ಬಿಜೆಪಿಯ ಮೂವರೂ ಸುಳ್ಯ ಮೂಲದವರಾದರೂ ಕಣಕ್ಕಿಳಿದಿರುವುದು ಬೇರೆ ಕ್ಷೇತ್ರದಿಂದ
ಮಂಗಳೂರು, ಮಾರ್ಚ್ 27:ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರ ಬಿಜೆಪಿಯ ಭದ್ರ ಕೋಟೆ. ಈವರೆಗೆ ನಡೆದಿರುವ ಚುನಾವಣೆಗಳಲ್ಲಿ ಕೇಸರಿ ಪಡೆಗೆ ಅತಿ ಹೆಚ್ಚು ಲೀಡ್ ತಂದು ಕೊಟ್ಟ ಕೀರ್ತಿ ಈ ಕ್ಷೇತ್ರಕ್ಕೆ ಇದೆ.
ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ಪೈಕಿ 7 ರಲ್ಲಿ ಬಿಜೆಪಿ ಸೋತಿದ್ದರೂ ಸುಳ್ಯ ವಿಧಾನ ಸಭಾ ಕ್ಷೇತ್ರದ ಮತದಾರರು ಮಾತ್ರ ಬಿಜೆಪಿಯ ಕೈ ಬಿಟ್ಟಿರಲಿಲ್ಲ. ಆದರೆ ಈಗ ಸುಳ್ಯ ವಿಧಾನಸಭಾ ಕ್ಷೇತ್ರ ಅಪರೂಪದ ಪ್ರಸಂಗಕ್ಕೆ ಮತ್ತೆ ಸುದ್ದಿಯಲ್ಲಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಹೌದು, ಸುಳ್ಯ ಕ್ಷೇತ್ರದ ವ್ಯಾಪ್ತಿಗೆ ಬರುವ ಮೂವರು ರಾಜಕಾರಣಿಗಳು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಅಲ್ಲದೇ ಈ ಬಾರಿಯ ಲೋಕಸಭಾ ಚುನಾವಣೆಯ ಅಖಾಡದಲ್ಲಿಯೂ ಟಿಕೆಟ್ ಪಡೆದಿದ್ದು ಜಯದ ನಿರೀಕ್ಷೆಯಲ್ಲಿದ್ದಾರೆ.
ಕರಾವಳಿಯಲ್ಲಿ ಕೇಸರಿ ಪಡೆಗೆ ಮೋದಿ ಹೆಸರಿನಲ್ಲಿ ಮತ ಕೇಳುವ ಅನಿವಾರ್ಯತೆ!
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್, ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸಚಿವ ಡಿ.ವಿ ಸದಾನಂದ ಗೌಡ ಈ ಮೂವರು ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯವರು ಎನ್ನುವುದು ವಿಶೇಷ. ಮುಂದೆ ಓದಿ...
ಮೂರನೇ ಬಾರಿ ಕಣದಲ್ಲಿರುವ ನಳಿನ್ ಕಟೀಲ್
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಅವರ ಹೆಸರಿನ ಎದುರು ಕಟೀಲ್ ಎಂದಿದ್ದರೂ ಅವರು ಶ್ರೀ ಕ್ಷೇತ್ರ ಕಟೀಲ್ ನವರಲ್ಲ. ನಳಿನ್ ಮೂಲತಃ ಸುಳ್ಯದ ಪಾಲ್ತಾಡಿ ಗ್ರಾಮದ ಕುಂಜಾಡಿಯವರು . ಆದರೆ ಈಗ ಮಂಗಳೂರಿನಲ್ಲಿ ನೆಲೆಸಿದ್ದಾರೆ. ಆದರೆ ನಳಿನ್ ಅವರ ತಾಯಿ ಈಗಲೂ ಕುಂಜಾಡಿಯಲ್ಲೇ ಇದ್ದಾರೆ. ಹೀಗಾಗಿ ನಳಿನ್ ಇಲ್ಲಿಗೆ ಆಗಾಗ ಬರುತ್ತಿರುತ್ತಾರೆ. ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷಕ್ಕೆ ಸೇವೆ ಸಲ್ಲಿಸಿದ್ದ ನಳಿನ್ ಕುಮಾರ್ ಕಟೀಲ್ ಅವರನ್ನು 2009ರಲ್ಲಿ ಬಿಜೆಪಿ ಲೋಕಸಭಾ ಚುನಾವಣೆಯ ಕಣಕ್ಕಿಳಿಸಿತ್ತು. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಮೊದಲ ಪ್ರಯತ್ನದಲ್ಲೇ ನಳಿನ್ ಗೆಲುವು ಸಾಧಿಸಿದರು. 2014 ಚುನಾವಣೆಯಲ್ಲೂ ಜಯಗಳಿಸಿದ್ದರು. ಈಗ ಮೂರನೇ ಬಾರಿ ಲೋಕಸಭಾ ಚುನಾವಣೆಯ ಕಣದಲ್ಲಿದ್ದಾರೆ.
ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಮೈತ್ರಿ ಗೆಲುವು ಸುಲಭವಲ್ಲ
ಜಯಪ್ರಕಾಶ್ ಹೆಗ್ಡೆಯವರನ್ನು ಸೋಲಿಸಿದ್ದ ಶೋಭಾ
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ಸಂಸದೆ ಶೋಭಾ ಕರಂದ್ಲಾಜೆ ಕೂಡ ಸುಳ್ಯ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯವರು. ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಚಾರ್ವಾಕ ಗ್ರಾಮ ಕರಂದ್ಲಾಜೆ ಶೋಭಾ ಅವರು ಊರು. ಶೋಭಾ ಕರಂದ್ಲಾಜೆ ರಾಜ್ಯ ರಾಜಕೀಯದಲ್ಲಿ ಪ್ರಭಾವಿ ರಾಜಕಾರಣಿ . 2004ರಲ್ಲಿ ವಿಧಾನಪರಿಷತ್ ಸದಸ್ಯರಾಗುವ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು.ಶೋಭಾ ಅವರು 2008ರಲ್ಲಿ ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ತದನಂತರ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಜಯಪ್ರಕಾಶ್ ಹೆಗ್ಡೆಯವರನ್ನು ಸೋಲಿಸಿ ಸಂಸದರಾಗಿ ಆಯ್ಕೆಯಾದರು. ಈ ಬಾರಿ ಮತ್ತೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.
ಏಪ್ರಿಲ್ 18ರಂದು ಮತದಾನ : ಜಿದ್ದಾಜಿದ್ದಿನ 6 ಕ್ಷೇತ್ರಗಳು
ಬೆಂ.ಉತ್ತರದಿಂದ ಅಖಾಡಕ್ಕಿಳಿದ ಸದಾನಂದ ಗೌಡ
ಕೇಂದ್ರ ಸಚಿವ ಸದಾನಂದ ಗೌಡ ಕೂಡ ಸುಳ್ಯ ವಿಧಾನ ಸಭಾ ಕ್ಷೇತ್ರದವರು. ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ದೇವರಗುಂಡ ಡಿವಿ ಸದಾನಂದ ಗೌಡ ಅವರ ಊರು. ಇವರು 1994 ರಿಂದ 2004 ರವರೆಗೆ ಎರಡು ಅವಧಿಗಳಲ್ಲಿ ಪುತ್ತೂರಿನಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. 2004ರಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ವೀರಪ್ಪ ಮೊಯ್ಲಿಯವರನ್ನು ಸೋಲಿಸಿ ಸಂಸದರಾದರು. ಬಳಿಕ 2009ರಲ್ಲಿ ಕಾಂಗ್ರೆಸ್ಸಿನ ಜಯಪ್ರಕಾಶ್ ಹೆಗ್ಡೆಯವರನ್ನು ಸೋಲಿಸಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಲೋಕಸಭೆಗೆ ಪ್ರವೇಶ ಮಾಡಿದರು.ಈ ಮಧ್ಯೆ 2011 ರಲ್ಲಿ ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ಅನುಭವ ಸದಾನಂದ ಗೌಡ ಅವರಿಗೆ ಇದೆ. ಇದೀಗ ಈ ಬಾರಿ ಲೋಕಸಭಾ ಚುನಾವಣೆಯಲ್ಲಿಯೂ ಡಿವಿಯವರು ಬೆಂಗಳೂರು ಉತ್ತರದಿಂದ ಅಖಾಡಕ್ಕಿಳಿದಿದ್ದಾರೆ.
ಮೂವರು ಅಭ್ಯರ್ಥಿಗಳು ಜಯಭೇರಿ ಬಾರಿಸುತ್ತಾರಾ?
ಕಳೆದ 30 ವರ್ಷಗಳಿಂದ ಬಿಜೆಪಿಯ ಭದ್ರ ಕೋಟೆ ಎಂದೇ ಜನಜನಿತವಾಗಿರುವ ಸುಳ್ಯ ವಿಧಾನ ಸಭಾ ಕ್ಷೇತ್ರ ಈ ಬಾರಿ ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಸುದ್ದಿಯಾಗುತ್ತಿದೆ. ಹಲವಾರು ವರ್ಷಗಳಿಂದ ಈ ಬಿಜೆಪಿ ಕೋಟೆಗೆ ನುಗ್ಗಲು ಕಾಂಗ್ರೆಸ್ ಶತಗತಾಯ ಪ್ರಯತ್ನ ಮಾಡಿದ್ದರೂ ನಿರೀಕ್ಷಿತ ಫಲ ಈವರೆಗೂ ಸಿಕ್ಕಿಲ್ಲ. ಇನ್ನು ಈ ಕ್ಷೇತ್ರದಿಂದ ರಾಜಕೀಯ ಪ್ರವೇಶಿಸಿರುವ ಈ ಮೂವರು ಅಭ್ಯರ್ಥಿಗಳು ಇತರ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸುತ್ತಾರಾ? ಎಂಬುದೇ ಇಲ್ಲಿಯ ಜನರ ಅನಿಸಿಕೆ.