ಕರಾವಳಿಯಲ್ಲಿ ಸಂಭ್ರಮದಿಂದ ಆರಂಭವಾದ ಶಾಲೆ
ಮಂಗಳೂರು, ಮೇ 16: ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಶಾಲಾ ಪ್ರಾರಂಭೋತ್ಸವ ವಿಜೃಂಭಣೆಯಿಂದ ನಡೆದಿದೆ. ಒಂದೂವರೆ ತಿಂಗಳ ರಜೆಯ ಬಳಿ ಪುಟಾಣಿಗಳು ಉತ್ಸಾಹದಿಂದ ಶಾಲೆಯ ಮೆಟ್ಟಿಲು ಹತ್ತಿದ್ದಾರೆ. ಬೆಳ್ಳಂಬೆಳಗ್ಗೆ ಸುರಿದ ಮಳೆ ಮಕ್ಕಳ ಶಾಲೆಗೆ ಹೋಗುವ ಉತ್ಸಾಹವನ್ನು ಕಡಿಮೆ ಮಾಡದೇ ಶಾಲೆಯಲ್ಲಿ ಆಯೋಜಿಸಿದ್ದ ಪ್ರಾರಂಭೋತ್ಸವದಲ್ಲಿ ಮಕ್ಕಳು ಹೆತ್ತವರು ಖುಷಿಯಿಂದ ಪಾಲ್ಗೊಂಡಿದ್ದಾರೆ. ಮಂಗಳೂರು ನಗರ ಸೇರಿದಂತೆ ಇಡಿಯ ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಮತ್ತು ಕೆಲ ಖಾಸಗಿ ಶಾಲೆಗಳಲ್ಲಿ ಪ್ರಾರಂಭೋತ್ಸವ ನಡೆದಿದೆ.
ಆಯಾ ಕ್ಷೇತ್ರದ ಶಾಸಕರು ಸರ್ಕಾರಿ ಶಾಲೆಗಳಿಗೆ ತೆರಳಿ ಮಕ್ಕಳನ್ನು ಶಾಲೆಗೆ ಸ್ವಾಗತಿಸಿದ್ದಾರೆ. ಶಾಲಾ ಪ್ರಾರಂಭೋತ್ಸವ ದ ಹಿನ್ನಲೆಯಲ್ಲಿ ಸರಕಾರಿ ಶಾಲೆಗಳಲ್ಲಿ ಸಂಭ್ರಮ ಮನೆ ಮಾಡಿದೆ. ಶಾಲೆಯನ್ನು ತಳಿರು- ತೋರಣಗಳಿಂದ ಶೃಂಗರಿಸಿ ಮಕ್ಕಳನ್ನು ಶಿಕ್ಷಕರು ಶಾಲೆಗೆ ಬರಮಾಡಿಕೊಂಡಿದ್ದಾರೆ. ಪುತ್ತೂರಿನ ಬ್ರಿಟಿಷ್ ಕಾಲದ ಕೊಂಬೆಟ್ಟು ಸರಕಾರಿ ಶಾಲೆಯಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು ಮಕ್ಕಳನ್ನು ಬರಮಾಡಿಕೊಂಡಿದ್ದಾರೆ.
ವಿಶೇಷ: ಹುಲಿ ಮುಟ್ಟಿದರೆ ಆಪತ್ತು! ಕಾಪು ಪಿಲಿಕೋಲದ ವೈಭವ
ರಾಜ್ಯದಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳಿರುವ ಸರ್ಕಾರಿ ಶಾಲೆಗಳಲ್ಲಿ ಕೊಂಬೆಟ್ಟು ಶಾಲೆಕೂಡಾ ಒಂದಾಗಿದ್ದು,ಮಕ್ಕಳಿಗೆ ಹೂ, ಚಾಕಲೇಟು ಹಾಗು ಆರತಿ ಎತ್ತಿ ಶಾಸಕರು ಬರಮಾಡಿಕೊಂಡಿದ್ದಾರೆ.
ಕೊಂಬೆಟ್ಟು ಶಾಲೆಯಲ್ಲಿ ಪರಿಸರ ಹಬ್ಬ ಅನ್ನುವ ಕಾರ್ಯಕ್ರಮ ಮಾಡಲಾಗಿದೆ. ಈ ವೇಳೆ ಶಾಸಕ ಮಠಂದೂರು ಸ್ಕಿಪ್ಪಿಂಗ್, ಡಂಬಲ್ಸ್ ಎತ್ತಿ ಮಕ್ಕಳೊಂದಿಗೆ ಬೆರೆತಿದ್ದಾರೆ.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಸಂಜೀವ ಮಠಂದೂರು, ಮಕ್ಕಳಿಗೆ ಶಾಲೆಯಲ್ಲಿ ಮನೆಯ ವಾತಾವರಣ ಸೃಷ್ಟಿಸುವ ಕಾರ್ಯವನ್ನು ಸರಕಾರ ಮಾಡುತ್ತಿದೆ. ಕೋವಿಡ್ ಕಾರಣಕ್ಕೆ ಶಾಲೆಯಿಂದ ದೂರ ಉಳಿದಿದ್ದ ಮಕ್ಕಳು ಇದೀಗ ಪೂರ್ಣ ಪ್ರಮಾಣದಲ್ಲಿ ಶಾಲೆಗೆ ಹಾಜರಾಗುತ್ತಿದ್ದಾರೆ. ಪುತ್ತೂರು ತಾಲೂಕಿನಾದ್ಯಂತ ವಿಶೇಷ ರೀತಿಯಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಮಕ್ಕಳನ್ನು ಶಾಲೆಗೆ ಬರ ಮಾಡಿಕೊಳ್ಳಲಾಗುತ್ತಿದೆ ಅಂತಾ ಮಠಂದೂರು ಹೇಳಿದ್ದಾರೆ.
ಇನ್ನು ಶಾಲಾರಂಭ ಹಿನ್ನೆಲೆ ಉಡುಪಿ ಸರ್ಕಾರಿ ಪ್ರೌಢ ಶಾಲೆಗೆ ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಭೇಟಿ ನೀಡಿದ್ದಾರೆ. ಮಕ್ಕಳ ಜೊತೆ ಕೆಲ ಹೊತ್ತು ಜಿಲ್ಲಾಧಿಕಾರಿ ಕೂರ್ಮರಾವ್ ಕಾಲ ಕಳೆದಿದ್ದು, ತರಗತಿ ಹಾಗೂ ಶಾಲೆಯ ಅಡುಗೆ ಕೋಣೆಯನ್ನು ಡಿಸಿ ಪರಿಶೀಲನೆ ಮಾಡಿದ್ದಾರೆ. ಎಂಟು ಹಾಗೂ ಒಂಬತ್ತನೇ ತರಗತಿ ಮಕ್ಕಳಿಗೆ ಕಲಿಕಾ ಚೇತರಿಕೆ,ಹತ್ತನೇ ತರಗತಿ ಮಕ್ಕಳಿಗೆ ಸೇತುಬಂಧು ಅಳವಡಿಕೆ ಮಾಡಲಾಗಿದ್ದು,ಕೊರೋನಾ ಸಮಯದಲ್ಲಿ ಉಂಟಾದ ತರಗತಿ ವ್ಯತ್ಯಾಸ ಸರಿತೂಗಿಸಲು ಈ ವಿಶಿಷ್ಟ ಕಾರ್ಯಕ್ರಮ ಮಾಡಲಾಗಿದೆ ಅಂತಾ ಮಾಧ್ಯಮಕ್ಕೆ ಜಿಲ್ಲಾಧಿಕಾರಿ ಕೂರ್ಮರಾವ್ ಪ್ರತಿಕ್ರಿಯೆ ನೀಡಿದ್ದಾರೆ.
ದೇವರ ಪ್ರಾರ್ಥನೆಯಷ್ಟೇ ನಮಗೆ ಮುಖ್ಯ, ಮೈಕ್ ಅಲ್ಲ; ಮಸೂದ್
ಶಾಲಾರಂಭದ ಹಿನ್ನಲೆ ಪ್ರಾಥಮಿಕ ತರಗತಿ ದಾಖಲಾತಿಗೆ ಪೋಷಕರೂ ಮುಗಿಬಿದ್ದಿದ್ದು,ಉಡುಪಿಯಲ್ಲಿ ಬೆಳಿಗ್ಗೆ ಯಿಂದಲೇ ಸರ್ಕಾರಿ ಶಾಲೆಗಳಲ್ಲಿ ಅಡ್ಮಿಷನ್ ಚುರುಕುಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕಿನ ಗ್ರಾಮೀಣ ಭಾಗಗಳ ಸರ್ಕಾರಿ ಶಾಲೆಯಲ್ಲೂ ಮಕ್ಕಳ ಶಾಲಾ ಪ್ರಾರಂಭೋತ್ಸವ ವಿಜೃಂಭಣೆಯಿಂದ ನಡೆದಿದೆ. ಶಾಲೆಯ ಎಸ್ ಡಿ ಎಂಸಿ ಪದಾಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು,ಮಕ್ಕಳ ಪೋಷಕರು ಭಾಗಿಯಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ನಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲೂ ಶಾಲಾ ಪ್ರಾರಂಭೋತ್ಸವ ಸಂಭ್ರಮದಿಂದ ನಡೆದಿದೆ. ಬೆಳ್ತಂಗಡಿ ಹಲವು ಸರ್ಕಾರಿ ಶಾಲೆಗಳಲ್ಲಿ ಬಂಟ್ವಾಳದ ಚೆನೈತೋಡಿ ಸರ್ಕಾರಿ ಶಾಲೆ ಸೇರಿದಂತೆ ಹಲವು ಶಾಲೆಗಳಲ್ಲಿ ಮಕ್ಕಳಿಗೆ ಪುಷ್ಪಾರ್ಚನೆ ಮಾಡಿ ಸ್ವಾಗತಿಸಲಾಗಿದೆ.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಪೋಷಕರಾದ ರಘು, ಮಕ್ಕಳು ರಜೆಯಲ್ಲಿ ಮನೆಯಲ್ಲಿದ್ದಾಗ ಏನೋ ಒಂತರಾ ಖುಷಿ ಇತ್ತು. ಈಗಲೂ ಖುಷಿ ಇದೆ. ಮನೆಯಿಂದ ಬ್ಯಾಗ್, ಕೊಡೆ ಹಿಡಿದುಕೊಂಡು ಶಾಲೆಗೆ ಕಡೆಗೆ ಬರೋದನ್ನು ನೋಡೋದೇ ಖುಷಿ. ಕೊರೊನಾ ಕಾಲದಲ್ಲಿ ಈ ಖುಷಿ ಇರಲಿಲ್ಲ. ಈ ವರ್ಷ ಆದರೂ ಯಾವುದೇ ವಿಘ್ನ ಇಲ್ಲದೇ ಮಕ್ಕಳ ಶೈಕ್ಷಣಿಕ ವರ್ಷ ನಡೆಯಲಿ ಅಂತಾ ಹೇಳಿದ್ದಾರೆ.
ಇನ್ನು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಅರೆಶಿರೂರಿನಲ್ಲೂ ವಿನೂತನ ರೀತಿಯಲ್ಲಿ ಮಕ್ಕಳನ್ನು ಶಾಲೆಯ ಆಡಳಿತ ಮಂಡಳಿ ಬರಮಾಡಿಕೊಂಡಿದೆ. ಅರೆಶಿರೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದ್ದು, ಶಾಲೆಯ ಮುಂಭಾಗದಲ್ಲಿ ಶಿಕ್ಷಕರು ಮಾವಿನ ತೋರಣ ಕಟ್ಟಿದರೆ, ಸ್ಥಳೀಯರು ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ಹಂಚಿ ಮತ್ತು ರಂಗೋಲಿ ಹಾಕಿದ್ದಾರೆ. ಮೊದಲ ದಿನವೇ ಬಲು ಉತ್ಸಾಹದಿಂದ ವಿದ್ಯಾರ್ಥಿಗಳು ಶಾಲೆಗೆ ಬಂದಿದ್ದಾರೆ.
(ಒನ್ಇಂಡಿಯಾ ಸುದ್ದಿ)