ಮಲ್ಪೆ ಬೀಚಿನಲ್ಲಿ ಜನವರಿಯಲ್ಲಿ ಆರಂಭವಾಗಲಿದೆ ಜಲಕ್ರೀಡೆಗಳು
ಉಡುಪಿ, ನವೆಂಬರ್, 21 : ಮಲ್ಪೆ ಬೀಚಿನಲ್ಲಿ ಸಾಹಸಮಯ ಜಲಕ್ರೀಡೆಗಳನ್ನು ಜನವರಿ ಮೊದಲ ವಾರದಲ್ಲಿ ನಡೆಸಲು ಪ್ರವಾಸೋದ್ಯಮ ಅಭಿವೃದ್ದಿ ಸಮಿತಿಯು ನಿರ್ಧರಿಸಿದೆ ಎಂದು ಜಿಲ್ಲಾಧಿಕಾರಿ ಆರ್ ವಿಶಾಲ್ ಶನಿವಾರ ತಿಳಿಸಿದ್ದಾರೆ.
ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಮತ್ತು ಮಲ್ಪೆ ಬೀಚ್ ಅಭಿವೃದ್ದಿ ಸಮಿತಿ ಗುರುವಾರ ಕರೆದಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತಾಡಿದ ಜಿಲ್ಲಾಧಿಕಾರಿ ಆರ್ ವಿಶಾಲ್, 'ಮಲ್ಪೆ ಬೀಚ್ ಸಂಪರ್ಕಿಸುವ ರಸ್ತೆಯನ್ನು ಶೀಘ್ರವೇ ಸರಿಪಡಿಸಬೇಕು. ಒಂದು ವೇಳೆ ಈ ಬಗ್ಗೆ ನಿರ್ಲಕ್ಷ್ಯ ತೋರಿದ್ದಲ್ಲಿ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ದಿ ನಿಯಮಿತ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದು ಎಚ್ಚರಿಸಿದ್ದಾರೆ.[ದೀಪಸ್ತಂಭಗಳ ಬೆಳಕಲ್ಲಿ ಅಡಗಿದೆ ಕರಾವಳಿ ಪ್ರವಾಸೋದ್ಯಮ ಅಭಿವೃದ್ದಿ]
ಜಿಲ್ಲೆಯಲ್ಲಿರುವ ಎಲ್ಲಾ ಸಮುದ್ರಗಳ ಸ್ವಚ್ಛತೆ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಖಾಸಗಿ ಏಜೆನ್ಸಿಗಳ ಪ್ರತಿನಿಧಿಗಳು ಕರಾವಳಿ ಭದ್ರತೆ ಮತ್ತು ಸ್ವಚ್ಛತೆ ನಿರ್ವಹಣಾ ಪೋಲೀಸ್ ಸಿಬ್ಬಂದಿ ಸಹಾಯದೊಂದಿಗೆ ಈ ಕೆಲಸವನ್ನು ನೋಡಿಕೊಳ್ಳಲು ನಿರ್ಧರಿಸಿದ್ದಾರೆ.
ಸಿಸಿಟಿವಿ, ವಾಕಿ-ಟಾಕಿಗಳನ್ನು ಅಳವಡಿಸಲು ನಿಧಿ ಬಿಡುಗಡೆ ಮಾಡಲಾಗಿದೆ. ಬೀಚಿನಲ್ಲಿ ಯಾವುದೇ ಉತ್ಸವ ಹಮ್ಮಿಕೊಳ್ಳುವ ಮೊದಲು ಜಿಲ್ಲಾಡಳಿತದ ಅನುಮತಿ ಪಡೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. ಮಲ್ಪೆ ಬೀಚಿಗೆ ಪ್ರತ್ಯೇಕ ಟ್ರಾನ್ಸ್-ಫಾರ್ಮರ್ನೊಂದಿಗೆ ಪ್ರತ್ಯೇಕ ಕುಡಿಯುವ ನೀರು ವ್ಯವಸ್ಥೆ ಮಾಡಲಾಗುವುದು ಎಂದು ಉಡುಪಿ ನಗರಸಭೆ ಆಯುಕ್ತ ಡಿ ಮಂಜುನಾಥಯ್ಯ ಹೇಳಿದ್ದಾರೆ.