ಮಂಗಳೂರು: ಮೂರು ಸೇತುವೆಗಳು ಸಂಚಾರಕ್ಕೆ ಅನರ್ಹ
ಮಂಗಳೂರು, ಜುಲೈ.05: ಮಂಗಳೂರು-ಬಂಟ್ವಾಳ ತಾಲೂಕನ್ನು ಸಂಪರ್ಕಿಸುವ ಮೂಲರಪಟ್ನ ಸೇತುವೆ ಇತ್ತೀಚೆಗೆ ಮುರಿದು ಬಿದ್ದ ನಂತರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಲೋಕೋಪಯೋಗಿ ಇಲಾಖೆ ಜಿಲ್ಲೆಯ ಎಲ್ಲಾ ಸೇತುವೆಗಳ ಪರಿಶೀಲನೆ ಆರಂಭಿಸಿತ್ತು.
ಈ ನಡುವೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಂಗಳೂರು ವಿಭಾಗದಿಂದ ಗೋವಾದಿಂದ ಕೇರಳ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇರುವ ಎಲ್ಲಾ ಬೃಹತ್ ಸೇತುವೆಗಳ ಪರಿಶೀಲನೆ ನಡೆಸಿದ್ದಾರೆ.
ಅಪಾಯದಲ್ಲಿದೆ ಜಯಚಾಮರಾಜೇಂದ್ರ ಒಡೆಯರ್ ತೂಗುಸೇತುವೆ
ಗೋವಾ - ಕೇರಳ ನಡುವೆ ಕರಾವಳಿ ಜಿಲ್ಲೆಗಳ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಟ್ಟು 36 ಸೇತುವೆಗಳಿವೆ. ಅದರಲ್ಲಿ 20 ಕಿರು ಮತ್ತು 16 ಬೃಹತ್ ಸೇತುವೆಗಳಿವೆ. ಎಲ್ಲಾ ಸೇತುವೆಗಳನ್ನೂ ತಪಾಸಣೆ ನಡೆಸಲಾಗಿದೆ. ಇದರಲ್ಲಿ ಮೂರು ಬೃಹತ್ ಸೇತುವೆಗಳು ಸಂಚಾರಕ್ಕೆ ಅನರ್ಹ ಎಂದು ಇತ್ತೀಚೆಗೆ ನಡೆಸಿದ ತಪಾಸಣೆ ವರದಿ ಬಹಿರಂಗ ಪಡಿಸಿದೆ.
ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹೈದರಾಬಾದ್ ನ ಮೆಸರ್ಸ್ ಆವ್ರಿ ಅಸೋಸಿಯೇಟ್ಸ್ ಎಂಬ ಏಜೆನ್ಸಿಯನ್ನು ನೇಮಕ ಮಾಡಿದ್ದು, ಅದು ಎಂಬಿಐವಿ ಯಂತ್ರ ಬಳಸುವ ಮೂಲಕ ಸೇತುವೆಗಳ ಮೇಲ್ಭಾಗ, ಕೆಳ ಭಾಗದ ತಪಾಸಣೆ, ದಾಖಲೆ ಮತ್ತು ಮಾದರಿಗಳನ್ನು ಸಂಗ್ರಹಿಸಿದೆ.
ಈಗ ಸೇತುವೆ ತಪಾಸಣೆ ವರದಿ ಬಹಿರಂಗಗೊಂಡಿದ್ದು, ಅದರಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಪ್ರಮುಖ ಮೂರು ಸೇತುವೆಗಳು ಸಂಚಾರಕ್ಕೆ ಯೋಗ್ಯವಲ್ಲ ಎಂದು ವರದಿ ಬಂದಿದೆ. ಅದರಲ್ಲಿ ಮಂಗಳೂರಿನ ಕೂಳೂರು ಸೇತುವೆ, ಹೊನ್ನಾವರದ ಶರಾವತಿ ಸೇತುವೆ ಮತ್ತು ಕುಮಟಾದ ಮಿರ್ಜಾನ್ ಸೇತುವೆಗಳು ಒಳಗೊಂಡಿದೆ.
ಈ ಸಂಚಾರಕ್ಕೆ ಅನರ್ಹವಾದ ಮೂರು ಸೇತುವೆಗಳ ಪೈಕಿ ಕೂಳೂರು ಸೇತುವೆ ಸಂಪೂರ್ಣಲಾಗಿ ಶಿಥಿಲವಾಗಿದ್ದು, ಅದರ ಬದಲಿಗೆ ಹೊಸ ಸೇತುವೆ ನಿರ್ಮಾಣವಾಗಬೇಕಿದೆ. ಉಳಿದ ಹೊನ್ನಾವರದ ಶರಾವತಿ ಮತ್ತು ಕುಮಟಾದ ಮಿರ್ಜಾನ್ ಸೇತುವೆಗಳ ದುರಸ್ಥಿ ಕಾರ್ಯ ಕೈಗೊಳ್ಳಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನೆ ರೂಪಿಸುತ್ತಿದೆ.
ಈ ನಡುವೆ ಶಿಥಿಲಗೊಂಡಿರುವ ಗುರುಪುರ ಸೇತುವೆ ಮರು ನಿರ್ಮಾಣಕ್ಕೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯಕ್ಕೆ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಎಚ್.ಡಿ ರೇವಣ್ಣ ತಿಳಿಸಿದ್ದಾರೆ.
ವಿಧಾನ ಪರಿಷತ್ ನಲ್ಲಿ ಸದಸ್ಯ ಐವನ್ ಡಿಸೋಜ ಅವರು ಮಂಗಳೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 169ರ ಗುರುಪುರ ಸೇತುವೆ ತೀರಾ ದುಸ್ಥಿತಿಯಲ್ಲಿದ್ದು ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಗಮನ ಸೆಳೆಯುವ ಸೂಚನೆ ಮಂಡಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಎಚ್.ಡಿ. ರೇವಣ್ಣ ಪ್ರಸ್ತಾವನೆಗೆ ಅನುಮೋದನೆ ದೊರೆತ ಕೂಡಲೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.