ವಿನಾಯಕ ಬಾಳಿಗ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿದಾರ ಆತ್ಮಹತ್ಯೆ
ಮಂಗಳೂರು, ನವೆಂಬರ್ 25: ಆರ್ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿ ಎಂದು ಪರಿಗಣಿಸಿದ್ದ ವಿಘ್ನೇಶ್ ನಾಯಕ್ ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಅಲ್ಲದೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಬಿಜೆಪಿ ಕಾರ್ಯಕರ್ತ ವಿನಾಯಕ ಬಾಳಿಗ ಹತ್ಯೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಧಾರನಾಗಿದ್ದ ವಿಘ್ನೇಶ್ ನಾಯಕ್ ಭಾನುವಾರ ಮಧ್ಯರಾತ್ರಿ ಮಂಗಳೂರಿನ ವಿ.ಟಿ ರಸ್ತೆಯಲ್ಲಿರುವ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
ವಿನಾಯಕ್ ಬಾಳಿಗ ಕೊಲೆ ಆರೋಪಿ ನರೇಶ್ ಶೆಣೈ ಶರಣು
ಮುಂದಿನ ತಿಂಗಳು ವಿಘ್ನೇಶ್ ನಾಯಕ್ ವಿವಾಹ ನಿಶ್ಚಯವಾಗಿತ್ತು. ಮದುವೆ ಮುರಿದುಬಿದ್ದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದ್ದರೂ, ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ಮನಸ್ಸಿನ ಯುವಕನಲ್ಲ ಎಂದೂ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿನಾಯಕ ಬಾಳಿಗ ಹತ್ಯೆ ಹಾಗೂ ವಿಘ್ನೇಶ್ ನಾಯಕ್ ಆತ್ಮಹತ್ಯೆ ಹಿಂದೆ ಕಾಣದ ಕೈ ಏನಾದರೂ ಕೆಲಸ ಮಾಡಿದೆಯೇ ಎಂಬುದು ಗುಮಾನಿ ಇದೆ.
ವಿಘ್ನೇಶ್ ನಾಯಕ್ಗೆ ತಾಯಿ ಬಿಟ್ಟರೆ ಬೇರೆ ಯಾರೂ ಇದ್ದಿಲ್ಲ. ಒಂದು ವರ್ಷದ ಮಗುವಾಗಿದ್ದಾಗಲೇ ಈತನ ತಂದೆ ಮೃತಪಟ್ಟಿದ್ದರು. ತಾಯಿಗೆ ಮಗನ ಹೊರತು ಬೇರೆ ಯಾರಿದ್ದಿಲ್ಲ. ಆದರೆ ಈಗ ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿದ್ದು ತಾಯಿ ಜೀವನ ಹೇಗೆ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ.
ಮತ್ತಷ್ಟು ಮಂದಿ ವಿಘ್ನೇಶ್ ನಾಯಕ್ ಆತ್ಮಹತ್ಯೆಯಿಂದ ವಿನಾಯಕ ಬಾಳಿಗ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿ ಕೂಡ ನಾಶವಾದಂತಾಯಿತು ಎಂದು ಹೇಳುತ್ತಿದ್ದಾರೆ.
ವಿನಾಯಕ ಬಾಳಿಗ ಹತ್ಯೆ ಪ್ರಕರಣದಲ್ಲಿ ಭಾಗಿಯಾದವರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿ "ಜಸ್ಟೀಸ್ ಫಾರ್ ವಿನಾಯಕ ಬಾಳಿಗ' ಅಭಿಯಾನ ಕೂಡ ಆರಂಭಿಸಲಾಗಿತ್ತು. ಬಾಳಿಗನ ಸಹೋದರಿ ಅನುರಾಧಾ ಬಾಳಿಗ ಅವರು ಎಸ್ಐಟಿ ರಚನೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದು, ಸರ್ಕಾರ ಕೂಡ ಎಸ್ಐಟಿ ರಚನೆಗೆ ಒಪ್ಪಿಗೆ ಸೂಚಿಸಿತ್ತು. ಎಸ್ಐಟಿ ರಚನೆಯಾಗಿ ತನಿಖೆ ನಡೆದಿದ್ದರೆ ವಿನಾಯಕ ಬಾಳಿಗ ಹತ್ಯೆಯ ಹಿಂದಿರುವ ಕೈಗಳು ಹೊರಗೆ ಬರುತ್ತಿದ್ದವು. ಅಷ್ಟರಲ್ಲೇ ವಿಘ್ನೇಶ್ ನಾಯಕ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವಿಘ್ನೇಶ್ ನಾಯಕ್ ಆತ್ಮಹತ್ಯೆ ಸಂಬಂಧ ಜಸ್ಟೀಸ್ ಫಾರ್ ವಿನಾಯಕ ಬಾಳಿಗ ಅಭಿಯಾನದ ರೂವಾರಿ ನರೇಂದ್ರ ನಾಯಕ್ ಅನುಮಾನ ವ್ಯಕ್ತಪಡಿಸಿದ್ದಾರೆ. ವಿನಾಯಕ ಬಾಳಿಗ ಹತ್ಯೆಯ ಸಾಕ್ಷಿ ಇಲ್ಲದಂತಾಗಿದೆ ಎಂದರು.
ಮದುವೆ ಮುರಿದು ಬಿದ್ದಿದೆ ಎಂಬ ಕಾರಣಕ್ಕೆ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುವುದೇ ಅನುಮಾನಕ್ಕೆ ಕಾರಣವಾಗಿದೆ ಎಂದು ಶಂಕಿಸಿದ್ದಾರೆ. ವಿನಾಯಕ ಬಾಳಿಗ ಹಾಗೂ ವಿಘ್ನೇಶ್ ನಾಯಕ್ ಸಾವಿನ ಪ್ರಕರಣ ಕುರಿತಂತೆ ಎಸ್ಐಟಿ ರಚನೆ ಮಾಡಿ ತನಿಖೆ ನಡೆಸಬೇಕು ಎಂದು ನರೇಂದ್ರ ನಾಯಕ್ ಒತ್ತಾಯಿಸಿದ್ದಾರೆ.
2016ರ ಮಾರ್ಚ್ 21ರಂದು ವಿನಾಯಕ ಬಾಳಿಗ ಅವರನ್ನು ಕೊಡಿಯಾಲ್ ಬೈಲ್ ನಲ್ಲಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಉದ್ಯಮಿ ಹಾಗೂ ನಮೋ ಬ್ರಿಗೇಡ್ ಮುಖಂಡ ನರೇಶ್ ಶೆಣೈ ಅವರ ಬಂಧನವಾಗಿತ್ತು. ಬಳಿಕ ಆತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಬಿಡುಗಡೆ ಸಂದರ್ಭದಲ್ಲಿ ಚಕ್ರವರ್ತಿ ಸೂಲಿಬೆಲೆ ಕೂಡ ಜೈಲಿನ ಬಳಿಗೆ ತೆರಳಿ ನರೇಶ್ ಶೆಣೈ ಅವರನ್ನು ಸ್ವಾಗತಿಸಿದ್ದರು. ಈ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.