ವ್ಯಾಪಾರವಾದ ದೇಶಪ್ರೇಮ; ರಾಷ್ಟ್ರಧ್ವಜದಲ್ಲಿ ಧ್ವಜ ನಿಯಮವೇ ನಾಪತ್ತೆ!
ಮಂಗಳೂರು, ಆಗಸ್ಟ್ 8: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಆಗಸ್ಟ್ 13 ರಿಂದ 15 ರವರೆಗೆ ದೇಶಾದ್ಯಂತ ಮನೆ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿಸುವಂತೆ ಪ್ರಧಾನಿ ಮೋದಿ ದೇಶದ ಜನರಿಗೆ ಕರೆ ಕೊಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ಪ್ರತಿ ಪೋಸ್ಟ್ ಆಫೀಸ್ ನಲ್ಲೂ ರಾಷ್ಟ್ರಧ್ವಜ ಮಾರಾಟ ಆಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮುಖ್ಯ ಅಂಚೆ ಕಚೇರಿಯಲ್ಲೂ ರೂ. 25ಕ್ಕೆ ರಾಷ್ಟ್ರಧ್ವಜ ಮಾರಟ ಪ್ರಕ್ರಿಯೆ ಅಬ್ಬರದಿಂದ ಮಾರಾಟವಾಗುತ್ತಿದೆ. ಆದರೆ ಮಾರಾಟವಾಗುವ ಒಂದು ರಾಷ್ಟ್ರಧ್ವಜಕ್ಕೂ ಅಳತೆಯಿಲ್ಲ, ಹರಿದು ಹೋಗಿದೆ, ಬೆಂಕಿಯಲ್ಲಿ ಸುಟ್ಟ ರೀತಿಯಿದೆ. ಧ್ವಜದ ಮಧ್ಯಭಾಗದಲ್ಲಿ ಇರಬೇಕಾದ ಅಶೋಕ ಚಕ್ರ ಒಂದು ಬದಿಗೆ ಸರಿದಿದೆ ಎಂಬ ಆರೋಪ ಕೇಳಿಬಂದಿದೆ.
ಸಿದ್ದರಾಮೋತ್ಸವದ ನಂತರ ರಾಜಕೀಯವಾಗಿ ಪುಟಿದೆದ್ರಾ ಸಿದ್ದರಾಮಯ್ಯ?
ಇಂತಹ ಧ್ವಜ ಮಾರಾಟ ಮಾಡೋದು ಅಪರಾಧವಾಗಿದೆ. ರಾಷ್ಟ್ರಧ್ವಜ ಖರೀದಿಸಿದವರೆಲ್ಲಾ ಈ ರೀತಿಯ ರಾಷ್ಟ್ರವಿರೋಧಿ ಧ್ವಜ ಮಾರಿ ಹಣ ಮಾಡುವುದಕ್ಕೆ ಕಿಡಿ ಕಾರುತ್ತಿದ್ದಾರೆ. ಅಲ್ಲದೇ ಕೊಟ್ಟ ಹಣಕ್ಕೆ ರಶೀದಿ ಕೂಡ ಕೊಡ ದಿರುವುದು ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ.
ಕಳಪೆ ರಾಷ್ಟ್ರಧ್ವಜ ಮಾರಾಟದ ವಿರುದ್ದ ಪುತ್ತೂರು ಯುವ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. 1947 ಜುಲೈ 22 ರಂದು ಸಂವಿಧಾನ ರಚನಾ ಸಭೆಯಲ್ಲಿ ಅಂದಿನ ಪ್ರಧಾನಿಗಳಾಗಿದ್ದ ಪಂಡಿತ್ ಜವಾಹರ್ ಲಾಲ್ ನೆಹರೂ ಅವರು ನಮ್ಮ ರಾಷ್ಟ್ರಧ್ವಜವನ್ನು ದೇಶಕ್ಕೆ ಅರ್ಪಿಸಿದರು. ಆದರೆ ಈಗ ದೇಶಪ್ರೇಮವೂ ಮಾರಾಟವಾಗುತ್ತಿದೆ ಅಂತಾ ಆಕ್ರೋಶ ವ್ಯಕ್ತಪಡಿಸಿದೆ.
ರಾಷ್ಟ್ರ ಧ್ವಜವು ಕೇವಲ ಕೈ ನೇಯ್ಗೆಯಿಂದಲೇ ಸಿದ್ಧವಾದ ಶುದ್ಧ ಖಾದಿಯಿಂದಲೇ ಮಾಡಲ್ಪಟ್ಟಿರಬೇಕು. ಕೇಸರಿ - ಬಿಳಿ - ಹಸಿರು ಬಣ್ಣಗಳ ಅಳತೆ ಸಮ ಪ್ರಮಾಣದಲ್ಲಿ ಇದ್ದು ನೀಲಿ ಚಕ್ರವು ಹೆಚ್ಚು ಕಡಿಮೆ ಬಿಳಿ ಬಣ್ಣದ ಅಡ್ಡ ಗೆರೆಗಳಷ್ಟಿದ್ದು, ಅದರಲ್ಲಿ 24 ರೇಖೆಗಳಿವೆ. ಧ್ವಜದ ಉದ್ದ ಮತ್ತು ಅಗಲ 3:2 ಪ್ರಮಾಣದಲ್ಲಿರಬೇಕು ಎಂಬುದು ಧ್ವಜ ನಿಯಮವಾಗಿದೆ. ರಾಷ್ಟ್ರ ಧ್ವಜವನ್ನು ಕರ್ನಾಟಕದ ಧಾರವಾಡ ಜಿಲ್ಲೆಯ ಗ್ರಾಮದಲ್ಲಿ ತಯಾರಿಸಲಾಗುತ್ತದೆ. ಉತ್ತರ ಕರ್ನಾಟಕದಾದ್ಯಂತ ಒಟ್ಟು 52 ಘಟಕಗಳು ರಾಷ್ಟ್ರಧ್ವಜ ನಿರ್ಮಾಣದಲ್ಲಿ ತೊಡಗಿವೆ.
"ರಾಷ್ಟ್ರಧ್ವಜವನ್ನು ಮನೆಗಳು, ಕಟ್ಟಡಗಳ ಮೇಲ್ಗಡೆ ಹಾರಾಟ ಮಾಡಲು ಯಾವುದೇ ತೊಂದರೆಯಿಲ್ಲ. ಆದರೆ ಧ್ವಜಸಂಹಿತೆಯನ್ನು ಪಾಲಿಸದಿದ್ದಲ್ಲಿ ಮಾತ್ರ ಪ್ರಕರಣ ದಾಖಲಿಸಲಾಗುತ್ತದೆ. ಅಲ್ಲದೆ ಜೈಲು ಶಿಕ್ಷೆ ಶತಸಿದ್ಧ" ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಯಲ್ಲಿ ಮಾತನಾಡಿದ ಅವರು, "ಧ್ವಜ ಸಂಹಿತೆಯ ಪ್ರಕಾರ ರಾಷ್ಟ್ರಧ್ವಜಕ್ಕೆ ಅಗೌರವ ತೋರುವುದು, ನಾಶ ಪಡಿಸುವುದು, ಅಪಕೀರ್ತಿ ತರುವಂತೆ ಮಾಡುವುದು, ಹರಿದು ಹಾಕುವುದು ಇಂತಹ ಕೃತ್ಯ ಎಸಗಿದ್ದಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಲು ಅವಕಾಶ ಇದೆ. ಇದಕ್ಕೆ ಯಾರ ಅನುಮತಿಗೂ ಕಾಯಬೇಕಿಲ್ಲ. ಯಾರೇ ನಾಗರಿಕರು ಈ ಬಗ್ಗೆ ದೂರು ನೀಡಿದರೂ ಪೊಲೀಸರು ಕ್ರಿಮಿನಲ್ ಕೇಸು ದಾಖಲಿಸಿ ಜೈಲಿಗಟ್ಟಲು ಅವಕಾಶ ಇದೆ" ಎಂದು ಎಚ್ಚರಿಕೆ ನೀಡಿದ್ದಾರೆ.
"ಕೃತ್ಯ ಎಸಗಿರುವುದು ಸಾಬೀತಾದಲ್ಲಿ ಕನಿಷ್ಠ 3 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಹಾಗಾಗಿ ಆಗಸ್ಟ್ 13ರಿಂದ 15ರವರೆಗೆ ಧ್ವಜಾರೋಹಣ ಮಾಡಿ ಇಳಿಸಿದ ಬಳಿಕ ಧ್ವಜವನ್ನು ಎಸೆಯದೆ, ಜೋಪಾನವಾಗಿ ಮನೆಯಲ್ಲೇ ಇರಿಸಬೇಕು" ಎಂದು ಡಾ. ಕುಮಾರ್ ಹೇಳಿದರು.