ಮಂಗಳೂರು ಹೊರವಲಯದಲ್ಲಿ ಉದ್ಯಮಿ ದರೋಡೆ ಪ್ರಕರಣ; ಮೂವರ ಬಂಧನ
ಮಂಗಳೂರು, ಜುಲೈ 18: ಮಂಗಳೂರು ಹೊರವಲಯದ ಮಳಲಿ ಎಂಬಲ್ಲಿ ಜುಲೈ 14ರಂದು ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜ್ಪೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ವಿಟ್ಲ ಬಳಿ ಐಸ್ ಕ್ರೀಂ ವ್ಯಾನ್ ನಲ್ಲಿ ನಡೆಯುತ್ತಿತ್ತು ಅಕ್ರಮ ಗೋಸಾಗಾಟ
ಬಂಧಿತರನ್ನು ಉಳಾಯಿಬೆಟ್ಟು ನಿವಾಸಿ ಆಶ್ಲೇಷ್ ಎ.ಕೋಟ್ಯಾನ್, ಮೂಳೂರು ನಿವಾಸಿ ಅಬ್ದುಲ್ ಅಝೀಝ್ ನೌಶಾದ್ ಮತ್ತು ಕೈಕಂಬ ನಿವಾಸಿ ಮುಹಮ್ಮದ್ ಮುಸ್ತಫಾ ಎನ್ನಲಾಗಿದೆ. ಬಂಧಿತರಿಂದ 21,800 ರೂಪಾಯಿ ನಗದು, ಒಂದು ಬೈಕ್, ಮೂರು ಮೊಬೈಲ್ ಫೋನ್, ಕೃತ್ಯಕ್ಕೆ ಬಳಸಿದ್ದ ತಲವಾರು, ಚೂರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಫೈನಾನ್ಸ್ ವ್ಯವಹಾರ ಮಾಡುತ್ತಿದ್ದ ಮರೊಳಿ ನಿವಾಸಿ ಸೆಂಥಿಲ್ ಕುಮಾರ್ ಎಂಬುವರು ಜುಲೈ14ರಂದು ಸಂಜೆ ಬೈಕ್ ನಲ್ಲಿ ಮೊಗರು ಗ್ರಾಮದ ಮಳಲಿ ಸೈಟ್ಗೆ ಹೋಗುತ್ತಿದ್ದ ವೇಳೆ ಎರಡು ಬೈಕ್ ಗಳಲ್ಲಿ ಬಂದ ನಾಲ್ವರ ತಂಡ ಅವರನ್ನು ಅಡ್ಡಗಟ್ಟಿ, ಮಾರಕಾಯುಧಗಳಿಂದ ಬೆದರಿಸಿ ಅವರಲ್ಲಿದ್ದ 2.05 ಲಕ್ಷ ರೂಪಾಯಿ ದೋಚಿ ಪರಾರಿಯಾಗಿತ್ತು. ಈ ಬಗ್ಗೆ ಅವರು ನೀಡಿರುವ ದೂರಿನಂತೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ತನಿಖೆ ಆರಂಭಿಸಿದ್ದರು.