ದುರ್ಗಾಪರಮೇಶ್ವರಿಗೆ ಅವಮಾನ: ಫೇಸ್ ಬುಕ್ ಗೆ ಮೂರನೇ ನೋಟಿಸ್
ಮಂಗಳೂರು, ಸೆಪ್ಟೆಂಬರ್ 15: ಸಾಮಾಜಿಕ ಜಾಲತಾಣದಲ್ಲಿ ಕಟೀಲು ದುರ್ಗಾಪರಮೇಶ್ವರಿ ಅವಹೇಳನ ಮಾಡಿದ ಪ್ರಕರಣ ತನಿಖೆಗೆ ಅಗತ್ಯವಿರುವ ಮಾಹಿತಿ ಹಂಚಿಕೊಳ್ಳುವಂತೆ ಫೇಸ್ಬುಕ್ ಕಂಪೆನಿಗೆ ಮೂರನೇ ನೋಟಿಸ್ ಕಳುಹಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಎಂ. ಚಂದ್ರಶೇಖರ್ ತಿಳಿಸಿದ್ದಾರೆ.
'ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನ ತನಿಖೆಗೆ ಸಹಕಾರ ನೀಡುವಂತೆ ಫೇಸ್ಬುಕ್ ಕಂಪೆನಿಗೆ ಎರಡು ನೋಟಿಸ್ ಕಳುಹಿಸಲಾಗಿತ್ತು. ಅದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದೀಗ ಮೂರನೇ ನೋಟಿಸ್ ಕಳುಹಿಸಿದ್ದು, ಪ್ರತಿಕ್ರಿಯೆ ನೀಡದಿದ್ದರೆ ಕಾನೂನಿನ ವ್ಯಾಪ್ತಿಯಲ್ಲಿ ಮುಂದಿನ ಕ್ರಮ ಜರುಗಿಸಲಾಗುವುದು' ಎಂದರು.[ಫೇಸ್ ಬುಕ್ ನಲ್ಲಿ ದೇವಿ ನಿಂದನೆ: ಕಟೀಲಿನಲ್ಲಿ ಪಾದಯಾತ್ರೆ]
'ಫೇಸ್ಬುಕ್ ದೊಡ್ಡ ಕಂಪೆನಿ ಇರಬಹುದು. ಆದರೆ, ಸಾಮಾಜಿಕ ಸ್ವಾಸ್ಥ್ಯ ಕಾಯ್ದುಕೊಳ್ಳುವುದು, ದೇಶದ ಸಮಗ್ರತೆ ಮತ್ತು ಏಕತೆಗಿಂತ ಅದು ದೊಡ್ಡದಲ್ಲ. ಹಿಂದೆಯೂ ಹಲವು ಪ್ರಕರಣಗಳಲ್ಲಿ ಕಂಪೆನಿ ತನಿಖೆಗೆ ಸಹಕಾರ ನೀಡಿಲ್ಲ. ಕೆಲವು ದಿನಗಳವರೆಗೆ ಕಾಯುತ್ತೇವೆ. ಬಳಿಕ ಪ್ರಕರಣವನ್ನು ಕಾನೂನಿನ ವ್ಯಾಪ್ತಿಯಲ್ಲಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ನಿರ್ಧಾರವನ್ನು ಕೈಗೊಳ್ಳುತ್ತೇವೆ' ಎಂದು ತಿಳಿಸಿದರು.
ಕಾರ್ಯಾಚರಣೆ ಮುಂದುವರೆಯಲಿದೆ: ಮೊಬೈಲ್ ಸಿಮ್ ವಿತರಕ ಮೇಲಿನ ದಾಳಿ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, 'ಅಪರಾಧ ಕೃತ್ಯಗಳಲ್ಲಿ ಪಾಲ್ಗೊಳ್ಳುವ ಶೇ 90 ರಷ್ಟು ಮಂದಿ ಬೇರೆಯವರ ಹೆಸರಿನ ದಾಖಲೆಗಳನ್ನು ಬಳಸಿ, ಸಿಮ್ ಕಾರ್ಡ್ಗಳನ್ನು ಪಡೆದಿರುವುದು ಇತ್ತೀಚಿನ ಪ್ರಕರಣಗಳ ತನಿಖೆಯಲ್ಲಿ ಖಚಿತವಾಗಿದೆ. ಕೆಲವು ಸಿಮ್ ವಿತರಕರು ಇದರಲ್ಲಿ ನೇರವಾಗಿ ಭಾಗಿಯಾಗಿದ್ದಾರೆ' ಎಂದರು.[ಕಟೀಲು ದೇವಿಯನ್ನು ಅವಾಚ್ಯವಾಗಿ ನಿಂದಿಸಿದವರನ್ನು ಬಂಧಿಸಿ]
ಕೆಲ ದಿನಗಳ ಹಿಂದೆ ಜಿಲ್ಲಾ ಕಾರಾಗೃಹದಲ್ಲಿ ತಪಾಸಣೆ ನಡೆಸಿದಾಗ ವಿಚಾರಣಾಧೀನ ಕೈದಿಗಳ ಬಳಿ 29 ಮೊಬೈಲ್ ಮತ್ತು 9 ಸಿಮ್ ಕಾರ್ಡ್ಗಳು ಪತ್ತೆಯಾಗಿದ್ದವು. ಈ ಎಲ್ಲ ಸಿಮ್ ಕಾರ್ಡ್ಗಳನ್ನು ನಕಲಿ ದಾಖಲೆ ಬಳಸಿ ಪಡೆದಿರುವುದು ಗೊತ್ತಾಗಿದೆ. ಎರಡು ಸಿಮ್ ಕಾರ್ಡ್ಗಳಿಗೆ ಸಂಬಂಧಿಸಿದಂತೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.
ನಕಲಿ ದಾಖಲೆ ಬಳಸಿಕೊಂಡು ಅಪರಾಧಿಗಳಿಗೆ ಸಿಮ್ ಕಾರ್ಡ್ ನೀಡುವುದನ್ನು ತಪ್ಪಿಸಲು ದೂರ ಸಂಪರ್ಕ ಇಲಾಖೆ ಅಧಿಕಾರಿಗಳು ಮತ್ತು ವಿವಿಧ ಟೆಲಿಕಾಂ ಕಂಪೆನಿ ಪ್ರತಿನಿಧಿಗಳ ಜತೆ ಸಭೆ ನಡೆಸಲಾಗುವುದು ಎಂದರು.