂದ್ ಆಗಿರುವ ಕಾರಣ ಸ್ಥಳೀಯರಿಗೂ ರಸ್ತೆಯಲ್ಲಿ ಪ್ರವೇಶ ನೀಡುತ್ತಿರಲಿಲ್ಲ.
ಅಲ್ಲಿನ ಜನ ಸುತ್ತುಬಳಸಿ ಹೋಗಿ ಬರುವ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಜನಪ್ರತಿನಿಧಿಗಳಿಗೆ ಶಿರಾಡಿ ಘಾಟ್ ರಸ್ತೆ ವಾಹನ ಸಂಚಾರಕ್ಕೆ ಮುಕ್ತವಾಗುವ ಮೊದಲೇ ಹೆದ್ದಾರಿಯಲ್ಲಿ ಪ್ರಯಾಣಿಸಲು ಅನುಮತಿ ಕೊಟ್ಟಿದ್ದು ಯಾರು ಅನ್ನೋದು ಪ್ರಶ್ನೆ? ಒಂದು ವೇಳೆ ಇದೇ ಸಂದರ್ಭದಲ್ಲಿ ದುರಂತ ಸಂಭವಿಸುತ್ತಿದ್ದರೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೇ ಹೊಣೆಯಾಗುತ್ತಿದ್ದರು ಅನ್ನೋದು ಮಾತ್ರ ಸತ್ಯ.