ಮಿಥುನ್ ರೈಗೆ ಬಹಿರಂಗ ಬೆದರಿಕೆ ಒಡ್ಡಿದ್ದ ಮೂವರ ಬಂಧನ
ಮಂಗಳೂರು ಮೇ 28: ವಿಜಯೋತ್ಸವದ ಸಂದರ್ಭ ಮಿಥುನ್ ರೈಗೆ ಬಹಿರಂಗ ಬೆದರಿಕೆ ಒಡ್ಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ವಿರುದ್ಧ ಭಾರೀ ಮತಗಳ ಅಂತರದಿಂದ ಸೋತ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಿಥುನ್ ರೈಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕೊಲೆ ಬೆದರಿಕೆವೊಡ್ಡಲಾಗಿತ್ತು. ಈ ಕುರಿತ ವಿಡಿಯೋಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಮಿಥುನ್ ರೈಗೆ ಬಹಿರಂಗ ಬೆದರಿಕೆಯ ವಿಡಿಯೋ ವೈರಲ್
ವಿಜಯೋತ್ಸವ ಸಂದರ್ಭವನ್ನು ಬಳಸಿಕೊಂಡ ಕಾರ್ಯಕರ್ತರು ಭಜರಂಗದಳವನ್ನು ನಿಷೇಧಿಸುವ ಮಾತೆತ್ತಿದರೆ, ಕೈಕಾಲು ಇರಲ್ಲ, ಮತ್ತೂ ಮೀರಿದರೆ ತಲೆಯೂ ಇರಲ್ಲ ಎನ್ನುವ ಬೆದರಿಕೆಯ ಘೋಷಣೆಗಳನ್ನು ಹಾಕಿದ್ದು ವಿಡಿಯೋ ತುಣುಕಲ್ಲಿ ದಾಖಲಾಗಿತ್ತು.
ಮೇ 23ರಂದು ಬಂಟ್ವಾಳ ತಾಲೂಕಿನ ಬಡಕಬೈಲ್ ನಲ್ಲಿ ನಡೆದ ವಿಜಯೋತ್ಸವದ ವೇಳೆ ಘೋಷಣೆ ಕೂಗಿದ್ದ ಬಿಜೆಪಿ ಕಾರ್ಯಕರ್ತರು ಕೊಲೆ ಬೆದರಿಕೆ ಒಡ್ಡಿದ್ದರು. ಇದರನ್ವಯ ಪೊಲೀಸರು ಸಿಆರ್ ಪಿಸಿ ಸೆಕ್ಷನ್ 108ರಡಿ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದು, ಬಂಟ್ವಾಳದ ನಿವಾಸಿಗಳಾದ ಸಚಿನ್ (25), ನಿಶಾಂತ್ (23), ಕಾಸರಗೋಡು ನಿವಾಸಿ ಕಾರ್ತಿಕ್ (30)ರನ್ನು ಪೊಲೀಸರು ಬಂಧಿಸಿದ್ದಾರೆ. ಇವರ ವಿರುದ್ಧ ಕೊಲೆ ಬೆದರಿಕೆ, ಶಾಂತಿ ಕದಡಲು ಯತ್ನ ಸೇರಿದಂತೆ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿದೆ.