ಮಂಗಳೂರಿನ ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜಿಸುವ ಮುನ್ನ ಯೋಚಿಸಿ
ಮಂಗಳೂರು, ಜನವರಿ27 : ದೇಶದಾದ್ಯಂತ ಸ್ವಚ್ಛ ಭಾರತ್ ಅಭಿಯಾನದಡಿ ಹಲವಾರು ಸಂಘ ಸಂಸ್ಥೆಗಳು ದೇಶವನ್ನು ಸ್ವಚ್ಛಗೊಳಿಸುವ ನಿಸ್ವಾರ್ಥ ಸೇವೆಗೆ ತಮ್ಮನ್ನು ತೊಡಗಿಸಿಕೊಂಡಿವೆ. ಭಾನುವಾರ ಬಂತೆಂದರೆ ಪೊರಕೆ ಹಿಡಿದು ಸಾವಿರಾರು ಸ್ವಯಂ ಸೇವಕರು ರಸ್ತೆಗಿಳಿದು ಪರಿಸರವನ್ನು ಸ್ವಚ್ಛಗೊಳಿಸುತ್ತಾರೆ. ಆದರೆ ಸೋಮವಾರ ಅದೇ ಸ್ಥಳಗಳಲ್ಲಿ ಸಾರ್ಜನಿಕರು ಮತ್ತೆ ತ್ಯಾಜ್ಯ ಸುರಿದು,ಕಂಡ ಕಂಡಲ್ಲಿ ಮೂತ್ರ ವಿಸರ್ಜನೆ ಮಾಡಿ ಗಲೀಜುಗೊಳಿಸುತ್ತಾರೆ.
ಸಾರ್ವಜನಿಕರ ಈ ಮನಸ್ಥತಿಯ ವಿರುದ್ದ ಮಂಗಳೂರಿನಲ್ಲಿ ಯುವಕರ ತಂಡ ಒಂದು ನೂತನ ಅಭಿಯಾನ ಆರಂಭವಾಗಿದೆ. ಬಾನುವಾರವಷ್ಟೇ ಕಸ ಗುಡಿಸಿ , ನೀರು ಹಾಕಿ ಸ್ವಚ್ಛಗೊಳಿಸಿದ ರಸ್ತೆಬದಿ ಮತ್ತೆ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುವರ ವಿರುದ್ಧ ಸಿಟ್ಟಾದ ಯುವಕರ ತಂಡ ಸ್ವಚ್ಛಗೊಳಿಸಿದ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುವವರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಬೆದರಿಕೆ ಹಾಕಿದೆ.
ಮಂಗಳೂರಿನ ಸರ್ವಿಸ್ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಯುವಕರ ತಂಡದ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ರಾಮಕೃಷ್ಣ ಮಿಷನ್ ವತಿಯಿಂದ ಪ್ರತೀ ಭಾನುವಾರ ನೂರಾರು ಸ್ವಯಂ ಸೇವಕರು ಮಂಗಳೂರು ನಗರವನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಆದರೆ ಮಾರನೇ ದಿನ ಮತ್ತೆ ಸ್ವಚ್ಛಗೊಳಿಸಿದ ಸ್ಥಳದಲ್ಲಿ ಸಾರ್ವಜನಿಕರು ಕಸ ಹಾಕಿ ಮೂತ್ರ ವಿಸರ್ಜನೆ ಮಾಡಿ ಗಲೀಜು ಮಾಡುತ್ತಾರೆ. ಬಸ್ ನಿಲ್ದಾಣ ದಲ್ಲಿ 3 ಸಾಮಾಜಿಕ ಶೌಚಾಲಯ ಗಳಿದ್ದರೂ ಅದನ್ನು ಬಳಸದ ಜನರಿಗೆ ಪಾಠ ಕಲಿಸಲು ಯುವಕರ ತಂಡ ಮುಂದಾಗಿದೆ.
ಕಸ ಎಸೆದು , ಮೂತ್ರ ವಿಸರ್ಜನೆ ಮಾಡಿ ಗಲೀಜು ಮಾಡಲಾಗಿದ್ದ ಸರ್ವಿಸ್ ಬಸ್ ನಿಲ್ದಾಣದಲ್ಲಿ ಮತ್ತೇ ಸ್ವಚ್ಛಗೊಳಿಸಿ ಬಸ್ ಡೈವರ್ , ಕ್ಲೀನರ್ ಹಾಗು ಸಾರ್ವಜನಿಕರಿಗೆ ಬೆದರಿಕೆ ಹಾಕಿದ್ದಾರೆ. ಮತ್ತೇ ಈ ಸ್ಥಳದಲ್ಲಿ ಮೂತ್ರ ಮಾಡಿ ಗಲೀಜು ಮಾಡುವವರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಬೆದರಿಕೆ ಯುವಕರ ತಂಡ ಹಾಕಿದೆ. ಹಾಗಾದರೂ ಜನರಿಗೆ ಬುದ್ದಿ ಬರಲಿ ಎಂಬುದು ಯುವಕರ ಉದ್ಧೇಶ. ಯುವಕರ ಈ ಅಭಿಯಾನಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.