ಮುಸ್ಲಿಮರಿಗೆ ವ್ಯಾಪಾರ ನಿಷೇಧ ಸರಿಯಲ್ಲ, ಎಲ್ಲರೂ ಭಕ್ತರೇ; ಬಪ್ಪನಾಡು ಮಂಡಳಿ ಸ್ಪಷ್ಟನೆ
ಮಂಗಳೂರು, ಮಾರ್ಚ್ 23: ದಕ್ಷಿಣ ಕನ್ನಡ ಜಿಲ್ಲೆಯ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಪ್ರವೇಶ ನಿಷೇಧ ವಿಚಾರವಾಗಿ ದೇವಸ್ಥಾನದ ಆಡಳಿತ ಮಂಡಳಿ ಅಂತರ ಕಾಯ್ದುಕೊಂಡಿದೆ. ಈ ನಿಷೇಧದ ವಿವಾದಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ. ದೇವಸ್ಥಾನದ ಆಡಳಿತ ಮಂಡಳಿ ಯಾರಿಗೂ ನಿಷೇಧ ಹೇರಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಬಪ್ಪನಾಡು ಕ್ಷೇತ್ರದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನಿರಾಕರಣೆ ವಿಚಾರವಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ್ ಶೆಟ್ಟಿ, ದೇವಸ್ಥಾನ ವಠಾರದಲ್ಲಿ ಬ್ಯಾನರ್ ಹಾಕುವುದಕ್ಕೆ ಅವಕಾಶ ಇಲ್ಲ. ದೇವಸ್ಥಾನದ ಹೊರಭಾಗದಲ್ಲಿ ಯಾರು ಬ್ಯಾನರ್ ಹಾಕಿದ್ದಾರೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಮುಸ್ಲಿಮರು ಆರ್ಥಿಕ ಬಹಿಷ್ಕಾರ ಹಾಕಿದರೆ ಹಿಂದೂಗಳಿಗೇ ತೊಂದರೆ; ಉಡುಪಿ ಮುಸ್ಲಿಂ ಮುಖಂಡರು
ಪ್ರತಿವರ್ಷ ಇಲ್ಲಿ ಮುಸ್ಲಿಮರು ವ್ಯಾಪಾರ ಮಾಡುತ್ತಿದ್ದರು, ಆದರೆ ಈ ಬಾರಿ ಮುಸ್ಲಿಂ ಬಂದಿಲ್ಲ. ಇದಕ್ಕೆ ಕಾರಣ ಏನು ಅಂತಾ ಗೊತ್ತಿಲ್ಲ. ಇದಕ್ಕೆ ದೇವಸ್ಥಾನದ ಆಡಳಿತ ಮಂಡಳಿ ಕಾರಣ ಅಲ್ಲ. ದೇವಸ್ಥಾನದ ಆಡಳಿತ ಮಂಡಳಿ ಎಂದೂ ನಿಷೇಧ ಹಾಕಿಲ್ಲ. ಮುಸ್ಲಿಂ ವ್ಯಾಪಾರಿಗಳು ಬಂದರೂ ಹಿಂದೆ ಕಳುಹಿಸುವುದಿಲ್ಲ. ಆದರೆ ಅವರಿಗೆ ತೊಂದರೆ ಆದರೆ ದೇವಸ್ಥಾನ ಜವಾಬ್ದಾರಿ ತೆಗೆದುಕೊಳ್ಳಲು ಸಾಧ್ಯವಿಲ್ಲವೆಂದು ತಿಳಿಸಿದರು.
Recommended Video
ದೇವಸ್ಥಾನದ ಆಡಳಿತ ಮಂಡಳಿ ಎಂದೂ ತಾರತಮ್ಯ ಮಾಡುವುದಿಲ್ಲ. ಕೆಲವರು ಜಾತ್ರೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ಕೊಡಬಾರದು ಎಂದು ಮನವಿ ನೀಡಿದ್ದರು. ಆದರೆ ಈ ವಿಚಾರದಲ್ಲಿ ನಮ್ಮ ನಿರ್ಧಾರವನ್ನು ಅವರಿಗೆ ಸ್ಪಷ್ಟಪಡಿಸಿದ್ದೇವೆ. ದೇವರ ಪಾವಿತ್ರ್ಯತೆಗೆ ಧಕ್ಕೆ ತರುವ ಕೆಲಸವನ್ನು ಯಾರೂ ಮಾಡಬಾರದು ಎಂದು ಕಿವಿಮಾತು ಹೇಳಿದರು.
ಉಡುಪಿ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮುಸ್ಲಿಂ ವ್ಯಾಪಾರಿಗಳಿಗೆ ಆರ್ಥಿಕ ಬಹಿಷ್ಕಾರ
ದೇವಸ್ಥಾನದಲ್ಲಿ ಯಾರೂ ಬೇಕಾದರೂ ವ್ಯಾಪಾರ ಮಾಡಬಹುದು. ಆದರೆ ದೇವಸ್ಥಾನದ ಅನುಮತಿ ಇಲ್ಲದೆ ಯಾರಿಗೂ ಅವಕಾಶ ಇಲ್ಲ ಎಂದು ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ್ ಶೆಟ್ಟಿ ಹೇಳಿದ್ದಾರೆ.
ಬಪ್ಪನಾಡು ಕ್ಷೇತ್ರದ ಸಾಮರಸ್ಯವನ್ನು ಆಡಳಿತ ಮಂಡಳಿ ಎತ್ತಿಹಿಡಿದಿದೆ. ಇನ್ನು ಕ್ಷೇತ್ರದಲ್ಲಿ ಹನ್ನೊಂದು ವರ್ಷಗಳ ಕಾಲ ಆಡಳಿತ ಮೊಕ್ತೇಸ್ವರರಾಗಿದ್ದ ಹರಿಕೃಷ್ಣ ಪುನರೂರು ಕೂಡಾ ಮುಸ್ಲಿಮರಿಗೆ ವ್ಯಾಪಾರ ನಿಷೇಧದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಹರಿಕೃಷ್ಣ ಪುನರೂರು, ಭಾರತದಲ್ಲಿ ಎಲ್ಲರಿಗೂ ಬದುಕುವ ಹಕ್ಕಿದೆ. ಕೆಲಸ ಮಾಡಿ ಬದುಕುವುದಕ್ಕೂ ಜಾತಿ ನೋಡಬಾರದು. ಮತಾಂತರ ಮಾಡಿದರೆ ಅವರನ್ನು ಪ್ರಶ್ನೆ ಮಾಡಬಹುದು. ಆದರೆ ಬದುಕಲು ಅಡ್ಡಗಾಲು ಹಾಕುವುದು ಸರಿಯಲ್ಲ. ಯಾರೇ ಆಗಲಿ ವ್ಯಾಪಾರ ಅಡ್ಡಿ ಮಾಡಬಾರದು ಎಂದು ತಿಳಿಸಿದ್ದಾರೆ.
ನಾನು 11 ವರ್ಷ ಈ ಕ್ಷೇತ್ರದಲ್ಲಿ ಆಡಳಿತ ಮೊಕ್ತೇಸ್ವರನಾಗಿ ಕೆಲಸ ಮಾಡಿದ್ದೇನೆ. ಈ ದೇವಸ್ಥಾನಕ್ಕೆ ಕೈ ಮುಗಿಯಲು ಮುಸ್ಲಿಂ, ಕ್ರೈಸ್ತರು ಬರುತ್ತಾರೆ. ಈ ಪುಣ್ಯಕ್ಷೇತ್ರದಲ್ಲಿ ನಾವೇ ಜಗಳವನ್ನು ಎಳೆಯಬಾರದು. ಈ ಕ್ಷೇತ್ರ 32 ಗ್ರಾಮಗಳಿಗೆ ಸಂಬಂಧಪಟ್ಟ ದೇವಸ್ಥಾನವಾಗಿದೆ. ನಾವೇ ಕಾಲು ಕರೆದು ಜಗಳಕ್ಕೆ ಹೋಗಬಾರದು ಎಂದರು.
ಮತಾಂತರ ಮಾಡಿದರೆ ಪ್ರತಿಭಟನೆ ಮಾಡಬಹುದು, ಆದರೆ ಸೌಹಾರ್ದಯುತವಾಗಿ ಬಾಳಲು ಅಡ್ಡಿ ಮಾಡಬಾರದು. ಬಪ್ಪ ಬ್ಯಾರಿ ಎಂಬ ಮುಸ್ಲಿಮರು ಕ್ಷೇತ್ರವನ್ನು ಜಿರ್ಣೋದ್ಧಾರ ಮಾಡಿದ ಇತಿಹಾಸವಿದೆ. ಭಕ್ತರು ಕ್ಷೇತ್ರದ ಸೌಹಾರ್ದತೆಗೆ, ಸಾಮರಸ್ಯಕ್ಕೆ ಪ್ರೋತ್ಸಾಹ ನೀಡಬೇಕು. ಈ ಕ್ಷೇತ್ರದಲ್ಲಿ ಎಲ್ಲರಿಗೂ ಅವಕಾಶ ನೀಡಬೇಕು. ಕೆಲವರು ಸೌಹಾರ್ದತೆಗೆ ವಿರೋಧಕ್ಕೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಆಡಳಿತ ಮಂಡಳಿಗೆ ಆ ಉದ್ದೇಶ ಇಲ್ಲ ಎಂದು ಹರಿಕೃಷ್ಣ ಪುನರೂರು ಹೇಳಿದ್ದಾರೆ.