ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಲು ಕೇಂದ್ರದ ನಕಾರ; ನಿಷ್ಕ್ರೀಯರಾದ ಜನಪ್ರತಿನಿಧಿಗಳು
ಮಂಗಳೂರು, ಡಿಸೆಂಬರ್ 17: ಕರ್ನಾಟಕ ಕರಾವಳಿಗರ ತುಳು ಭಾಷೆಯನ್ನು ಭಾರತೀಯ ಸಂವಿಧಾನದ 8ನೇ ಪರಿಚ್ಛೇದಡಿಯಲ್ಲಿ ಸೇರಿಸಬೇಕೆಂಬ ತುಳುವರ ಕನಸು ನುಚ್ಚುನೂರಾಗಿದೆ. ತುಳು ಭಾಷೆಯನ್ನು ಭಾರತೀಯ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಯಾವುದೇ ಯೋಜನೆ ಕೇಂದ್ರ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯದ ರಾಜ್ಯ ಸಚಿವ ನಿತ್ಯಾನಂದ ರಾಯ್ ಕಡ್ಡಿ ಮುರಿಯುವಂತೆ ಹೇಳಿದ್ದಾರೆ.
ಸಂಸತ್ನಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಕಾಸರಗೋಡು ಸಂಸದ ರಾಜ ಮೋಹನ್ ಉನ್ನಿತಾನ್ ಪ್ರಶ್ನೆಗೆ ಲೋಕಸಭೆಯಲ್ಲಿ ಉತ್ತರಿಸಿದ ಸಚಿವ ನಿತ್ಯಾನಂದ್ ರಾಯ್, ಪ್ರಸ್ತುತ ಅಧಿಕೃತ ಭಾಷೆಗಳ ಸಂಖ್ಯೆಯನ್ನು ಹೆಚ್ಚಿಸುವುದು ಪ್ರಾಯೋಗಿಕವೂ ಅಲ್ಲ ಅಥವಾ ಆಡಳಿತಾತ್ಮಕವಾಗಿಯೂ ಅದು ಕಾರ್ಯಸಾಧುವೂ ಅಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಅಸಂಖ್ಯಾತ ತುಳುವರ ಆಕಾಂಕ್ಷೆಗಳಿಗೆ ಕೇಂದ್ರ ಸರ್ಕಾರ ತಣ್ಣೀರೆರೆಚಿದೆ.
ಕಾಸರಗೋಡು ಸಂಸದ ರಾಜ ಮೋಹನ್ ಉನ್ನಿತ್ತಾನ್ ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆ ಕೇಂದ್ರ ಸರ್ಕಾರದ ನಿಲುವನ್ನು ಕೇಳಿದ್ದರು. ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಸಚಿವರು, "ಡಾ. ಸೀತಾಕಾಂತ್ ಮಹೋಪಾತ್ರ ಸಮಿತಿಯು ಎಂಟನೇ ಪರಿಚ್ಛೇದದಲ್ಲಿರುವ ಭಾಷೆಗಳನ್ನು ಒಕ್ಕೂಟದ ಅಧಿಕೃತ ಭಾಷೆಗಳಾಗಿ ಗುರುತಿಸುವ ಬಗ್ಗೆ ಯಥಾಸ್ಥಿತಿಯನ್ನು ಮುಂದುವರಿಸಬೇಕು ಎಂದು ಶಿಫಾರಸು ಮಾಡಿತ್ತು. ಪ್ರಸ್ತುತ, ಅಧಿಕೃತ ಭಾಷೆಗಳ ಸಂಖ್ಯೆಯನ್ನು ಹೆಚ್ಚಿಸುವುದು ಪ್ರಾಯೋಗಿಕ ಅಥವಾ ಆಡಳಿತಾತ್ಮಕವಾಗಿ ಕಾರ್ಯಸಾಧ್ಯವಲ್ಲ,'' ಎಂದು ಸಚಿವರು ತಿಳಿಸಿದ್ದಾರೆ.
"ತುಳುವನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆ ಬೇಡಿಕೆಗಳು ಕಾಲಕಾಲಕ್ಕೆ ಬಂದಿವೆ. ಉಪಭಾಷೆಗಳು ಮತ್ತು ಭಾಷೆಗಳ ವಿಕಾಸವು ಒಂದು ಕ್ರಿಯಾತ್ಮಕ ಪ್ರಕ್ರಿಯೆಯಾಗಿದೆ. ಇದು ಸಾಮಾಜಿಕ- ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ಬೆಳವಣಿಗೆಗಳಿಂದ ಪ್ರಭಾವಿತವಾಗಿರುವುದರಿಂದ ಭಾಷೆಗಳಿಗೆ ಯಾವುದೇ ಮಾನದಂಡಗಳನ್ನು ನಿಗದಿಪಡಿಸುವುದು ಕಷ್ಟ,'' ಅಂತಾ ಹೇಳಿದ್ದಾರೆ.
"ಭಾಷೆಗಳನ್ನು ಉಪಭಾಷೆಗಳಿಂದ ಪ್ರತ್ಯೇಕಿಸುವುದೋ ಅಥವಾ ಎಂಟನೇ ಅನುಸೂಚಿಯಲ್ಲಿ ಸಂವಿಧಾನಕ್ಕೆ ಸೇರಿಸುವುದು ಎನ್ನುವ ನಿಷ್ಕರ್ಷೆಗೆ ಬರುವುದು ಕಷ್ಟ ಸಾದ್ಯವಾಗಿದೆ,'' ಅಂತಾ ಹೇಳಿದ್ದಾರೆ..
ತುಳು ದ್ರಾವಿಡ ಭಾಷೆಗಳಲ್ಲಿ ಒಂದಾಗಿದ್ದು, ಕರ್ನಾಟಕ ರಾಜ್ಯದ ಕರಾವಳಿಯ ಎರಡು ಜಿಲ್ಲೆಗಳಲ್ಲಿ ಮತ್ತು ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಮಾತೃ ಭಾಷೆಯಾಗಿರುವ ತುಳು ಭಾಷೆಯನ್ನು ಸಂವಿಧಾನಕ್ಕೆ ಸೇರಿಸಲು ಸರ್ಕಾರ ಯೋಜಿಸಿದೆಯೇ ಎಂದು ಸಂಸತ್ತಿನಲ್ಲಿ ತಿಳಿಯಲು ಸಂಸದ ರಾಜಮೋಹನ್ ಉನ್ನಿತಾನ್ ಪದೇ ಪದೇ ಬಯಸುತ್ತಿದ್ದಾರೆ. ಅವರು ಫೆಬ್ರವರಿ 9, 2021ರಲ್ಲೂ ಇದೇ ಪ್ರಶ್ನೆಯನ್ನು ಸಂಸತ್ತಿನಲ್ಲಿ ಕೇಳಿದ್ದರು.
ಆದರೆ ಈ ಬಗ್ಗೆ ಅತ್ಯಧಿಕ ತುಳು ಭಾಷಿಗರನ್ನು ಹೊಂದಿರುವ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಂಸದರು ಸಂಸತ್ತಿನಲ್ಲಿ ಧ್ವನಿ ಎತ್ತದಿರುವುದು ತುಳು ಭಾಷಿಗರಿಗೆ ನಿರಾಶೆ ಉಂಟು ಮಾಡಿದೆ. ತುಳು ಭಾಷೆಗೆ ಸಂವಿಧಾನ ಮಾನ್ಯತೆ ದೊರಕಿಸಿಕೊಡಬೇಕು ಎಂಬ ಹಲವು ವರ್ಷಗಳ ಹೋರಾಟಕ್ಕೆ ದೊಡ್ಡ ಹಿನ್ನಡೆಯಾಗಿದೆ.
ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದದಡಿಯಲ್ಲಿ ಸೇರಿಸಬೇಕೆಂದು ಹಲವು ಹೋರಾಟಗಳು ನಡೆದಿತ್ತು. ಕೇಂದ್ರ ಸರ್ಕಾರಕ್ಕೆ ಟ್ವಿಟರ್ ಅಭಿಯಾನವನ್ನೂ ಮಾಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಧರ್ಮಸ್ಥಳಕ್ಕೆ ಬಂದಾಗ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರೂ ಮನವಿ ಮಾಡಿದ್ದರು. ಆದರೆ ಕರಾವಳಿಯ ಜನಪ್ರತಿನಿಧಿಗಳ ಇಚ್ಛಾಶಕ್ತಿಯಿಂದ ಕೊರತೆಯಿಂದ ತುಳುವರ ಬೇಡಿಕೆ ಮಾತ್ರ ಸರ್ಕಾರಕ್ಕೆ ತಲುಪಿಲ್ಲ.
Recommended Video