ಮಂಗಳೂರು : ರೇಡಿಯೊ ಜಾಕಿ ಆದ ಮಂಗಳಮುಖಿ
ಮಂಗಳೂರು, ನವೆಂಬರ್ 15 : ಮಂಗಳಮುಖಿಯೊಬ್ಬರು ಎಫ್ ಎಂ ರೇಡಿಯೊ ದಲ್ಲಿ ಆರ್ ಜೆ ಆಗಿ ಕರಾವಳಿಯ ಮನೆ ಮನ ತುಲುಪಲು ಸಿದ್ದರಾಗಿದ್ದಾರೆ. ಕರಾವಳಿ ಕರ್ನಾಟಕದ ಇತಿಹಾಸದಲ್ಲಿ ಮಂಗಳಮುಖಿಯೊಬ್ಬರು ರೇಡಿಯೊ ನಿರೂಪಕಿಯಾಗುವ ಮೂಲಕ ಹೊಸತೊಂದು ಸಾಧನೆ ಮಾಡಲು ಮುಂದಾಗಿದ್ದಾರೆ.
ಕರಾವಳಿ ಪಾಲಿಗೆ ನವೆಂಬರ್ 21 ಕ್ರಾಂತಿಕಾರಿ ನಡೆಯ ದಿನವಾಗಲುದೆ. ಏಕೆಂದರೆ ಆ ದಿನ ರೇಡಿಯೋ ನಿರೂಪಕಿಯಾಗಿ ಮಂಗಳಮುಖಿ ಕಾಜಲ್ ಅವರು ಕರಾವಳಿಯ ಜನರ ಮನೆ ಮನ ತಲುಪಲಿದ್ದಾರೆ.
ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು ನಡೆಸುವ ರೇಡಿಯೊ ಸಾರಂಗ್ 107.8 ಎಫ್ಎಂ ರೇಡಿಯೊ ಕಾಜಲ್ ಅವರಿಗೆ ಅವಕಾಶವನ್ನು ನೀಡಿದೆ. ಮೂಲತಃ ಮಂಡ್ಯ ಜಿಲ್ಲೆಯವರಾದ ಕಾಜಲ್ ತನ್ನ 14ನೇ ವಯಸ್ಸಿನಲ್ಲಿ ಮಂಗಳಮುಖಿಯಾಗಿ ಬದಲಾದರು.
ಪಿಯುಸಿ ವಿಧ್ಯಾಭ್ಯಾಸ ಮುಗಿಸಿರುವ ಕಾಜಲ್ ಅವರು ಪಿಯುಸಿಯಲ್ಲಿ ಶೇಕಡ 85 ರಷ್ಟು ಅಂಕವನ್ನು ಪಡೆದಿದ್ದಾರೆ. ನಗರ ಕೌಟಂಬಿಕ ಕಾರಣಗಳಿಂದಾಗಿ ಜೀವನೋಪಾಯಕ್ಕಾಗಿ ಮುಂಬಯಿಯಲ್ಲಿ ಬಾರ್ ಡ್ಯಾನ್ಸರ್ ಆಗಿ ಸೇರಿಕೊಂಡರು. ಕಾಜಲ್ ಸ್ವಲ್ಪಕಾಲ ಸರ್ಕಸ್ ಕಂಪೆನಿಯೊಂದರಲ್ಲಿ ಡ್ಯಾನ್ಸರ್ ಆಗಿ ಕೂಡ ಕೆಲಸ ಮಾಡಿದ್ದಾರೆ.
ಕರಾವಳಿಗೆ ಕಾರ್ಯಕ್ರಮ ಒಂದಕ್ಕೆ ಬಂದಾಗ ಇಲ್ಲಿನ ಜನರು ತೋರಿಸಿದ ಪ್ರೀತಿ ಕಾಜಲ್ ಅವರನ್ನು ಕರಾವಳಿಯಲ್ಲೆ ಉಳಿಯುವಂತೆ ಮಾಡಿತು. ಈಗ ಸದ್ಯ ಅವರು ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಒಂಬತ್ತು ವರ್ಷಗಳಿಂದ ವಾಸಿಸುತ್ತಿದ್ದಾರೆ.
ಪಿಯುಸಿವರೆಗೆ ಶಿಕ್ಷಣವನ್ನು ಮುಗಿಸಿರುವ ಇವರು ಈಗ ದೂರ ಶಿಕ್ಷಣದ ಮೂಲಕ ಪದವಿ ಕಲಿಯುತ್ತಿದ್ದಾರೆ. ಈ ನಡುವೆ ಸಂತ ಅಲೋಶಿಯಸ್ ಕಾಲೇಜು ನಡೆಸುತ್ತಿರುವ ಸಾರಂಗ್ ಎಫ್ ಎಂ ರೆಡಿಯೋ ಚಾನೆಲ್ ಗೆ ನಿರೂಪಕಿಯಾಗುವ ಅವಕಾಶ ನೀಡಿತ್ತು. ಈ ಅವಕಾಶವನ್ನು ಖುಷಿಯಿಂದಲೇ ಒಪ್ಪಿಕೊಂಡ ಕಾಜಲ್ ಇದೇ ಬರುವ ನವೆಂಬರ್ 21 ರಂದು ತಮ್ಮ ಮೊದಲ ಕಾರ್ಯಕ್ರಮ ಸಾರಂಗ್ 107.8 ಎಫ್ ಎಂ ರೇಡಿಯೊ ದಲ್ಲಿ ನೀಡಲಿದ್ದಾರೆ.
ತನ್ನ ಮೊದಲ ಕಾರ್ಯಕ್ರಮದಲ್ಲಿ ಕಾಜಲ್ ತನ್ನಂತೆ ಇರುವ ಮಂಗಳಮುಖಿಯವರನ್ನು ಸಂದರ್ಶಿಸಲಿದ್ದಾರೆ. ಮಂಗಳಮುಖಿಯರ ಸಾಮಾಜಿಕ ಜೀವನ ಹಾಗೂ ಅವರ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲಿದ್ದಾರೆ. ಪ್ರತಿ ಮಂಗಳವಾರ ಸಂಜೆ 5 ರಿಂದ 6 ಗಂಟೆಯ ವರೆಗೆ ಕಾಜಲ್ "ಶುಭಮಂಗಳ" ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಕಾಜಲ್ ಅವರಿಗೆ ನಟನೆಯಲ್ಲಿ ತುಂಬಾ ಆಸಕ್ತಿ ಇದ್ದು, ಅವರು ರಂಗಭೂಮಿಯ ನಾಟಕಗಳಲ್ಲಿ ಕೆಲಸ ಮಾಡಿ ಹಲವಾರು ಪ್ರಶಸ್ತಿಗಳನ್ನು ಕೂಡ ಪಡೆದಿದ್ದಾರೆ.