ಕೇರಳದ ಮೂವರ ಹೆಸರನ್ನು ಮತ್ತೆ ಐಸಿಸ್ ಪಟ್ಟಿಯಲ್ಲಿ ಸೇರಿಸಿದ ಎನ್ಐಎ
ಮಂಗಳೂರು, ಮೇ 07: ವಿಶ್ವದ ಅತ್ಯಂತ ಕ್ರೂರ ಭಯೋತ್ಪಾದಕ ಸಂಘಟನೆ ಐಎಸ್ ಐಎಸ್ ಕೇರಳವನ್ನು ಭೂತದಂತೆ ಕಾಡುತ್ತಿದೆ. ಕೇರಳದ ಮೂವರು ಮತ್ತೆ ಐಸಿಸ್ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿಗಳೆಂದು ಗುರುತಿಸಲಾಗಿದೆ.
ಮಂಗಳೂರಿನ ಗಡಿಭಾಗ ಕೇರಳದ ಕಾಸರಗೋಡಿನ ಇಬ್ಬರು ಸೇರಿದಂತೆ ಮೂವರನ್ನು ರಾಷ್ಟ್ರೀಯ ತನಿಖಾ ದಳ ಆರೋಪಿಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದೆ. ಈ ಕುರಿತು ಎನ್ ಐಎ ತಂಡ ತನಿಖೆ ಆರಂಭಿಸಿದೆ. ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಬಳಿಕ ಭಾರತದಲ್ಲಿ ಐಸಿಸ್ ಚಟುವಟಿಗಳ ಮೇಲೆ ಹದ್ದಿನ ಕಣ್ಣಿಡಲಾಗಿದ್ದು , ದೇಶದ ಎಲ್ಲೆಡೆ ಐಸಿಸ್ ಸಮರ್ಥಕರ ಮೇಲೆ ನಿಗಾ ಇಡಲಾಗಿದೆ.
ಭಾರತದಲ್ಲಿ ಲಂಕಾ ಮಾದರಿ ದಾಳಿಗೆ ಸಂಚು: ಐಸಿಸ್ ಶಂಕಿತ ಉಗ್ರ ಬಂಧನ
ಕಾಸರಗೋಡು ನಿವಾಸಿಗಳಾದ ಅಬೂಬಕ್ಕರ್ ಸಿದ್ದಿಕ್, ಅಹಮ್ಮದ್ ಅರಾಫತ್, ಕೊಲ್ಲಂ ಕರುನಾಗಪಳ್ಳಿ ನಿವಾಸಿ ಮೊಹಮ್ಮದ್ ಫೈಜಲ್ನನ್ನು ಹೊಸದಾಗಿ ಆರೋಪಿಗಳ ಪಟ್ಟಿಗೆ ಸೇರಿದ್ದು, ಪ್ರಕರಣದ ತನಿಖೆ ನಡೆಸುತ್ತಿರುವ ಎನ್ಐಎ ಎರ್ನಾಕುಳಂ ನಲ್ಲಿರುವ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ ಎಂದು ಹೇಳಲಾಗಿದೆ.
ಈ ಮೂವರನ್ನು ಇನ್ನಷ್ಟು ವಿಚಾರಣೆಗೊಳಪಡಿಸಲು ಎನ್ಐಎ ತೀರ್ಮಾನಿಸಿದೆ. ಐಸಿಸ್ ಚಟುವಟಿಕೆಗಳನ್ನು ಕೇರಳದಲ್ಲಿ ಬಲಪಡಿಸಲೆತ್ನಿಸಿದ, ಅದಕ್ಕಾಗಿ ಸಿರಿಯಾದಲ್ಲಿರುವ ಐಸಿಸ್ ಉಗ್ರ ಅಬ್ದುಲ್ ರಾಶೀದ್ನ ಜತೆ ಸೇರಿ ಒಳಸಂಚು ಹೂಡಿರುವ ಪ್ರಕರಣದಲ್ಲಿ ಈ ಮೂವರನ್ನು ಆರೋಪಿಗಳನ್ನಾಗಿಸಲಾಗಿದೆ ಎಂದು ನ್ಯಾಯಾಲಯಕ್ಕೆ ಎನ್ಐಎ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ.
ಐಎಸ್ಐಎಸ್ ಮಾದರಿ ಶಂಕೆ : ಕಾರಸಗೋಡಿನಲ್ಲಿ ಎನ್ಐಎ ಶೋಧ
ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಪ್ರಧಾನ ಸೂತ್ರಧಾರ ಜಹ್ರಾನ್ ಹಾಶಿಂನೊಂದಿಗೆ ಅಬೂಬಕ್ಕರ್ ಈ ಹಿಂದೆ ವಿಚಾರ ವಿನಿಮಯ ನಡೆಸಿದ್ದನೆಂಬುದನ್ನು ವಿಚಾರಣೆ ವೇಳೆ ಬಹಿರಂಗಗೊಂಡಿತ್ತು. ಈ ಹಿನ್ನೆಲೆಯಲ್ಲಿ ಶ್ರೀಲಂಕಾ ಬಾಂಬ್ ಸ್ಫೋಟದಲ್ಲಿ ಅಬೂಬಕ್ಕರ್ ಪಾತ್ರ ಹೊಂದಿದ್ದಾನೆಯೇ? ಎಂಬುದರ ಕುರಿತು ಎನ್ ಐಎ ತಂಡ ತನಿಖೆ ಆರಂಭಿಸಿದೆ.