ಮಂಗಳೂರು: ಸಾರಿಗೆ ನೌಕರರನ್ನು ಕೂಡಿ ಹಾಕಿ ದೌರ್ಜನ್ಯ; ನಿರ್ವಾಹಕನ ಆರೋಪ
ಮಂಗಳೂರು, ಏಪ್ರಿಲ್ 8: ಸಾರಿಗೆ ನೌಕರರ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಈ ನಡುವೆ ಮಂಗಳೂರಿನಲ್ಲಿ ಕೆಎಸ್ಆರ್ಟಿಸಿ ನೌಕರರಿಗೆ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ.
ಮಂಗಳೂರಿನ ಮೂರನೇ ಡಿಪೋದಲ್ಲಿ ಕೆಎಸ್ಆರ್ಟಿಸಿ ಸಿಬ್ಬಂದಿಗಳಿಗೆ, ಅಧಿಕಾರಿಗಳು ಬಲಾತ್ಕಾರದಿಂದ ಬೆದರಿಸಿ, ಹೆದರಿಸಿ ಕರ್ತವ್ಯಕ್ಕೆ ಕಳುಹಿಸುತ್ತಿದ್ದಾರೆ ಎಂದು ಬಸ್ ನಿರ್ವಾಹಕರು(ಕಂಡಕ್ಟರ್) ದೂರಿದ್ದಾರೆ.
ಹೊಸಪೇಟೆ: ಸಿಎಂ ಬಿಎಸ್ವೈ, ಡಿಸಿಎಂ ಸವದಿಗೆ ಸಾರಿಗೆ ನೌಕರನ ಮಗಳಿಂದ ಹೃದಯ ಕಲಕುವ ಮನವಿ
ಒಟ್ಟು 44 ಕೆಎಸ್ಆರ್ಟಿಸಿ ಸಿಬ್ಬಂದಿಗೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ನಿನ್ನೆ ಬಸ್ ನಿಲ್ಲಿಸಿ ಕ್ಯಾಶ್ ಡೆಪಾಸಿಟ್ ಮಾಡಲು ಮಷಿನ್ ತಂದಾಗ ಬಲವಂತಾವಾಗಿ ನೋಟಿಸ್ ಕೊಟ್ಟು, ಸಹಿ ಹಾಕುವಂತೆ ಬೆದರಿಸಿದ್ದಾರೆ ಎಂದು ತಿಳಿಸಿದರು.
ಬಸ್ಸುಗಳನ್ನು ಅನಧಿಕೃತವಾಗಿ ಇಟ್ಟುಕೊಂಡಿರುವ ಆರೋಪದಡಿ ದೌರ್ಜನ್ಯ ಎಸಗುತ್ತಿದ್ದಾರೆ. 22 ಬಸ್ಸುಗಳ 44 ಸಿಬ್ಬಂದಿಗೆ ನೋಟಿಸ್ ನೀಡಿದ್ದಾರೆ ಎಂದು ಮಂಗಳೂರು ಕೆಎಸ್ಆರ್ಟಿಸಿ ನೌಕರರು ದೂರಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ನಿರ್ವಾಹಕ ಮಾರುತಿ ಅಧಿಕಾರಿಗಳ ವಿರುದ್ಧದ ದೌರ್ಜನ್ಯದ ಬಗ್ಗೆ ಕಣ್ಣೀರಿಟ್ಟಿದ್ದಾರೆ. ಅಧಿಕಾರಿಗಳ ಬೆದರಿಕೆಯ ತಂತ್ರದಿಂದ ನೌಕರರು ಕಂಗಾಲಾಗಿದ್ದಾರೆ. ಮರಳಿ ಊರಿಗೆ ಹೋಗುವುದಕ್ಕೂ ಗೇಟ್ ನಿಂದ ಹೊರಗಡೆ ಬಿಡುತ್ತಿಲ್ಲ. ಆದರೆ ಯಾವುದೇ ಕಾರಣಕ್ಕೂ ಬಸ್ಸುಗಳನ್ನು ಓಡಿಸೋದಿಲ್ಲವೆಂದು ನಿರ್ವಾಹಕ ಮಾರುತಿ ಹೇಳಿದರು.
ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೆಎಸ್ಆರ್ಟಿಸಿ ಡಿಸಿ ಅರುಣ್, ದೌರ್ಜನ್ಯ ಎಸಗಿರುವ ಆರೋಪ ಸತ್ಯಕ್ಕೆ ದೂರವಾಗಿರುತ್ತದೆ. ಮಂಗಳೂರು ವಿಭಾಗದಲ್ಲಿ 600 ಜನ ನೌಕರರು ಇದ್ದಾರೆ. ಭಾಗಶಃ ಜನರು ಹೊರಗಿನವರೇ ಆಗಿದ್ದಾರೆ. ಬಸ್ಸುಗಳನ್ನು ಹೊರಗೆ ತೆಗೆದುಕೊಂಡ ನೌಕರರು ಮತ್ತೆ ಡಿಪೋಗೆ ತರದೆ ಹೊರಗೆ ಉಳಿದುಕೊಂಡಿದ್ದರು. ಸರ್ಕಾರದ ಸ್ವತ್ತು ಮತ್ತು ಸರ್ಕಾರದ ಆದಾಯದ ಜೊತೆ ಉಳಿದುಕೊಂಡಿರುವುದು ಗಂಭೀರ ಅಪರಾಧವಾಗಿದೆ. ಸಾರ್ವಜನಿಕರ ಉಪಯೋಗಕ್ಕೆ ತರದೆ ದ್ರೋಹ ಎಸಗಿದ್ದಾರೆ. ಹೀಗಾಗಿ ನೋಟಿಸ್ ನೀಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.