ಕನ್ಯಾಡಿ ಶ್ರೀಗಳನ್ನು ಭೇಟಿಯಾದ ನಾಗಾಸಾಧು ನಿಯೋಗ; ರಾಜ್ಯ ಚುನಾವಣೆಯಲ್ಲಿ ಸ್ಪರ್ಧೆಯ ಎಚ್ಚರಿಕೆ
ಮಂಗಳೂರು, ಏಪ್ರಿಲ್ 25: ಗಲಭೆಕೋರರ ವಿರುದ್ಧ ಮೃದು ಧೋರಣೆ, ಕಮಿಷನ್ ಆರೋಪ ಸೇರಿದಂತೆ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾರ್ಯಕರ್ತರೇ ಅಸಹನೆಯ ಮಾತನಾಡುತ್ತಿರುವ ಸಂದರ್ಭದಲ್ಲಿ, ಸಾಧು ಸಂತರೂ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ರಾಜ್ಯ ಸರ್ಕಾರದ ಮೇಲೆ ಕಮಿಷನ್, ಭ್ರಷ್ಟಾಚಾರದ ಆರೋಪ ಹಿನ್ನಲೆಯಲ್ಲಿ ಸಾಧು ಸಂತರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ತಪ್ಪನ್ನು ತಿದ್ದಿಕೊಳ್ಳದಿದ್ದರೆ ಮುಂದಿನ ಬಾರಿ 50ಕ್ಕಿಂತ ಹೆಚ್ಚು ಸಂತರು ಚುನಾವಣಾ ಕಣಕ್ಕೆ ಇಳಿಯುವ ಎಚ್ಚರಿಕೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕನ್ಯಾಡಿ ರಾಮಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನೀಡಿದ್ದಾರೆ.
ಕೇರಳದಲ್ಲೂ ಶ್ರೀರಾಮ ಸೇನೆ ಇದೆ, ಅಲ್ಲೂ ಹೋರಾಟ ಮಾಡ್ತೇನೆ: ಪ್ರಮೋದ್ ಮುತಾಲಿಕ್
ರಾಜ್ಯದಲ್ಲಿ ರಾಜಕಾರಣಿಗಳಿಗೆ ಜನರ ಕಷ್ಟ ಅರಿವಾಗುತ್ತಿಲ್ಲ. ಸರ್ಕಾರ ಎಲ್ಲರ ಬಳಿಗೂ ಹಂಚಿ ಹೋಗಬೇಕು. ಆದರೆ ಇದು ರಾಜ್ಯದಲ್ಲಿ ಆಗುತ್ತಿಲ್ಲ. ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡುತ್ತಿದ್ದೇವೆ. ಜನಪ್ರತಿನಿಧಿಗಳು ತಪ್ಪನ್ನು ತಿದ್ದಿಕೊಳ್ಳದಿದ್ದರೆ ಮುಂದಿನ ಬಾರಿ ಚುನಾವಣೆಗೆ ಸ್ಪರ್ಧೆ ಮಾಡುತ್ತೇವೆ. ಈ ಬಗ್ಗೆ ಉತ್ತರ ಭಾರತದ ಅಖಾಡಗಳ ಜೊತೆ ಮಾತುಕತೆಯಾಗಿದೆ. 50ಕ್ಕೂ ಅಧಿಕ ಸಾಧು ಸಂತರಿಂದ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇವೆ ಎಂದು ಕನ್ಯಾಡಿ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ರಾಜ್ಯದ ಯಾವುದೇ ಭಾಗದಲ್ಲಿ ನಾವು ಚುನಾವಣೆಗೆ ನಿಲ್ಲಬಹುದು. ಕುಮಟಾದ ಶಾಸಕ ದಿನಕರ್ ಶೆಟ್ಟಿ ಕ್ಷೇತ್ರ ಬಿಟ್ಟು ಕೊಡುವುದಾಗಿ ಹೇಳಿದ್ದಾರೆ. ಈ ರೀತಿ ಸೀಟು ಬಿಟ್ಟು ಕೊಡುವ ಅನೇಕ ಶಾಸಕರಿದ್ದಾರೆ. 50ಕ್ಕೂ ಅಧಿಕ ಸಂಖ್ಯೆಯಲ್ಲಿ ಸಂತರು ಚುನಾವಣೆಗೆ ನಿಲ್ಲುತ್ತೇವೆ. ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತಿದ್ದೇವೆ. ನಾವು ಚುನಾವಣೆಯಲ್ಲಿ ಗೆಲ್ಲಬೇಕಂತಿಲ್ಲ. ಸರ್ಕಾರ ಟ್ರ್ಯಾಕ್ ತಪ್ಪಿದಾಗ ಎಚ್ಚರ ಮಾಡುತ್ತೇವೆ. ಚುನಾವಣೆಗೆ ನಿಲ್ಲುವ ನಿರ್ಧಾರ ಸರ್ಕಾರದ ಹೆಜ್ಜೆ ನೋಡಿ ತೀರ್ಮಾನ ಮಾಡುತ್ತೇವೆ. ನಮ್ಮ ತಂಡ ಉತ್ತರಾಖಂಡದಲ್ಲಿ ಇದೆ, ವಿರಕ್ತ ಸಮಾಜ ಮುಂದೆ ಬರುತ್ತದೆ ಎಂದು ಕನ್ಯಾಡಿಯ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ.
ಇನ್ನು ಸ್ವಾಮೀಜಿ ಚುನಾವಣೆ ಎಚ್ಚರಿಕೆ ನೀಡುತ್ತಿದ್ದಂತೆಯೇ ನಾಗಾಸಾಧುಗಳೂ ಸ್ವಾಮೀಜಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸ್ವಾಮೀಜಿಯನ್ನು ನಾಗಾಸಾಧು ನಿಯೋಗ ಭೇಟಿಯಾಗಿದೆ. ಉತ್ತರಾಖಂಡ ಜುನಾ ಅಖಾಡದ ಮಹಂತ್ ಪದಂನಾಭಂ ನಂದಗಿರಿ ಸ್ವಾಮೀಜಿ ನಿಯೋಗ ಕನ್ಯಾಡಿ ರಾಮಕ್ಷೇತ್ರದಲ್ಲಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯನ್ನು ಭೇಟಿಯಾಗಿದ್ದಾರೆ.
ರಾಜ್ಯದಲ್ಲಿ ಯೋಗಿ ಮಾದರಿ ಸರ್ಕಾರ ಬರಬೇಕು. ಕಳಂಕ ರಹಿತ, ಭ್ರಷ್ಟಾಚಾರ ರಹಿತ ಸರ್ಕಾರ ಬರಬೇಕು. ಇದಕ್ಕಾಗಿ ಸಾಧು ಸಂತರು ರಾಜ್ಯದಲ್ಲಿ ಪ್ರಚಾರ ಮಾಡುತ್ತೇವೆ. ಕನ್ಯಾಡಿ ಸ್ವಾಮೀಜಿಗಳ ಬೆಂಬಲಕ್ಕೆ ನಾವು ಇದ್ದೇವೆ ಅಂತಾ ಜುನಾ ಅಖಾಡದ ಮಹಂತ್ ಪದಂನಾಭಂ ನಂದಗಿರಿ ಸ್ವಾಮೀಜಿ ಹೇಳಿದ್ದಾರೆ.