ಬೆಂಗರೆ ಘರ್ಷಣೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ: ಜೆ.ಆರ್.ಲೋಬೋ
ಮಂಗಳೂರು, ಫೆಬ್ರವರಿ 22: ಮಂಗಳೂರು ಹೊರವಲಯದ ಬೆಂಗರೆ ಎಂಬಲ್ಲಿ ಮಂಗಳವಾರ ರಾತ್ರಿ ನಡೆದ ಅಹಿತಕರ ಘಟನೆಗೆ ಸಂಬಂಧಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಜೆ.ಆರ್.ಲೋಬೋ ಒತ್ತಾಯಿಸಿದ್ದಾರೆ .
ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು ಅಹಿತಕರ ಘಟನೆ ನಡೆದ ಬೆಂಗರೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ ಎಂದು ಹೇಳಿದರು.
ಮಂಗಳವಾರ ಸಂಜೆ ಉಡುಪಿಯ ಮಲ್ಪೆಯಲ್ಲಿ ನಡೆದ ಮೀನುಗಾರರ ಸಮಾವೇಶಕ್ಕೆ ಬೆಂಗರೆಯಿಂದ 5 ಬಸ್ಗಳಲ್ಲಿ ಮೀನುಗಾರರು ತೆರಳಿದ್ದರು. ತಡರಾತ್ರಿ ವಾಪಸ್ ಬರುತ್ತಿದ್ದಾಗ ಕೊನೆಯ ಬಸ್ನಲ್ಲಿದ್ದ ಮಂದಿ ಕಸಬಾ ಬೆಂಗರೆಯಲ್ಲಿ ಘೋಷಣೆ ಕೂಗಿದ್ದರು. ಈ ಪರಿಣಾಮ ಅಲ್ಲಿ ಅಹಿತಕರ ಘಟನೆ ನಡೆದಿದೆ ಎಂದು ಅವರು ಅಭಿಪ್ರಾಯಪಟ್ಟರು.
ಬಳಿಕ ಎರಡೂ ಕಡೆಯ ಮುಖಂಡರು ಸೇರಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು . ಆದರೆ ತಡ ರಾತ್ರಿ ಎರಡೂ ಕೋಮಿಗೆ ಸೇರಿದವರ ಆಸ್ತಿಪಾಸ್ತಿಯನ್ನು ಹಾನಿಗೊಳಿಸುವ ಕೃತ್ಯ ನಡೆದಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.
ಇದೊಂದು ಕಿಡಿಗೇಡಿಗಳ ಕೃತ್ಯವಾಗಿದೆ. ಇದುವರೆಗೆ ಬೆಂಗರೆಯಲ್ಲಿ ಶಾಂತಿ ಕದಡಿದ ಉದಾಹರಣೆಗಳು ಇಲ್ಲ. ಈ ಘಟನೆ ನನಗೆ ಬೇಸರ ತರಿಸಿದೆ ಎಂದು ಹೇಳಿದ ಅವರು, "ಇನ್ನು ಮುಂದೆ ಇಂತಹ ಘಟನೆಗಳಿಗೆ ಅವಕಾಶ ನೀಡಬಾರದು," ಎಂದು ಮನವಿ ಮಾಡಿಕೊಂಡರು.
ಇಂದು (ಮಂಗಳವಾರ) ಬೆಂಗರೆಗೆ ಭೇಟಿ ನೀಡಿ ಉಭಯ ಕೋಮಿನ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದೇನೆ. ಬೆಂಗರೆಗೆ ತೆರಳಲು ಒಂದೇ ರಸ್ತೆ ಇದ್ದು, ಇಂತಹ ಘಟನೆಗಳು ಸಂಭವಿಸಿದರೆ, ಉಳಿದ ಕುಟುಂಬಗಳ ನೆಮ್ಮದಿಗೆ ಭಂಗ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಘಟನೆಯಲ್ಲಿ ಯಾರೇ ತಪ್ಪಿತಸ್ಥರಿದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.