ಮೋದಿ ಮೋಡಿಗೊಳಗಾಗಿ ತವರಿಗೆ ಮರಳಿದ ಕನ್ನಡಿಗ ಅಶ್ವಿನ್ ಶೆಟ್ಟಿ
Recommended Video
ಮಂಗಳೂರು, ಆಗಸ್ಟ್ 28: ಭಾರತದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಿ ಅಮೆರಿಕ, ಇಂಗ್ಲೆಂಡ್, ಜರ್ಮನಿ ಹೀಗೆ ಬೇರೆ ದೇಶಗಳಿಗೆ ಹೋಗಿ ಹಣ ಸಂಪಾದನೆ ಮಾಡುವ ಕಾಲವಿದು.
ಆದರೆ, ವಿದೇಶದಲ್ಲಿ ಲಕ್ಷಾಂತರ ರುಪಾಯಿ ಸಂಬಳ ಇದ್ದರೂ ತಾಯ್ನಾಡಿಗೆ ಏನಾದರೂ ಸೇವೆ ಮಾಡಬೇಕೆಂಬ ಉದ್ದೇಶದಿಂದ ಅವೆಲ್ಲವನ್ನೂ ಬಿಟ್ಟು ಊರಿನ ಮಕ್ಕಳಿಗೆ ಪಠ್ಯ ಶಿಕ್ಷಣದ ಜೊತೆಗೆ ಪಠ್ಯೇತರ ಶಿಕ್ಷಣವನ್ನು ನೀಡುತ್ತಿರುವ ಅಶ್ವಿನ್ ಎಲ್. ಶೆಟ್ಟಿ ಅವರು ಬದುಕಿನ ಕಥೆಯಿದು.
ಧರ್ಮ, ರಾಜಕೀಯದ ಹೆಸರಲ್ಲಿ ಹಿಂಸಾಚಾರ ಸಹಿಸಲು ಸಾಧ್ಯವಿಲ್ಲ: ಮೋದಿ
ಮಂಗಳೂರಿನಿಂದ 75 ಕಿ.ಮೀ. ದೂರದ ಸವಣೂರು ಎಂಬಲ್ಲಿ ವಿದ್ಯಾರಶ್ಮಿ ಗ್ರೂಪ್ ಆಫ್ ಇನ್ ಸ್ಟಿಟ್ಯೂಟ್ ಎಂಬ ಶಿಕ್ಷಣ ಸಂಸ್ಥೆ ಇದೆ. ಇದರ ಮುಖ್ಯಸ್ಥರಾಗಿ ಅಶ್ವಿನ್ ಶೆಟ್ಟಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಅಂದಹಾಗೆ, ಅಶ್ವಿನ್ ಅವರು 14 ವರ್ಷಗಳಿಂದ ಆಸ್ಟ್ರೇಲಿಯಾ, ಜರ್ಮನಿ, ಫ್ರಾನ್ಸ್ ದೇಶಗಳಲ್ಲಿ ಏರ್ ಬಸ್ ನಲ್ಲಿ ಟೆಕ್ನಿಕಲ್ ಅಸಿಸ್ಟೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಉದ್ದೇಶ, ದೂರದೃಷ್ಟಿಗೆ ಮನಸೋತ ಅಶ್ವಿನ್ ತಾಯ್ನಾಡಿಗೆ ಸೇವೆ ಮಾಡಬೇಕೆಂಬ ಒಂದೇ ಉದ್ದೇಶದಿಂದ ಮರಳಿ ದೇಶಕ್ಕೆ ಬಂದಿದ್ದಾರೆ.
ಆಸ್ಟ್ರೇಲಿಯಾಕ್ಕೆ ಅಶ್ವಿನ್
ಅಶ್ವಿನ್ ಡಿಪ್ಲೊಮಾದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ತಂದಿದ್ದರು. ಆ ನಂತರ ಹೆಚ್ಚಿನ ತರಬೇತಿಗಾಗಿ ಆಸ್ಟ್ರೇಲಿಯಾಕ್ಕೆ ಹೋಗಿ, ಅಲ್ಲಿಯೇ ವೃತ್ತಿ ಜೀವನ ಆರಂಭಿಸಿದರು. ಇವರ ಕೆಲಸದ ಕೌಶಲ ನೋಡಿದ ಉಳಿದ ಕಂಪೆನಿಗಳು ಆಹ್ವಾನ ನೀಡಿದವು.
ಲಕ್ಷ ಲಕ್ಷ ಸಂಬಳ ಬಿಟ್ಟು ಬಂದರು
ಹೀಗೆ ವಿದೇಶದಲ್ಲಿ ಸುಮಾರು 14 ವರ್ಷಗಳ ಕಾಲ ಕೆಲಸ ಮಾಡಿದರು. ಅಶ್ವಿನ್ ವಾರ್ಷಿಕ ಆದಾಯ 2.4 ಲಕ್ಷ ಡಾಲರ್ ಆಗಿತ್ತು. ಪ್ರಧಾನಿ ಮೋದಿ ಕಟ್ಟಾ ಅಭಿಮಾನಿಯಾಗಿರುವ ಇವರು 'ಮೇಕ್ ಇನ್ ಇಂಡಿಯಾ' ಯೋಜನೆಯಿಂದ ಪ್ರೇರಣೆಗೊಂಡು ಕಳೆದ ವರ್ಷ ತಾಯ್ನಾಡಿಗೆ ಮರಳಿದ್ದಾರೆ.
ಪಠ್ಯ ಜೊತೆ ಪಠ್ಯೇತರ ಚಟುವಟಿಕೆ
ತಮ್ಮ ಚಿಕ್ಕಪ್ಪ ಆರಂಭಿಸಿದ ವಿದ್ಯಾರಶ್ಮಿ ಶಾಲೆಯನ್ನು ನಡೆಸಿಕೊಂಡು ಹೋಗುತ್ತಿರುವ ಅಶ್ವಿನ್ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡುತ್ತಿದ್ದಾರೆ. ಇದಕ್ಕಾಗಿ ತ್ರಿಸೂತ್ರ ಅಂಶಗಳನ್ನು ಅಳವಡಿಸಿಕೊಂಡಿದ್ದಾರೆ.
ಅವು ಯಾವುವು ಎಂದರೆ ಕೇರ್ ಫಾರ್ ಕಂಟ್ರಿ, ಕೇರ್ ಫಾರ್ ಎನ್ವಾರ್ನೈಮೆಂಟ್, ಕೇರ್ ಫಾರ್ ಅದರ್ಸ್. ಈ ಮೂರು ಅಂಶದೊಂದಿಗೆ ಮಕ್ಕಳಿಗೆ ಭಾರತೀಯ ಸಂಸ್ಕೃತಿ, ದೇಶಾಭಿಮಾನ, ಪರಿಸರ ಸಂರಕ್ಷಣೆ ಹೀಗೆ ಹತ್ತು ಹಲವು ಅಂಶಗಳನ್ನು ಕಲಿಸಿಕೊಡುತ್ತಿದ್ದಾರೆ.
ಸಂಸ್ಕೃತ ಪಾಠ
ಎಲ್ ಕೆಜಿ ತರಗತಿಯಿಂದ ಪದವಿವರೆಗೆ ಇರುವ ಈ ಶಿಕ್ಷಣ ಸಂಸ್ಥೆಯಲ್ಲಿ 1000 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. 5ನೇ ತರಗತಿಯಿಂದ ಮೆಟ್ರಿಕ್ ಶಿಕ್ಷಣದವರೆಗೆ ಸಂಸ್ಕೃತ ಪಾಠವನ್ನು ಹೇಳಿಕೊಡಲಾಗುತ್ತದೆ. ಜೊತೆಗೆ ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿಗಳು, ವಿಜ್ಞಾನಿಗಳು, ಭಾರತೀಯ ಕಂಪೆನಿಗಳ ಸಿಇಒಗಳಿಂದ ವಿಶೇಷ ಉಪನ್ಯಾಸ ನೀಡಲಾಗುತ್ತಿದೆ.
ನಮ್ಮ ಮಣ್ಣಿಗೆ ಸೇವೆ
"ನಾವು ಭಾರತೀಯರು. ಇಲ್ಲಿನ ಅನ್ನ ತಿಂದು ಬೇರೆ ದೇಶಕ್ಕೆ ನಮ್ಮ ಕೌಶಲ್ಯವನ್ನು ಧಾರೆಯೆರೆಯುವ ಬದಲಾಗಿ ನಮ್ಮ ಮಣ್ಣಿಗೆ ಸೇವೆ ಸಲ್ಲಿಸುವುದು ಕರ್ತವ್ಯ ಆಗಬೇಕು. ಈ ಹಿನ್ನೆಲೆಯಲ್ಲಿ ಪಠ್ಯದ ಜೊತೆ ನಮ್ಮ ದೇಶದ ಸಂಸ್ಕೃತಿ, ರಾಷ್ಟ್ರಾಭಿಮಾನ, ಪರಿಸರ ಕಾಳಜಿ ಬಗ್ಗೆ ಮಕ್ಕಳಿಗೆ ತಿಳಿ ಹೇಳುತ್ತಿದ್ದೇವೆ" ಎಂದು ಒನ್ಇಂಡಿಯಾ ಕನ್ನಡಕ್ಕೆ ಅಶ್ವಿನ್ ತಿಳಿಸಿದ್ದಾರೆ.