ಭಾರತ ಬಂದ್ ಗೆ ಕರಾವಳಿಯಲ್ಲಿ ಇಂದು ಕೂಡ ನೀರಸ ಪ್ರತಿಕ್ರಿಯೆ
ಮಂಗಳೂರು, ಜನವರಿ 09: ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಎರಡು ದಿನಗಳ ಅಖಿಲ ಭಾರತ ಬಂದ್ ಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಇಂದು ಕೂಡ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎರಡನೇ ದಿನದ ಬಂದ್ ಗೆ ಜನರು ಸ್ಪಂದಿಸಿಲ್ಲ.
ಭಾರತ್ ಬಂದ್ LIVE: ಬಿಎಂಟಿಸಿ ಬಸ್ ಸಂಪೂರ್ಣ ಸ್ಥಗಿತ
ಕರಾವಳಿಯ ಲೈಫ್ ಲೈನ್ ಎಂದೇ ಕರೆಯಲಾಗುವ ಖಾಸಗಿ ಎಕ್ಸ್ಪ್ರೆಸ್, ಸರ್ವಿಸ್ ಹಾಗೂ ಸಿಟಿ ಬಸ್ ಗಳು ಇಂದು ಮುಂಜಾನೆಯಿಂದ ಎಂದಿನಂತೆ ಸಂಚಾರ ಆರಂಭಿಸಿವೆ. ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ ಗೆ ದಕ್ಷಿಣ ಕನ್ನಡ ಜಿಲ್ಲೆಯ ಖಾಸಗಿ ಬಸ್ ಮಾಲೀಕರ ಸಂಘ ಬೆಂಬಲ ನೀಡಿರಲಿಲ್ಲ.
ಆದರೆ ಕೆಲ ಬಸ್ ಚಾಲಕರು ಹಾಗೂ ನಿರ್ವಹಕರು ಬಂದ್ ಗೆ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ನಿನ್ನೆ ಕೆಲ ಬಸ್ ಗಳು ರಸ್ತೆಗಿಳಿದಿರಲಿಲ್ಲ. ಆದರೆ ಇಂದು ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ರೂಟ್ ಗಳಲ್ಲಿ ಬಸ್ ಗಳು ಸಂಚರಿಸುತ್ತಿವೆ. ಆಟೋ ರಿಕ್ಷಾಗಳು ಕೂಡ ರಸ್ತೆಗಿಳಿದಿವೆ.
ಜನವರಿ 9ರಂದು ಯಾವ ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಶಾಲಾ, ಕಾಲೇಜುಗಳು ಎಂದಿನಂತೆ ಆರಂಭವಾಗಿವೆ. ಅಂಗಡಿ, ಮಳಿಗೆ, ಮುಂಗಟ್ಟುಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಬ್ಯಾಂಕ್ ಸಿಬ್ಬಂದಿ ಮುಷ್ಕರಕ್ಕೆ ಬೆಂಬಲ ಸೂಚಿಸಿರುವುದರಿಂದ ಸೇವೆ ಭಾಗಶಃ ವ್ಯತ್ಯಯಗೊಂಡಿದೆ. ಮಾಲ್ ಗಳು, ಚಿತ್ರಮಂದಿರಗಳು,ಪೆಟ್ರೋಲ್ ಬಂಕ್ ಗಳು, ಮೆಡಿಕಲ್ ಶಾಪ್ ಸಹಿತ ಅಗತ್ಯ ವಸ್ತು, ಸೇವೆ ಸಾಮಾನ್ಯವಾಗಿದೆ.
ನಿನ್ನೆ ಸ್ತಬ್ಧಗೊಂಡಿದ್ದ ಮಂಗಳೂರಿನ ಪ್ರಮುಖ ವಾಣಿಜ್ಯ ಕೇಂದ್ರ ಹಳೆ ಬಂದರು ಸಗಟು ಮಾರುಕಟ್ಟೆಯಲ್ಲಿ ಇಂದು ವ್ಯಾಪಾರ ವಹಿವಾಟು ಆರಂಭವಾಗಿದೆ. ಜಿಲ್ಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮುಂದುವರಿಸಲಾಗಿದ್ದು, ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯಲ್ಲಿ ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಅಧಿಕಾರಿ ಸಿಬ್ಬಂದಿಯನ್ನು ಹಾಗೂ ಕೆ ಎಸ್ ಆರ್ ಪಿ , ಡಿ ಎ ಆರ್ ತುಕಡಿಗಳನ್ನು ನಿಯೋಜಿಸಲಾಗಿದೆ.