ಇದೇ ಮೊದಲ ಬಾರಿಗೆ ವಿಶ್ವದ ಹನ್ನೊಂದು ರಾಷ್ಟ್ರದಲ್ಲಿ ತೆರೆ ಕಾಣಲಿದೆ ತುಳು ಸಿನಿಮಾ!
ಮಂಗಳೂರು, ಏಪ್ರಿಲ್ 18: ತುಳು ಚಿತ್ರರಂಗ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಇದೇ ಮೊದಲ ಬಾರಿಗೆ ಪ್ರಪಂಚದ 11 ರಾಷ್ಟ್ರದಲ್ಲಿ ತುಳು ಚಿತ್ರ ಬಿಡುಗಡೆಯಾಗುತ್ತಿದೆ. ತುಳು ಚಿತ್ರರಂಗದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ತುಳು ಸಿನಿಮಾ ವಿಶ್ವದ ಹನ್ನೊಂದು ರಾಷ್ಟ್ರದಲ್ಲಿ ಪ್ರೀಮಿಯರ್ ಷೋ ನಡೆಯಲಿದೆ.
ಮೇ 13, 14, 15ರಂದು ವೈಭವ್ ಪ್ರಿಕ್ಸ್ನ ಮ್ಯಾಂಗೋ ಪಿಕಲ್ ಬ್ಯಾನರ್ ಅಡಿಯಲ್ಲಿ ತಯಾರಾದ ರಾಜ್ ಸೌಂಡ್ಸ್ ಆಂಡ್ ಲೈಟ್ಸ್ ತುಳು ಸಿನಿಮಾದ ಪ್ರೀಮಿಯರ್ ಷೋ ಪ್ರದರ್ಶನ ಕಾಣಲಿದೆ.
ಈ ಪ್ರೀಮಿಯರ್ ಷೋ ಇದರ ಅಧೀಕೃತ ಉದ್ಘಾಟನೆ ಎಪ್ರಿಲ್ ೨೪ರಂದು ದುಬೈಯಲ್ಲಿರುವ ಮಾರ್ಕೋ ಪೋಲೊ ಹೋಟೆಲ್ನಲ್ಲಿ ನಡೆಯಲಿದೆ. ವಿದೇಶದಲ್ಲಿರುವ ತುಳುವರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಈ ಪ್ರೀಮಿಯರ್ ಷೋ ನಡೆಯಲಿದೆ..
ರಾಜ್ ಸೌಂಡ್ಸ್ & ಲೈಟ್ಸ್ ತುಳು ಚಲನಚಿತ್ರ ಯುಎಸ್ಎ, ಲಂಡನ್, ಬಹ್ರೇನ್, ಕುವೈತ್, ನೈಜೀರಿಯಾ, ಜಾಂಬಿಯಾ, ಸೌದಿ ಅರೇಬಿಯಾ, ಇಸ್ರೇಲ್, ಕತಾರ್, ಯುಎಇ ಮತ್ತು ಒಮಾನ್ ರಾಷ್ಟ್ರದಲ್ಲಿ ಚಿತ್ರದ ಪ್ರೀಮಿಯರ್ ಷೋ ತೆರೆ ಕಾಣಲಿದೆ.
ಅಲ್ಲದೇ ದೇಶದ ಆರು ಮಹಾನಗರದಲ್ಲೂ ಚಿತ್ರ ತೆರೆಕಾಣಲಿದೆ. ಮಂಗಳೂರು, ಬೆಂಗಳೂರು, ಮೈಸೂರು, ಬರೋಡಾ ,ಪೂಣೆ ಮತ್ತು ಮುಂಬೈ ನಗರದಲ್ಲಿ ಚಿತ್ರ ಪ್ರದರ್ಶನ ಆಗಲಿದೆ. ಈ ಚಿತ್ರ ತುಳು ಚಿತ್ರರಂಗದ ಅತೀ ದೊಡ್ಡ ಚಿತ್ರವಾಗಿದ್ದು, ಸುಮಾರು ಒಂದೂವರೆ ಕೋಟಿ ರೂಪಾಯಿ ಬಜೆಟ್ ಹಾಕಲಾಗಿದೆ.
ರಾಜ್ ಸೌಂಡ್ಸ್ & ಲೈಟ್ಸ್ ಚಿತ್ರ ಮೇ 20ರಂದು ತೆರೆ ಕಾಣಲಿದ್ದು, ಒಂದು ಮೊಟ್ಟೆಯ ಕಥೆ ಚಿತ್ರ ತಂಡದ ನೇತೃತ್ವದಲ್ಲಿ ವೈಭವ್ ಪ್ರಿಕ್ಸ್ ಅಡಿಯಲ್ಲಿ, ಮ್ಯಾಂಗೋ ಪಿಕಲ್ ಬ್ಯಾನರ್ ಸಹಭಾಗಿತ್ವದಲ್ಲಿ ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ಚಿತ್ರ ನಿರ್ಮಾಣಗೊಂಡಿದೆ. ಈ ಚಿತ್ರ ಸಂಪೂರ್ಣ ಫ್ಯಾಮಿಲಿ ಎಂಟಟೈನ್ಮೆಂಟ್ ಚಿತ್ರವಾಗಿದ್ದು, ಮೇ 20ರಂದು ಕರಾವಳಿ ಜಿಲ್ಲೆಯಾದ್ಯಂತ ಪ್ರದರ್ಶನ ಕಾಣಲಿದೆ.
ಈ ಚಿತ್ರವನ್ನು ಯುವ ನಟ ರಾಹುಲ್ ಅಮೀನ್ ನಿರ್ದೇಶನ ಮಾಡಿದ್ದು, ಚಿತ್ರಕ್ಕೆ ಆನಂದ್ ಎನ್. ಕುಂಪಲ ನಿರ್ಮಾಪಕರಾಗಿದ್ದಾರೆ. ಸಿನಿಮಾದ ನಾಯಕ ನಟ ವಿನೀತ್ ಕುಮಾರ್ ಆಗಿದ್ದು, ಅವರೇ ಸಿನಿಮಾ ಕಥೆಯನ್ನು ಮಾಡಿದ್ದಾರೆ. ಚಿತ್ರ ಸಂಭಾಷಣೆಯನ್ನು ಪ್ರಸನ್ನ ಶೆಟ್ಟಿ ಬೈಲೂರು, ಛಾಯಾಗ್ರಹಣವನ್ನು ವಿಷ್ಣು ಪ್ರಸಾದ್ ಮಾಡಿದ್ದಾರೆ.
ಸಂಗೀತ ನಿರ್ದೇಶನವನ್ನು ಸೃಜನ್ ಕುಮಾರ್ ತೋನ್ಸೆ, ನೃತ್ಯ ಸಂಯೋಜನೆಯನ್ನು ನವೀನ್ ಶೆಟ್ಟಿ ಮಾಡಿದ್ದಾರೆ. ಚಿತ್ರಕಥೆಯನ್ನು ವಿನೀತ್ ಕುಮಾರ್ ಮತ್ತು ರಾಹುಲ್ ಅಮೀನ್ ಬರೆದಿದ್ದಾರೆ.
ನಾಯಕರಾಗಿ ವಿನೀತ್ ಕುಮಾರ್, ನಾಯಕಿಯಾಗಿ ಯಶ್ ಶಿವಕುಮಾರ್ ಹಾಗೂ ನಾಯಕಿ ಕರಿಷ್ಮಾ ಅಮೀನ್ ಅಭಿನಯಿಸಿದ್ದಾರೆ. ತಾರಾಗಣದಲ್ಲಿ ಹಾಸ್ಯ ದಿಗ್ಗಜರಾದ ನವೀನ್ ಡಿ. ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು ಹಾಗೂ ಸತೀಶ್ ಬಂದಲೆ, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ, ಮರ್ವಿನ್, ಉಮೇಶ್ ಮಿಜಾರ್, ರವಿ ರಾಮಕುಂಜ, ಚೈತ್ರ ಶೆಟ್ಟಿ (ಚಿಂಪು) ಹಾಗೂ ಇನ್ನಿತರ ಕಲಾವಿದರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಬಿ. ಅಶೋಕ್ ಕುಮಾರ್, ಸುಹಾನ್ ಪ್ರಸಾದ್, ಪವನ್ ಕುಮಾರ್, ನಿತಿನ್ ರಾಜ್ ಶೆಟ್ಟಿ, ಅರ್ಪಿತ್ ಅಡ್ಯಾರ್, ಅಜಯ್ ಬಾಳಿಗ, ಸೀತಾರಾಮ ಶೆಟ್ಟಿ ಇವರು ಸಹ ನಿರ್ಮಾಪಕರಾಗಿದ್ದಾರೆ.