ಪುತ್ತೂರಿನ ಕಡಬದಲ್ಲಿ 'ಅನ್ನ ಭಾಗ್ಯ'ದೊಂದಿಗೆ ಹುಳು ಭಾಗ್ಯ ಫ್ರೀ
ಮಂಗಳೂರು, ಸೆಪ್ಟೆಂಬರ್ 27: ರಾಜ್ಯ ಸರ್ಕಾರದ 'ಅನ್ನ ಭಾಗ್ಯ' ಯೋಜನೆಯ ಅಕ್ಕಿಯಲ್ಲಿ ಹುಳುಗಳು ಕಾಣಿಸಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ಬೆಳಕಿಗೆ ಬಂದಿದೆ. ಇಲ್ಲಿ ಸಂಚಾರಿ ಪಡಿತರ ವ್ಯವಸ್ಥೆಯಡಿ ವಿತರಣೆಯಾದ ಅಕ್ಕಿಯಲ್ಲಿ ಭಾರೀ ಪ್ರಮಾಣದ ಹುಳಗಳು ಕಾಣಿಸಿಕೊಂಡಿವೆ.
ಗ್ರಾಮೀಣ ಪ್ರದೇಶದ ಜನರ ಮನೆ ಬಾಗಿಲಿಗೆ ಪಡಿತರ ವ್ಯವಸ್ಥೆಯ ಸೌಲಭ್ಯ ಒದಗಿಸಲು ರಾಜ್ಯ ಸರ್ಕಾರ ಸಂಚಾರಿ ನ್ಯಾಯಬೆಲೆ ಅಂಗಡಿಗಳನ್ನು ಆರಂಭಿಸಿದೆ. ಈ ಯೋಜನೆ ಅಡಿ ದೂರದ ಗ್ರಾಮೀಣ ಪ್ರದೇಶಗಳಿಗೆ ಸಂಚಾರಿ ನ್ಯಾಯಬೆಲೆ ಅಂಗಡಿ ವಾಹನ ಮೂಲಕ ಪಡಿತರ ವಸ್ತುಗಳನ್ನು ಫಲಾನುಭವಿಗಳಿಗೆ ವಿತರಿಸಲಾಗುತ್ತದೆ.
ಅಕ್ಕಿಯಲ್ಲಿ ಹುಳ
ಹೀಗೆ ಕಡಬದಲ್ಲಿ ಸಂಚಾರಿ ಪಡಿತರ ವಾಹನ ಮೂಲಕ ವಿತರಿಸಿದ ಅಕ್ಕಿಯಲ್ಲಿ ಭಾರೀ ಸಂಖ್ಯೆಯಲ್ಲಿ ಹುಳಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಫಲಾನುಭವಿಗಳು ಪಡಿತರ ಅಕ್ಕಿ ಸ್ವೀಕರಿಸಲು ನಿರಾಕರಿಸಿದ್ದಾರೆ. ಐತ್ತೂರು ಗ್ರಾಮದ ನೇಲ್ಯಡ್ಕ ಎಂಬಲ್ಲಿ ಈ ಘಟನೆ ನಡೆದಿದೆ .
ಸಾರ್ವಜನಿಕರಿಗೆ ಕಳಪೆ ಅಕ್ಕಿ
ನೇಲ್ಯಡ್ಕದಲ್ಲಿ ಪ್ರತಿ ತಿಂಗಳು 26 ತಾರೀಕಿನಂದು ಸಂಚಾರಿ ನ್ಯಾಯಬೆಲೆ ಅಂಗಡಿ ಮೂಲಕ ಪಡಿತರ ವಿತರಿಸಲಾಗುತ್ತದೆ. ಅಂತೆಯೇ ಮಂಗಳವಾರ ಸಂಚಾರಿ ಪಡಿತರ ಅಂಗಡಿಗೆ ಪಡಿತರ ವಸ್ತುಗಳನ್ನು ಪಡೆಯಲು ಬಂದ ಸಾರ್ವಜನಿಕರಿಗೆ ಅಕ್ಕಿಯಲ್ಲಿ ಹುಳುಗಳು ಕಂಡು ಬಂದಿವೆ.
ಬದಲಿ ಪಡಿತರಕ್ಕೆ ವ್ಯವಸ್ಥೆ
ಅಕ್ಕಿ ಸ್ವೀಕರಿಸಲು ಫಲಾನುಭವಿಗಳು ನಿರಾಕರಿಸಿರುವ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಐತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕೆ ಪರಿಶೀಲನೆ ನಡೆಸಿದ್ದಾರೆ. ನಂತರ ಬದಲಿ ಪಡಿತರ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಖಾದರ್ ಸಾಹೇಬ್ರೆ ಈ ಕಡೆ ಗಮನ ನೀಡಿ
ಬಡವರ ಹಸಿವು ನೀಗಿಸುತ್ತಿರುವ 'ಅನ್ನ ಭಾಗ್ಯ' ಯೋಜನೆ ಉತ್ತಮ ಯೋಜನೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಆಗಾಗ ಪಡಿತರ ಅಕ್ಕಿಗಳನ್ನು ಕದ್ದು ಮಾರಿದ, ಕಳಪೆ ಅಕ್ಕಿಗಳನ್ನು ವಿತರಿಸಿದ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಆಹಾರ ಮತ್ತು ನಾಗರೀಕ ಪೂರೈಕೆ ಸಚಿವರು ಇತ್ತ ಗಮನ ಹರಿಸಬೇಕಾಗಿದೆ.