ಕರಾವಳಿಗೆ ಅಪ್ಪಳಿಸಲಿದೆ ಸಾಗರ್ ಚಂಡಮಾರುತ: ಕಡಲತಡಿಯಲ್ಲಿ ಆತಂಕ
ಮಂಗಳೂರು ಮೇ 18: ರಾಜ್ಯದ ಕರಾವಳಿಗೆ ಭಾರೀ ಪ್ರಭಾವಶಾಲಿ ಚಂಡಮಾರುತ ಅಪ್ಪಳಿಸುವ ಭೀತಿ ಎದುರಾಗಿದೆ.
ಮುಂದಿನ 24 ಗಂಟೆಗಳಲ್ಲಿ ಕರಾವಳಿ ಭಾಗಕ್ಕೆ ಸಾಗರ್ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಾಗರ್ ಚಂಡಮಾರುತದ ಪರಿಣಾಮ ಕರಾವಳಿ ಪ್ರದೇಶದ ಕಡಲಿನಲ್ಲಿ ಭಾರಿ ಅಲೆಗಳು ಏಳುವ ಮುನ್ಸೂಚನೆ ಇರುವ ಹಿನ್ನೆಲೆಯಲ್ಲಿ ಮೀನುಗಾರಿಕೆ ತೆರಳದಂತೆ ಇಲಾಖೆ ಎಚ್ಚರಿಕೆ ನೀಡಿದೆ.
ಹವಾಮಾನ ವೈಪರೀತ್ಯದಿಂದ ಸುರಿದ ಮಳೆ ಜಲಕ್ಷಾಮ ತಪ್ಪಿಸಿತು!
ಇದರಿಂದ ಈಗಲೇ ಮಳೆಯ ಅಬ್ಬರಕ್ಕೆ ತತ್ತರಿಸಿರುವ ಕರಾವಳಿಯ ಜನತೆ ಮತ್ತಷ್ಟು ಗಾಳಿ, ಸಿಡಿಲು ಸಹಿತ ಭಾರಿ ಮಳೆಯನ್ನು ಎದುರಿಸಬೇಕಾಗಬಹುದು. ಮಳೆಯ ತೀವ್ರತೆ ಹೆಚ್ಚಿರಲಿದ್ದು, ಬಿರುಗಾಳಿಗೆ ಮರ, ವಿದ್ಯುತ್ ಕಂಬಗಳು ಧರೆಗೆ ಉರುಳುವ ಅಪಾಯಗಳಿವೆ.
ದಕ್ಷಿಣದ ರಾಜ್ಯಗಳಿಗೆ ಎಚ್ಚರಿಕೆ
ಹವಾಮಾನ ಇಲಾಖೆ ಶುಕ್ರವಾರ ತಮಿಳುನಾಡು, ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರ ಮತ್ತು ಲಕ್ಷದ್ವೀಪ ದ್ವೀಪಸಮೂಹಗಳಿಗೆ 'ಸಾಗರ್' ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಕುರಿತಂತೆ ಎಚ್ಚರಿಕೆ ನೀಡಿದೆ.
ಅರಬ್ಬಿ ಸಮುದ್ರದ ಅಡೆನ್ ಕೊಲ್ಲಿಯಲ್ಲಿ ಕೇಂದ್ರಿಕೃತವಾಗಿರುವ ಸಾಗರ್ ಚಂಡಮಾರುತದ ಕುರಿತು ದೇಶದ ದಕ್ಷಿಣದ ರಾಜ್ಯಗಳು ಹಾಗೂ ಲಕ್ಷ ದ್ವೀಪದ ನಿವಾಸಿಗಳು ಜಾಗ್ರತೆ ವಹಿಸುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.
ಗುಡುಗು, ಸಿಡಿಲು, ಚಂಡಮಾರುತದ ಬಗ್ಗೆ ಮುನ್ನೆಚ್ಚರಿಕೆ ನೀಡುವ ಆ್ಯಪ್
ಅಡೆನ್ನಿಂದ ಚಂಡಮಾರುತ
ಚಂಡಮಾರುತವು ಯೆಮನ್ನ ಅಡೆನ್ ನಗರದ ಈಶಾನ್ಯ ಮತ್ತು 560 ಕಿಮೀ ಸೊಕೊಟ್ರಾ ದ್ವೀಪಗಳ ಅರಬ್ಬಿ ಸಮುದ್ರದ ಗಡಿ ಭಾಗದಲ್ಲಿ ಸುಮಾರು 390 ಕಿ.ಮೀ ಪೂರ್ವಕ್ಕೆ ನೆಲೆ ಕಂಡುಕೊಂಡಿದೆ. ಈ ಭಾಗದಲ್ಲಿ ತೀವ್ರವಾಗಿರುವ ಚಂಡಮಾರುತವು ಭಾರತದ ದಕ್ಷಿಣ ಭಾಗಗಳತ್ತ ತಿರುಗಿ ನುಗ್ಗುವ ಸಾಧ್ಯತೆ ಇದೆ.
ಮೀನುಗಾರಿಕೆ ಬೇಡ
ಮುಂದಿನ 12 ಗಂಟೆಗಳಲ್ಲಿ ಇದು ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದ್ದು, ಮುಂದಿನ 48 ಗಂಟೆಗಳಲ್ಲಿ ಪಶ್ಚಿಮ ಕೇಂದ್ರ ಭಾಗ, ನೈರುತ್ಯ ಅರೇಬಿಯನ್ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಬಾರದೆಂದು ಮೀನುಗಾರರಿಗೆ ಇಲಾಖೆ ಎಚ್ಚರಿಕೆ ರವಾನಿಸಿದೆ.
ಇನ್ನು 24 ಗಂಟೆಗಳಲ್ಲಿ ರಾಜ್ಯದ ಕರಾವಳಿ ಭಾಗಗಳಿಗೆ ಈ ಸಾಗರ್ ಚಂಡಮಾರುತ ಅಪ್ಪಳಿಸುವ ಆತಂಕವಿದೆ. ಈ ನಡುವೆ ಚಂಡಮಾರುತದ ಮುನ್ಸೂಚನೆಯಂತೆ ಮಂಗಳೂರಿನ ಸುತ್ತಮುತ್ತ ಗುರುವಾರ ತಡರಾತ್ರಿ ಗುಡುಗು ಸಹಿತ ಭಾರೀ ಮಳೆ ಸುರಿದಿದೆ.
ಮರಗಳು ಉರುಳಿ ಜಖಂ
ಮಂಗಳೂರಿನಲ್ಲಿ ತಡರಾತ್ರಿ ಸುರಿದ ಗಾಳಿ ಮಳೆಗೆ ಬೃಹತ್ ಗಾತ್ರದ ಮರ ಉರುಳಿ ಬಿದ್ದು, ನಾಲ್ಕು ಕಾರುಗಳು ಜಖಂಗೊಂಡಿವೆ. ಮಂಗಳೂರಿನ ಅತ್ತಾವರದ ಬಾಬುಗುಡ್ಡೆಯಲ್ಲಿ ಘಟನೆ ನಡೆದಿದ್ದು ಮರದ ಬಳಿ ಇದ್ದ ವಿದ್ಯುತ್ ಟ್ರಾನ್ಸ್ ಫಾರ್ಮರ್ ಹಾಗೂ ಮೂರು ವಿದ್ಯುತ್ ಕಂಬ ಕೂಡ ಉರುಳಿ ಬಿದ್ದಿದೆ.
ಇದರಿಂದಾಗಿ ಮರದ ಬಳಿ ನಿಲ್ಲಿಸಿದ್ದ ನಾಲ್ಕು ಕಾರು ಜಖಂ ಆಗಿದ್ದು ಅಪಾರ ನಷ್ಟವಾಗಿದೆ. ರಾತ್ರಿ ಸಮಯ ಘಟನೆ ಸಂಭವಿಸಿರುವುದರಿಂದ ವಿದ್ಯುತ್ ಶಾಕ್ ದುರಂತದಿಂದ ಜನ ಪಾರಾಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ಮರ ತೆರವು ಕಾರ್ಯ ನಡೆಸುತ್ತಿದ್ದಾರೆ.