ಉಪ್ಪಿನಂಗಡಿಯಲ್ಲಿ ಕಾಂಗ್ರೆಸ್-ಎಸ್ ಡಿಪಿಐ ಕಾರ್ಯಕರ್ತರ ನಡುವೆ ಘರ್ಷಣೆ
ಮಂಗಳೂರು, ಏಪ್ರಿಲ್ 18:ಮಂಗಳೂರಿನಲ್ಲಿ ಇವಿಎಂ ಮಷಿನ್ ಕೈಕೊಟ್ಟ ಘಟನೆ ವರದಿಯಾಗಿದೆ. ನಗರದ ಹೊರಭಾಗದ ವಾಮಂಜೂರು ತಿರುವೈಲ್ ವಾರ್ಡ್ ನ ಮತಗಟ್ಟೆ 150ರಲ್ಲಿ ಈ ಘಟನೆ ನಡೆದಿದ್ದು, ಮಷಿನ್ ಕೈಕೊಟ್ಟ ಹಿನ್ನೆಲೆಯಲ್ಲಿ ಮತದಾರರು ಅಸಮಾಧಾನ ವ್ಯಕ್ತಪಡಿಸಿದರು.
ಬೆಳ್ತಂಗಡಿ ತಾಲೂಕಿನ ಸಾವ್ಯ ಮತಗಟ್ಟೆಯಲ್ಲಿಯೂ ಮತಯಂತ್ರ ಕೈ ಕೊಟ್ಟ ಘಟನೆ ನಡೆದಿದ್ದು, ಈ ಹಿನ್ನೆಲೆಯಲ್ಲಿ 45 ನಿಮಿಷದ ಬಳಿಕ ಮತದಾನ ಆರಂಭವಾಗಿತ್ತು. ಈಗ ಪರ್ಯಾಯ ಮತಯಂತ್ರ ತಂದು ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಮತದಾನ ಮುಂದುವರೆದಿದೆ.
ಕರಾವಳಿಯಲ್ಲಿ ಹಸೆಮಣೆ ಏರುವ ಮುನ್ನ ಮತ ಚಲಾಯಿಸಿದ ವಧುಗಳು
ಈ ನಡುವೆ ಉಪ್ಪಿನಂಗಡಿಯಲ್ಲಿ ಕಾಂಗ್ರೆಸ್ ಹಾಗೂ ಎಸ್ ಡಿಪಿಐ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿದೆ. ಉಪ್ಪಿನಂಗಡಿ ಗ್ರಾಮದ ಮತಗಟ್ಟೆ ಮಠ ಹರ್ತಡ್ಕ ಸಂಖ್ಯೆ 41 ರಲ್ಲಿ ಈ ಘಟನೆ ನಡೆದಿದೆ. ಕಾಂಗ್ರೆಸ್ ಹಾಗೂ ಎಸ್ ಡಿಪಿಐ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ತೆರಳಿ ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನ ಪ್ರಕ್ರಿಯೆ ಮುಂದುವರೆದಿದ್ದು, 11 ಗಂಟೆ ಹೊತ್ತಿಗೆ ಶೇಕಡ 32.3 %ರಷ್ಟು ಮತದಾನ ದಾಖಲಾಗಿದೆ. ಬೆಳ್ತಂಗಡಿಯಲ್ಲಿ 33.80%, ಮೂಡಬಿದ್ರೆ ವ್ಯಾಪ್ತಿಯಲ್ಲಿ 31.65%, ಮಂಗಳೂರು ಉತ್ತರದಲ್ಲಿ ಶೇಕಡ 31.91%, ಮಂಗಳೂರು ದಕ್ಷಿಣದಲ್ಲಿ 29.63%, ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ 31.33%, ಬೆಳ್ತಂಗಡಿಯಲ್ಲಿ 33.89%, ಪುತ್ತೂರಿನಲ್ಲಿ 33.16%, ಸುಳ್ಯದಲ್ಲಿ 33.65% ರಷ್ಟು ಮತದಾನ ದಾಖಲಾಗಿದೆ.