ಬೆಂಗಳೂರಿನ ಗಿರಿನಗರದ ಭರತ್ ನೇತ್ರಾವತಿ ಪಾಲು
ಧರ್ಮಸ್ಥಳ, ಸೆಪ್ಟೆಂಬರ್ 25: ನೇತ್ರಾವತಿ ಸ್ನಾನಘಟ್ಟದಲ್ಲಿ ಮುಳುಗಿ ಬೆಂಗಳೂರಿನ ಗಿರಿನಗರದ ಭರತ್ (23) ಭಾನುವಾರ ಮೃತಪಟ್ಟಿದ್ದಾನೆ. ಆತನ ಜತೆಯಲ್ಲಿದ್ದ ಸ್ನೇಹಿತ ಭರತ್ ಕುಮಾರ್ ಅಪಾಯದಿಂದ ಪಾರಾಗಿದ್ದಾನೆ. ಇಬ್ಬರೂ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಶನಿವಾರ ರಾತ್ರಿ ಬೈಕ್ ನಲ್ಲಿ ಬಂದಿದ್ದರು.
ಭಾನುವಾರ ಬೆಳಗ್ಗೆ ನೇತ್ರಾವತಿ ಸ್ನಾನ ಘಟ್ಟಕ್ಕೆ ಇಬ್ಬರೂ ತೆರಳಿದ್ದಾರೆ. ಆಗ ಗಿರಿನಗರದ ಇಪ್ಪತ್ಮೂರು ವರ್ಷದ ಯುವಕ ಭರತ್ ನೀರು ಪಾಲಾಗಿದ್ದಾನೆ. ಮಳೆ ಬಂದು ನೇತ್ರಾವತಿಯಲ್ಲಿ ಜಾಸ್ತಿ ನೀರಿತ್ತು ಹೊಸಬರಿಗೆ ನೀರಿನ ಪ್ರಮಾಣ ಹಾಗೂ ಆಳದ ಅಂದಾಜಿಲ್ಲದೆ ಇಳಿಯುವುದರಿಂದ ಇಂಥ ಅನಾಹುತ ಆಗುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ.[ನೇತ್ರಾವತಿಗೆ ಇಳಿದ ಮಂಗಳೂರು ವಿದ್ಯಾರ್ಥಿ ನೀರುಪಾಲು]
ಇಬ್ಬರೂ ಯುವಕರು ದಡದಲ್ಲೇ ನಿಂತು ಸ್ನಾನ ಮಾಡಬಹುದಿತ್ತು. ಈಜುವ ಪ್ರಯತ್ನ ಮಾಡಬಾರದಿತ್ತು. ಮನೆಯಿಂದ ಹೊರಗೆ ಬಂದಾಗ ಸ್ಥಳೀಯ ಪರಿಸ್ಥಿತಿ ತಿಳಿದುಕೊಂಡು, ಅದರಂತೆ ನಡೆದುಕೊಳ್ಳಬೇಕು ಇಲ್ಲದಿದ್ದರೆ ಇಂಥ ಅನಾಹುತಗಳು ಸಂಭವಿಸುತ್ತದೆ ಎಂದು ಪ್ರವಾಸಿಯೊಬ್ಬರು ತಿಳಿಸಿದ್ದಾರೆ.