ಪ್ರಧಾನಿ ಮೋದಿ, ಅಮಿತ್ ಶಾ ಮೇಲೂ ಕೇಸ್ ಇವೆ; ಕಲ್ಲಡ್ಕ ಪ್ರಭಾಕರ್ ಭಟ್
ಮಂಗಳೂರು, ಮಾರ್ಚ್ 30: ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿದ್ಯಾರ್ಥಿ ಪರಿಷತ್ ಕಾರ್ಯಕ್ರಮಕ್ಕೆ ಮುಖ್ಯ ಆತಿಥಿಯಾಗಿ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಆಗಮಿಸಿರುವುದನ್ನು ವಿರೋಧಿಸಿ ಸಿಎಫ್ಐ ಪ್ರತಿಭಟಿಸಿದೆ. ಪ್ರಭಾಕರ್ ಭಟ್ ವಿರುದ್ಧ ಕೇಸ್ಗಳಿದ್ದು, ಕೋಮು ವಿಭಜನೆ ಭಾಷಣ ಮಾಡುತ್ತಾರೆ. ಪ್ರಭಾಕರ್ ಭಟ್ ಗೋಬ್ಯಾಕ್ ಎಂದು ಸಿಎಫ್ಐ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ.
ಸಿಎಫ್ಐ ಕಾರ್ಯಕರ್ತರ ಆರೋಪಗಳಿಗೆ ಉತ್ತರಿಸಿದ ಕಲ್ಲಡ್ಕ ಪ್ರಭಾಕರ್ ಭಟ್, "ನನ್ನ ವಿರುದ್ಧ ನೂರಕ್ಕೂ ಹೆಚ್ಚು ಕೇಸ್ಗಳಿವೆ, ಆದರೆ ಕ್ರಿಮಿನಲ್ ಹಿನ್ನಲೆ ಇಲ್ಲ. ಯಾರ ವಿರುದ್ಧ ಯಾರು ಬೇಕಾದರೂ ಕೇಸು ಹಾಕಬಹುದು. ಕೇಸ್ನಲ್ಲಿ ತೀರ್ಪು ಏನಾಗಿದೆ ಅಂತಾನೂ ನೋಡಬೇಕು. ಆರೋಪಿ ಮಾತ್ರ, ಅಪರಾಧಿ ಆಗಿಲ್ಲ ಅಲ್ವಾ?," ಎಂದು ಪ್ರಶ್ನಿಸಿದರು.
ಕೊಲ್ಲೂರು: ಟಿಪ್ಪು ಹೆಸರಿನಲ್ಲಿ ಸಲಾಂ ಪೂಜೆ ನಿಲ್ಲಿಸಲು ವಿಎಚ್ಪಿ ಆಗ್ರಹ
"ಇಂದು ಇಲ್ಲಿ ಹಿಜಾಬ್ ಬಗ್ಗೆ ಮಾತನಾಡಿದೆ ಎಂದು ನಾಳೆ ಯಾರು ಬೇಕಾದರೂ ಕೇಸ್ ಹಾಕಬಹುದು. ಆದರೆ ಕೋರ್ಟ್ ಅದನ್ನು ಒಪ್ಪಬೇಕಲ್ವಾ. ಹಾಗಂತ ತುಂಬಾ ಜನರ ಮೇಲೆ ತುಂಬಾ ಕೇಸ್ ಇದೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮೇಲೂ ಕೇಸ್ ಇದೆ. ಅದಕ್ಕಾಗಿ ಅವರನ್ನು ಅಪರಾಧಿ ಎಂದು ಕರೆಯುವುದಕ್ಕೆ ಆಗುತ್ತದಾ?," ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದರು.
ಇನ್ನು ಸಿಎಫ್ಐ ಕಾರ್ಯಕರ್ತರ ಪ್ರತಿಭಟನೆ ಬಗ್ಗೆ ಮಾತನಾಡಿದ ಪ್ರಭಾಕರ್ ಭಟ್, "ಯಾರು ಬೇಕಾದರೂ ಪ್ರತಿಭಟನೆ ಮಾಡಬಹುದು. ವಿರೋಧಿಸುವವರು ವಿರೋಧ ಮಾಡುತ್ತಾರೆ. ದೇಶಕ್ಕೋಸ್ಕರ ಕೆಲಸ ಮಾಡುವವರು ಕೆಲಸ ಮಾಡುತ್ತಾರೆ. ಸಾಮರಸ್ಯದ ಜೀವನ ಮಾಡಬೇಕೆಂದರೆ ಈ ದೇಶದಲ್ಲಿ ಬದುಕಿ. ಆಗುದಿಲ್ಲ ಎಂದಾದರೆ ಎಲ್ಲಿ ಬೇಕಾದರೂ ಹೋಗಿ ಬದುಕಿ, ನಮಗೆ ಯಾವುದೇ ಸಮಸ್ಯೆಯಿಲ್ಲ. ನಾನು ಈ ಭಾಷಣದಲ್ಲಿ ಕೋಮು ದ್ವೇಷ ಹರಡಿಸಿದನಾ? ಕೋಮು ದ್ವೇಷ ಅಂದರೆ ಏನು? ಹಿಂದೂ ಧರ್ಮದ ಬಗ್ಗೆ ಮಾತನಾಡಿದರೆ ಕೋಮುದ್ವೇಷನಾ? ಹಿಂದೂ ಎನ್ನುವುದು ಈ ದೇಶದ ಹೆಸರು," ಎಂದರು.
ಪುತ್ತೂರು ಜಾತ್ರೋತ್ಸವ ಸಿಡಿಮದ್ದು ಪ್ರದರ್ಶನಕ್ಕೂ ಮುಸ್ಲಿಂ ವ್ಯಾಪಾರಿಗೆ ಕೊಕ್; ಶತಮಾನಗಳ ಬಾಂಧವ್ಯಕ್ಕೆ ಬ್ರೇಕ್
ಅಮೆರಿಕದಲ್ಲಿ ಇರುವವರು ಅಮೆರಿಕನ್, ಜಪಾನ್ನಲ್ಲಿ ಇರುವವರು ಜಪಾನಿಯರು. ಭಾರತದಲ್ಲಿ ಇರುವವರು ಭಾರತೀಯರು. ಹಿಂದೂಸ್ಥಾನದಲ್ಲಿ ಇರುವವರು ಹಿಂದೂಗಳು. ಇದರಲ್ಲಿ ಕೋಮುದ್ವೇಷದ ಪ್ರಶ್ನೆಯೆ ಇಲ್ಲ. ಈ ದೇಶದಲ್ಲಿ ಇರುವವರು ಎಲ್ಲಾ ಹಿಂದೂಗಳು. ಬ್ರಿಟಿಷರು ಬಂದು ಅದನ್ನು ವ್ಯತ್ಯಾಸ ಮಾಡಿದರು ಅಷ್ಟೇ. ಹಿಂದೂಗಳ ಜೊತೆ ಜೊತೆಯಲ್ಲಿ ಎಲ್ಲರೂ ಬದುಕುವ ಪ್ರಯತ್ನ ಮಾಡಬೇಕು. ಮಸ್ಟ್ ಸೆಕ್ಯುಲರ್ ಇರುವುದು ನಾವುಗಳೇ. ನಾವು ಸತ್ಯ ಮಾತನಾಡುತ್ತೇವೆ, ಇದನ್ನು ತಪ್ಪು ಎಂದು ಹೇಳುವವರು ಧೈರ್ಯದಿಂದ ಎದುರು ಬಂದು ಹೇಳಲಿ. ನಾನು ಅದಕ್ಕೆ ಉತ್ತರ ಕೊಡುತ್ತೇನೆ ಅಂತಾ ಪ್ರಭಾಕರ್ ಭಟ್ ತಿಳಿಸಿದ್ದಾರೆ.
ಇನ್ನು ಪಠ್ಯ ಪುಸ್ತಕದಿಂದ ಟಿಪ್ಪು ಪಾಠವನ್ನು ಕೈ ಬಿಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಭಟ್, ಅವತ್ತಿನಿಂದಲೂ ದೇಶ ವಿರೋಧಿಗಳ ಚಿತ್ರಣವನ್ನೇ ಪಠ್ಯದಲ್ಲಿ ಹಾಕಿದ್ದಾರೆ. ಅಕ್ಬರ್ ದಿ ಗ್ರೇಟ್, ಔರಂಗಜೇಬ್ ಹುಲಿ ಹೇಳುವುದು ಬಿಟ್ಟು ಬೇರೆನೂ ನಮಗೆ ಹೇಳಿಲ್ಲ. ವಿಕ್ಟೋರಿಯಾ ರಾಣಿ, ಜಾರ್ಜ್ ಅದೇ ಕತೆಯನ್ನು ನಮಗೆ ಹೇಳಿದ್ದಾರೆ. ಈ ದೇಶದ ನಿಜವಾದ ಹೀರೋಗಳನ್ನು ಶಿಕ್ಷಣ ವ್ಯವಸ್ಥೆ ಝೀರೋ ಮಾಡಿದೆ. ಅವರನ್ನು ಮತ್ತೆ ಹೀರೋ ಮಾಡಬೇಕಾದ ಕೆಲಸ ನಾವು ಮಾಡಬೇಕಾಗಿದೆ. ಆ ರೀತಿ ಯೋಚನೆ ಸರ್ಕಾರ ಮಾಡುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಟಿಪ್ಪು ಸುಲ್ತಾನ್ನ ಪಾಠವನ್ನು ನಾವು ಯಾಕೆ ಕಲಿಯಬೇಕು. ಇಡೀ ಹಿಂದೂ ಸಮಾಜಕ್ಕೆ ಅನ್ಯಾಯ ಮಾಡಿದವನನ್ನು, ಮಂಗಳೂರಿನ ಇಡೀ ಕ್ರಿಶ್ಚಿಯನ್ ಸಮುದಾಯದ ಪಾಠ ನಾವು ಯಾಕೆ ಕಲಿಯಬೇಕು. ಸತ್ಯವನ್ನು ಹೇಳುವುದಕ್ಕೆ ರಾಜಕಾರಣಿಗಳಿಗೆ ಧಮ್ ಇಲ್ಲ. ಮಂಗಳೂರಿನ ಕ್ರಿಶ್ಚಿಯನ್ನರನ್ನು ಮೈಸೂರಿಗೆ ಎಳೆದೊಯ್ದಿದ್ದಾನೆ. ಜಗತ್ತಿಗೋಸ್ಕರ ಯಾರು ಬದುಕಿದ್ದಾರೆ ಅಂತವರ ನೆನಪು ಮಾಡಲಿ ಅಂತಾ ಪ್ರಭಾಕರ್ ಭಟ್ ಆಗ್ರಹಿಸಿದ್ದಾರೆ.
ಪ್ರಗತಿಪರ ಚಿಂತಕರಿಂದ ಧರ್ಮ ಸಂಘರ್ಷ ನಿಲ್ಲಿಸುವಂತೆ ಸರ್ಕಾರಕ್ಕೆ ಪತ್ರ ಬರೆದ ವಿಚಾರವಾಗಿ ಮಾತನಾಡಿದ ಪ್ರಭಾಕರ್ ಭಟ್, ಪ್ರಗತಿಪರ ಚಿಂತಕರು ಅಂದರೆ ಯಾರು? ಚೀನಾ, ಅಮೆರಿಕದ ಬಗ್ಗೆ ಚಿಂತನೆ ಮಾಡುವವನು ಚಿಂತಕ ಅಂತಾ ಹೇಳುವುದು ಹೇಗೆ? ಭಾರತದ ಬಗ್ಗೆ ಚಿಂತನೆ ಮಾಡುವವನು ಮಾತ್ರ ಚಿಂತಕ. ಪ್ರಗತಿಪರ ಚಿಂತಕರು ಅನ್ನುವುದಕ್ಕೆ ನಮ್ಮ ಒಪ್ಪಿಗೆಯಿಲ್ಲ. ಭಾರತ ಕಮ್ಯುನಿಸ್ಟ್ ಆಗಬೇಕು, ಚೀನಾ ಆಗಬೇಕು, ರಷ್ಯಾ ಆಗಬೇಕು ಎನ್ನುವವರಿಗೆ ನಮ್ಮ ಬೆಂಬಲ ಇಲ್ಲ. ಈ ದೇಶ ಭಾರತವಾಗಿಯೇ ಉಳಿಯಬೇಕು ಎಂದು ಹೇಳುವವರು ನಾವು ಎಂದು ಪ್ರಭಾಕರ್ ಭಟ್ ಹೇಳಿದ್ದಾರೆ.
ಜಾತ್ರೋತ್ಸವಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ತಂದಿರುವುದೇ ಕಾಂಗ್ರೆಸ್. 2002ರಲ್ಲಿ ಎಸ್.ಎಂ. ಕೃಷ್ಣ ಸರ್ಕಾರ ಈ ನಿಯಮ ತಂದಿರುವುದು. ಹಿಂದೂಗಳು ಉದಾರಿಗಳು ಅದಕ್ಕೆ ಸುಮ್ಮನೆ ಕೂತಿದ್ದೆವು. ಆದರೆ ಹಿಜಾಬ್ ಬಗ್ಗೆ ಸಂವಿಧಾನ ವಿರುದ್ಧವಾಗಿ ಬಂದ್ ಮಾಡಿದ್ದರು. ನೀವು ಯಾಕೆ ಬಂದ್ ಮಾಡಿದ್ದೀರಿ. ಮೆಡಿಕಲ್ ಸೇರಿದಂತೆ ಅವಶ್ಯಕ ವಸ್ತುಗಳ ಅಂಗಡಿ ಬಂದ್ ಮಾಡಿದ್ದಾರೆ. ಇದು ಸಂವಿಧಾನ ವಿರೋಧಿ ಅಲ್ಲವಾ. ಇದಕ್ಕೋಸ್ಕರ ಹಿಂದೂಗಳು ಮತ್ತೆ ಎಚ್ಚೆತ್ತಿದ್ದಾರೆ, ನಾವು ಬಿಡುವುದಿಲ್ಲ. ಯಾವುದೇ ಜಾತ್ರೋತ್ಸವದಲ್ಲಿ 100 ಮೀ ವ್ಯಾಪ್ತಿಯೊಳಗೆ ವ್ಯಾಪಾರ ಮಾಡಲು ಬಿಡುವುದಿಲ್ಲ ಅಂತಾ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ಹಲಾಲ್ ವಿವಾದದ ಬಗ್ಗೆ ನನಗೆ ಗೊತ್ತಿಲ್ಲ. ಹಿಂದೂಗಳಿಗೆ ತಲೆಯಿಲ್ಲ, ಅದಕ್ಕೋಸ್ಕರ ಹಲಾಲ್ ಮಾಂಸ ತೆಗೆದುಕೊಂಡು ಬರುತ್ತಾರೆ. ಹಲಾಲ್ ಮುಸ್ಲಿಮರಿಗೆ ಇರಬಹುದು ಆದರೆ ಹಿಂದೂಗಳಿಗೆ ಅದು ಬೇಡ. ಹಿಂದೂಗಳು ಅಂತಹ ಮಾಂಸವನ್ನು ಸ್ವೀಕಾರ ಕೂಡ ಮಾಡಬಾರದು ಅಂತಾ ಹೇಳಿದರು. ಅರಬ್ನ ಚಿಂತನೆಯನ್ನು ಭಾರತದಲ್ಲಿ ತರುವುದು ಬೇಡ. ಅದು ಅರಬ್ನಲ್ಲಿ ಇರಲಿ, ಆ ಚಿಂತನೆ ಬೇಕೆಂದರೆ ಅರಬ್ಗೆ ಹೋಗಲಿ. ಭಾರತದಲ್ಲಿ ಭಾರತದ ಚಿಂತನೆ ಮಾತ್ರ ಇರಲಿ. ನಮ್ಮ ಸಂಪ್ರದಾಯ ಉಳಿಸಬೇಕು, ಹಲಾಲ್ಗೆ ನಮ್ಮ ಬೆಂಬಲವಿಲ್ಲವೆಂದು ತಿಳಿಸಿದರು.
ಶಾಲಾ- ಕಾಲೇಜುಗಳಲ್ಲಿ ಒಂದೇ ಸಮವಸ್ತ್ರದ ಕಾನೂನಿದ್ದು, ಅದನ್ನು ಸರ್ಕಾರ ಹೇಳಿದೆ. ಆ ಬಳಿಕ ಕೋರ್ಟ್ ಕೂಡಾ ಅದನ್ನೇ ಹೇಳಿದೆ. ಕೋರ್ಟ್ ಹೇಳಿದ್ದನ್ನು ಒಪ್ಪಿಕೊಳ್ಳಬೇಕು. ಕೋರ್ಟ್ ವಿರೋಧ ಮಾಡುವವರು ಬೇರೆ ದೇಶಕ್ಕೆ ಹೋಗಲಿ. ಈ ದೇಶದಲ್ಲಿ ಕೋರ್ಟ್ ಅತಿ ಮುಖ್ಯ. ಕೋರ್ಟ್ ಹೇಳುವುದನ್ನು ಎಲ್ಲರೂ ಒಪ್ಪಲೇಬೇಕು. ಸುಪ್ರೀಂ ಕೋರ್ಟ್ಗೆ ಹೋಗಲು ಅವಕಾಶವಿದೆ. ಆದರೆ ಅದಕ್ಕೆ ಅವರಿಗೆ ಸಮಯ ಇಲ್ಲ ಎಂದು ಕಿಡಿಕಾರಿದರು.
ನಾಳೆ ನಿಮಗೂ ನಿಮ್ಮ ಹೆಂಡತಿಗೂ ಬುರ್ಖಾ ಹಾಕುತ್ತಾರೆ. ನಿಮಗೆ ಸುನ್ನತ್ ಮಾಡುತ್ತಾರೆ. ಅದಕ್ಕೆ ನಿಮ್ಮ ಒಪ್ಪಿಗೆಯಿದೆಯಾ? ಈ ಮಣ್ಣಿನ ಕಾನೂನನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ಒಟ್ಟಿಗೆ ಇರಬೇಕು ಎಂದು ನಾವು ಪ್ರಯತ್ನ ಮಾಡುವುದು. ಇದು ಆಗುವುದಿಲ್ಲ ಎಂದಾದರೆ ಅವರು ಹೋಗಲಿ ಅಂತಾ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.
ಕೊಲ್ಲೂರು ದೇವಳದಲ್ಲಿ ಸಲಾಂ ಆರತಿ ವಿಚಾರವಾಗಿ ಮಾತನಾಡಿದ ಪ್ರಭಾಕರ್ ಭಟ್, "ಕೊಲ್ಲೂರಿನಲ್ಲಿ ಸಲಾಂ ಪೂಜೆ ಇಲ್ಲ ಎಂದು ದೇವಸ್ಥಾನದವರು ಹೇಳಿದ್ದಾರೆ. ನಾವು ಸ್ವಲ್ಪ ಬುದ್ದಿ ಕಡಿಮೆ ಇರುವ ಜನ. ಎಲ್ಲರಿಗೂ ಗೌರವ ಕೊಡುವುದುಕ್ಕೆ ಹೊರಡುವ ಜನ. ಅದನ್ನು ದೇವಸ್ಥಾನದ ಒಳಗೆ ತರಬಾರದು. ಕೊಲ್ಲೂರಿನಲ್ಲಿ ಸಲಾಂ ಪೂಜೆಯಿಲ್ಲ, ಪ್ರದೋಷ ಪೂಜೆ ಇದೆ ಅಂದಿದ್ದಾರೆ. ಯಾರೋ ಒಬ್ಬ ಮುಸಲ್ಮಾನ ಹೊರಗಡೆ ನಿಂತುಕೊಂಡು ಇದು ಸಲಾಂ ಪೂಜೆ ಅಂದ. ಆಗ ಇದು ಸಲಾಂ ಪೂಜೆ ಎಂದು ಪ್ರಚಾರ ಆಗಿರಬಹುದು. ಇದರ ಹಿಂದೆ ಮುಂದೆ ಏನು ಗೊತ್ತಿಲ್ಲ. ನಾವು ಏನು ಪೂಜೆ ಮಾಡಬೇಕು ಅದನ್ನೇ ಪೂಜೆ ಮಾಡಬೇಕು. ನಮ್ಮ ಪದ್ಧತಿ ಪ್ರಕಾರ ಪೂಜೆ ಆಗಬೇಕು. ಸಲಾಂ ಅಂತ ಹೇಳುವುದು ಯಾಕೆ? ನಮಸ್ಕಾರ ಎಂದು ಹೇಳಬಹುದು ಅಲ್ವಾ, ನಮ್ಮಲ್ಲಿ ನಮಸ್ಕಾರ ಮಾತ್ರ ಇರುವುದು ಸಲಾಂ ಇಲ್ಲ," ಅಂತಾ ಪ್ರಭಾಕರ್ ಭಟ್ ಹೇಳಿದ್ದಾರೆ.