"ಬಿಜೆಪಿಯವರು ಗಾಂಧಿ, ಅಂಬೇಡ್ಕರ್ ರನ್ನು ಸಹ ಪಠ್ಯದಿಂದ ತೆಗೆಯಬಹುದು"
ಮಂಗಳೂರು, ಅಕ್ಟೋಬರ್ 31: ಟಿಪ್ಪುವನ್ನು ಹೊಗಳಿರುವ ಪಠ್ಯವನ್ನು ತೆಗೆದುಹಾಕುವುದರಿಂದ ಇತಿಹಾಸದ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ ಎಂದು ಮಾಜಿ ಸಚಿವ- ಕಾಂಗ್ರೆಸ್ ಶಾಸಕ ಯು. ಟಿ. ಖಾದರ್ ಹೇಳಿದ್ದಾರೆ.
"ಇತಿಹಾಸವು ಕರ್ನಾಟಕಕ್ಕೆ ಮಾತ್ರ ಸೀಮಿತ ಅಲ್ಲ. ಬ್ರಿಟಿಷ್ ಸಂಗ್ರಹಾಲಯದಲ್ಲಿ ಇರುವ ಟಿಪ್ಪುವಿಗೆ ಸಂಬಂಧಿಸಿದ ಸಂಗ್ರಹವನ್ನೂ ಈ ಸರ್ಕಾರ ತೆಗೆದುಹಾಕಲು ಸಾಧ್ಯವಾ? ಟಿಪ್ಪು ಬಗೆಗಿನ ಇತಿಹಾಸದ ಪುಸ್ತಕಗಳು ಜಗತ್ತಿನಾದ್ಯಂತ ಸಿಗುತ್ತವೆ. ಎಲ್ಲ ಪುಸ್ತಕಗಳನ್ನು ಪಡೆಯಲು ಸಾಧ್ಯವಾ?
"ಶ್ರೀರಂಗಪಟ್ಟಣ, ಕೊಲ್ಲೂರು ದೇವಳ, ಶೃಂಗೇರಿ ಮಠ, ನಂಜನಗೂಡು ಮತ್ತು ಟಿಪ್ಪುವಿಗೆ ಸಂಬಂಧಿಸಿದ ನೂರಾರು ಸ್ಮಾರಕಗಳನ್ನು ತಿರಸ್ಕರಿಸಲು ಸಾಧ್ಯವಾ? ಕರ್ನಾಟಕ ವಿಧಾನಸಭೆಯಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಟಿಪ್ಪು ಸುಲ್ತಾನ್ ನನ್ನು ಹೊಗಳಿ ಮಾಡಿರುವ ಭಾಷಣ ದಾಖಲೆಯಲ್ಲಿ ಇದೆ" ಎಂದು ಖಾದರ್ ಹೇಳಿದ್ದಾರೆ.
"ನಾಳೆ ಬಿಜೆಪಿಯವರು ಮಹಾತ್ಮ ಗಾಂಧಿ ಹಾಗೂ ಬಿ. ಆರ್. ಅಂಬೇಡ್ಕರ್ ಅವರನ್ನು ಸಹ ಪಠ್ಯದಿಂದ ತೆಗೆಯಬಹುದು. ಆದ್ದರಿಂದ ಈಚೆಗಿನ ನೆರೆಯಿಂದ ಹಾನಿಗೊಳಗಾದವರಿಗೆ ಹಾಗೂ ಕರ್ನಾಟಕದ ಜನರಿಗೆ ಈ ಸರ್ಕಾರ ಏನು ಮಾಡಿದೆ ಎಂಬುದನ್ನು ಚರ್ಚಿಸಬೇಕು" ಎಂದಿದ್ದಾರೆ.