ಧರ್ಮಸ್ಥಳದಲ್ಲಿ ಬಾಹುಬಲಿಯ ಮಹಾಮಸ್ತಕಾಭಿಷೇಕಕ್ಕೆ ವೈಭವದ ತೆರೆ
Recommended Video
ಮಂಗಳೂರು, ಫೆಬ್ರವರಿ 18: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕಳೆದ ಹತ್ತು ದಿನಗಳಿಂದ ನಡೆಯುತ್ತಿದ್ದ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕ ಸಂಭ್ರಮಕ್ಕೆ ಇಂದು ವೈಭವದ ತೆರೆಬಿದ್ದಿದೆ. ರತ್ನಗಿರಿ ಬೆಟ್ಟದಲ್ಲಿ ವಿರಾಜಮಾನನಾದ ವೈರಾಗ್ಯ ಮೂರ್ತಿ ಬಾಹುಬಲಿಗೆ ಇಂದು ಕೊನೆಯ ಮಸ್ತಕಾಭಿಷೇಕ ನೆರವೇರಿಸಲಾಯಿತು.
ಫೆಬ್ರವರಿ 8 ರಂದು ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕದ ಕಾರ್ಯಕ್ರಮಗಳು ಆರಂಭಗೊಂಡಿದ್ದು, ಮೂರು ದಿನಗಳ ಕಾಲ ಬಾಹುಬಲಿ ಮೂರ್ತಿಗೆ ಮಹಾಮಜ್ಜನ ನಡೆದಿದೆ. ಮಸ್ತಕಾಭಿಷೇಕದ ಪೂಜಾಫಲವನ್ನು ದೇಶಕ್ಕೆ ಸಮರ್ಪಿಸಲಾಗಿದ್ದು, ಈ ಸಂದರ್ಭದಲ್ಲಿ ಭಾರತೀಯ ಸೈನ್ಯ ದುಷ್ಟ ಶಕ್ತಿಗಳನ್ನು ನಿಗ್ರಹಿಸುವ ಶಕ್ತಿ ಹೊಂದಲಿ ಎನ್ನುವ ಪ್ರಾರ್ಥನೆ ಸಲ್ಲಿಸಲಾಗಿದೆ.
ಬಾಹುಬಲಿ ಮಸ್ತಕಾಭಿಷೇಕ:ಗಮನಸೆಳೆದ ಶಂಕರ್ ಮಹಾದೇವನ್ ದೇಶಭಕ್ತಿ ಗೀತೆ
ಕಳೆದ 2 ದಿನಗಳಿಂದ ಹೊಂಬಣ್ಣದಿಂದ ಶೋಭಿಸಿದ್ದ ಭಗವಾನ್ ಬಾಹುಬಲಿಗೆ ಇಂದು ಕೊನೆಯ ಮಸ್ತಕಾಭಿಷೇಕ ನೆರವೇರಿದೆ. ಕಲಶಗಳ ಜಲಾಭಿಷೇಕದ ಒಡನೆಯೇ ಬಿದ್ದ ಕ್ಷೀರಧಾರೆ ಬಾಹುಬಲಿ ಶ್ವೇತಧಾರಿಯಾಗಿ ಕಂಗೊಳಿಸುವಂತೆ ಮಾಡಿತ್ತು.
ಫೆಬ್ರವರಿ 16ರಿಂದ ಇಂದಿನವರೆಗೆ ಬಾಹುಬಲಿ ಮೂರ್ತಿಗೆ ಮಜ್ಜನ ನಡೆದಿದ್ದು, ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗಡೆ ನೇತೃತ್ವದಲ್ಲಿ ಈ ಮಜ್ಜನ ಸಂಪನ್ನಗೊಂಡಿದೆ.
ಆಗ್ರೋದಕ ಮೆರವಣಿಗೆಯ ಮೂಲಕ ಜೈನ ಬಸದಿಯಿಂದ ಬಾಹುಬಲಿ ಬೆಟ್ಟಕ್ಕೆ ಕಲಶವನ್ನು ತರಲಾಗಿದ್ದು, ಬಳಿಕ ಬೆಟ್ಟದಲ್ಲಿ ಕಲಶಗಳಿಗೆ ಧಾರ್ಮಿಕ ವಿಧಿ ವಿಧಾನ ಪೂರೈಸಿದ ಬಳಿಕ ಜೈನ ಭಾಂಧವರು ವಿರಾಟಮೂರ್ತಿಗೆ ಜನ ಕಲಶಾಭಿಷೇಕ ನಡೆಸಿದರು.
ಹೊನ್ನ ಕಲಶದಲ್ಲಿ ಶೋಭಿಸಿದ ವಿರಾಟ್ ವಿರಾಗಿ: ನಾಳೆ ಕೊನೆ ದಿನದ ಮಜ್ಜನ
ವಿವಿಧ ದ್ರವ್ಯಗಳಾದ ಕಲ್ಕಚೂರ್ಣ, ಅಷ್ಟಗಂಧ, ಕೇಸರಿ, ಅರಸಿನ, ಚಂದನ, ಪುಷ್ಪವೃಷ್ಟಿ ಸೇರಿದಂತೆ ಹಲವು ಅಭಿಷೇಕಗಳನ್ನು ಬಾಹುಬಲಿಗೆ ನೆರವೇರಿಸಲಾಯಿತು. ಬಾಹುಬಲಿಯ ಈ ಮಸ್ತಕಾಭಿಷೇಕದ ಫಲವನ್ನು ದೇಶಕ್ಕೆ ಸಮರ್ಪಿಸಲಾಗಿದ್ದು, ಕಾಶ್ಮೀರದಲ್ಲಿ ನಡೆದ ದುಷ್ಟರ ಉಪಟಳಕ್ಕೆ ಉತ್ತರಿಸುವ ಶಕ್ತಿ ಸೈನಿಕರಿಗೆ ದೊರಕಲೆನ್ನುವ ಪ್ರಾರ್ಥನೆಯನ್ನೂ ಇದೇ ಸಂದರ್ಭದಲ್ಲಿ ಮಾಡಲಾಯಿತು.
ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಈ ಮಹಾಮಸ್ತಕಾಭಿಷೇಕವನ್ನು ಕಣ್ತುಂಬಿಕೊಂಡ ಸೌಭಾಗ್ಯ ದೊರೆತ ಭಕ್ತರು ಭಾವ ಪರವಶವಾದ ದೃಶ್ಯವೂ ಕಂಡು ಬಂದಿತ್ತು.
ಬಾಹುಬಲಿ ಮಹಾಮಜ್ಜನ ನೋಡಲು ರಾಜ್ಯದೆಲ್ಲೆಡೆಯಿಂದ ಬಂದ ಭಕ್ತರ ದಂಡು
ಧರ್ಮಸ್ಥಳದ ವತಿಯಿಂದ ನಡೆಯುವ ಮಸ್ತಕಾಭಿಷೇಕಕ್ಕೆ ತೆರೆ ಬಿದ್ದರೂ, ಮುಂದಿನ ಕೆಲ ದಿನಗಳ ಕಾಲ ಜೈನ ಭಕ್ತಾಧಿಗಳಿಗೆ ಮಸ್ತಕಾಭಿಷೇಕ ನಡೆಸುವ ಅವಕಾಶ ನೀಡಲಾಗಿದೆ. ಹತ್ತು ದಿನಗಳ ಕಾಲ ಧರ್ಮಸ್ಥಳದಲ್ಲಿ ನಡೆದ ಈ ವೈಭವೋಪೇತ ಕಾರ್ಯಕ್ರಮದಲ್ಲಿ ಸಾವಿರಾಪೋದಿಯಲ್ಲಿ ಭಕ್ತರು ಪಾಲ್ಗೊಂಡಿದ್ದರು.