ಮಳಲಿ ಮಸೀದಿಯೊಳಗೆ ದೇವಸ್ಥಾನ ಪತ್ತೆ, ತಾಂಬೂಲ ಪ್ರಶ್ನೆಗೆ ದಿನ ನಿಗದಿ!
ಮಂಗಳೂರು, ಮೇ 24: ಮಂಗಳೂರಿನ ವಿವಾದಿತ ಮಳಲಿ ದರ್ಗಾದಲ್ಲಿ ನಾಳೆ ತಾಂಬೂಲ ಪ್ರಶ್ನೆಗೆ ದಿನ ನಿಗದಿಯಾಗಿದೆ. ವೀಳ್ಯದೆಲೆಗಳ ಲೆಕ್ಕಾಚಾರದ ಆಧಾರದಲ್ಲಿ ಗ್ರಹಗತಿಗಳ ಚಲನೆ ಮೇಲೆ ದೈವೀ ಶಕ್ತಿ ಇದೆಯೋ ಎಂದು ಪತ್ತೆಯಾಗಲಿದೆ. ಆದರೆ ಪ್ರಶ್ನೆ ಇನ್ನಿತರ ವಿಚಾರ ಅವರವರ ವೈಯಕ್ತಿಕ ವಿಚಾರವಾಗಿದ್ದು ಕಾನೂನು ಮೂಲಕವೇ ಹೋರಾಟ ಮಾಡಬೇಕಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಮಳಲಿ ಮಸೀದಿಯಲ್ಲಿ ದೇಗುಲದ ಶೈಲಿ ಪತ್ತೆ ವಿಚಾರ ನ್ಯಾಯಾಲಯದಲ್ಲಿ ಇದ್ದು, ಇದರ ಮಧ್ಯೆ ವಿಹೆಚ್ಪಿ ಮತ್ತು ಬಜರಂಗದಳ ಇದನ್ನು ಹೋರಾಟವಾಗಿ ತೆಗೆದುಕೊಳ್ಳಲು ನಿರ್ಧರಿಸಿದೆ. ಜ್ಯೋತಿಷ್ಯದಲ್ಲಿ ಅತೀ ಉನ್ನತ ಸ್ಥಾನದಲ್ಲಿರುವ ಅಷ್ಟಮಂಗಲ ಇಡಲು ನಿರ್ಧರಿಸಲಾಗಿದ್ದು, ಇದರ ಪೂರ್ವಭಾವಿಯಾಗಿ ನಾಳೆ ಬೆಳಗ್ಗೆ ತಾಂಬೂಲ ಪ್ರಶ್ನೆಯನ್ನಿಡಲಿದೆ.
ಮಳಲಿ ಮಸೀದಿ ವಿಚಾರ: ಜಿಲ್ಲಾಧಿಕಾರಿ ವಿರುದ್ಧ ಯು. ಟಿ. ಖಾದರ್ ಅಸಮಾಧಾನ
ತಾಂಬೂಲ ಪ್ರಶ್ನೆ ಹಿನ್ನಲೆಯಲ್ಲಿ ನಾಳೆ ಮಳಲಿ ಭಾಗದಲ್ಲಿ ಪೊಲೀಸರು ಹೆಚ್ಚಿನ ಭದ್ರತೆ ಕೈಗೊಳ್ಳಲಿದ್ದಾರೆ. ಸದ್ಯ ಪ್ರಶ್ನೆಯಲ್ಲಿ ಯಾವ ಯಾವ ವಿಚಾರ ತಿಳಿದುಬರುತ್ತೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ರಾಮಾಂಜನೇಯ ಭಜನಾ ಮಂದಿರಲ್ಲಿ ತಾಂಬೂಲ ಪ್ರಶ್ನೆ
ಮಂಗಳೂರು ನಗರ ಹೊರವಲಯದ ಮಳಲಿಯ ವಿವಾದಿತ ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ದರ್ಗಾದ ಅನತಿ ದೂರದಲ್ಲೇ ನಾಳೆ ತಾಂಬೂಲ ಪ್ರಶ್ನೆ ನಡೆಯಲಿದೆ. ದೇವಸ್ಥಾನದ ಮಾದರಿ ಪತ್ತೆಯಾದ ದರ್ಗಾದ ಜಾಗದಲ್ಲಿ ದೈವಿಕ ಶಕ್ತಿ ಇದೆಯೋ ಎಂಬ ಬಗ್ಗೆ ತಿಳಿದುಕೊಳ್ಳುಲು ಹಿಂದೂ ಸಂಘಟನೆಗಳು ಈ ತಾಂಬೂಲ ಪ್ರಶ್ನೆ ಕಾರ್ಯಕ್ರಮವನ್ನು ನಡೆಸಲಿದೆ. ದರ್ಗಾಕ್ಕಿಂತ ಸುಮಾರು 250 ಮೀ ದೂರದಲ್ಲಿರುವ ರಾಮಾಂಜನೇಯ ಭಜನಾ ಮಂದಿರಲ್ಲಿ ಈ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಕೇರಳ ಮೂಲದ ಪೊದುವಾಲ್ರು ಬೆಳಗ್ಗೆ ಎಂಟು ಗಂಟೆಗೆ ಪೂಜೆಯನ್ನು ನೆರವೇರಿಸಿ ಪ್ರಶ್ನೆಯನ್ನಿಡಲಿದ್ದಾರೆ. ವೀಳ್ಯದೆಲೆಗಳ ಲೆಕ್ಕಾಚಾರದ ಆಧಾರದಲ್ಲಿ ಗ್ರಹಗತಿಗಳ ಚಲನೆ ಮೇಲೆ ದೈವೀ ಶಕ್ತಿ ಇದೆಯೋ ಎಂಬುದು ಪತ್ತೆಯಾಗಲಿದೆ.
ಮಂಗಳೂರಲ್ಲಿ ರಾಮಮಂದಿರ ಮಾದರಿಯ ಅಭಿಯಾನ: ವಿಎಚ್ಪಿ
ಪೊಲೀಸರು ಭದ್ರತೆಯಲ್ಲಿ ತಾಂಬೂಲ ಪ್ರಶ್ನೆ
ವಿವಾದಿತ ದರ್ಗಾ ಮತ್ತು ತಾಂಬೂಲ ಪ್ರಶ್ನೆ ನಡೆಯಲಿರುವ ಭಜನಾ ಮಂದಿರದ ಸುತ್ತ ಪೊಲೀಸರು ಭದ್ರತೆ ಕೈಗೊಂಡಿದ್ದಾರೆ. ಇನ್ನು ಈ ವಿವಾದದ ಕುರಿತಂತೆ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಡಾ ಕೆ.ವಿ ರಾಜೇಂದ್ರ ಅಧಿಕಾರಿಗಳು ಮತ್ತು ವಿವಾದಕ್ಕೆ ಸಂಬಂಧಿಸಿದವರ ಜೊತೆ ಸಭೆ ನಡೆಸಿದ್ದಾರೆ. ಸಭೆಯ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ನ್ಯಾಯಾಲಯ ದರ್ಗಾದ ನವೀಕರಣ ಕಾಮಗಾರಿಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಯಾವುದೇ ಕಾಮಗಾರಿ ನಡೆಸದಂತೆ ಕೋರ್ಟ್ ಆದೇಶಿಸಿದೆ. ಹೀಗಾಗಿ ಅಧಿಕಾರಿಗಳ, ಜುಮ್ಮಾ ಮಸೀದಿ ಅಧ್ಯಕ್ಷ ಕಾರ್ಯದರ್ಶಿಗಳ ಜೊತೆ ಸಭೆ ಮಾಡಿದ್ದೇವೆ. ಪ್ರಶ್ನಾ ಚಿಂತನೆ ಇನ್ನಿತರ ಧಾರ್ಮಿಕ ವಿಚಾರ ಅವರವರ ವೈಯಕ್ತಿಕ ವಿಚಾರವಾಗಿದೆ. ಆದ್ರೆ ಕಾನೂನು ಮೂಲಕವೇ ಹೋರಾಟ ಮಾಡಬೇಕಾಗಿದೆ ಎಂಬುದನ್ನು ಮನವರಿಕೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಯಾರೂ ಕೂಡಾ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಬಾರದು, ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲರೂ ಸಹಕರಿಸಿ ಎಂದು ಡಿ.ಸಿ ಮನವಿ ಮಾಡಿದ್ದಾರೆ.
ತಾಂಬೂಲ ಪ್ರಶ್ನೆ ನಡೆಯುವುದೇಗೆ?
ತಾಂಬೂಲ ಪ್ರಶ್ನೆ ಇಡುವ ತಂಡ ಮೊದಲಿಗೆ ಪ್ರಖ್ಯಾತ ಜ್ಯೋತಿಷ್ಯರನ್ನು ಹುಡುಕಬೇಕು. ಮಳಲಿ ಮಸೀದಿ ವಿವಾದ ಸಂಬಂಧ ವಿಶ್ವಹಿಂದೂ ಪರಿಷತ್ ಕೇರಳದ ಪೊದುವಾಳ್ ಅವರ ಮೂಲಕ ತಾಂಬೂಲ ಪ್ರಶ್ನೆ ಇಡಲಿದೆ. ಅದರಂತೆ ತಾಂಬೂಲ ಪ್ರಶ್ನೆ ಇಡುವವರು ವೀಳ್ಯದೆಳೆಗಳನ್ನ ತೆಗೆದುಕೊಂಡು ಹೋಗಿ ಜ್ಯೋತಿಷ್ಯರಿಗೆ ನೀಡಬೇಕು. ಆ ವೀಳ್ಯದೆಳೆಗಳ ಲೆಕ್ಕಾಚಾರದ ಆಧಾರದಲ್ಲಿ ಅವರು ಮೊದಲಿಗೆ ಶುಭ ಮತ್ತು ಅಶುಭ ಫಲಗಳನ್ನು ಸ್ಥಳದಲ್ಲೇ ನಿರ್ಧರಿಸುತ್ತಾರೆ. ಅದರಂತೆ ತಾಂಬೂಲ ಪ್ರಶ್ನೆ ಇಡಬೇಕಾದ ಜಾಗಕ್ಕೆ ಬಂದು ಒಂದು ದಿನದ ತಾಂಬೂಲ ಪ್ರಶ್ನೆ ಇಡಲಾಗುತ್ತದೆ. ಬ್ರಾಹ್ಮಿ ಮುಹೂರ್ತದಲ್ಲಿ ತಾಂಬೂಲ ಪ್ರಶ್ನೆ ಇಡಲಾಗುತ್ತದೆ.
ಓರ್ವ ಪ್ರಮುಖ ಜೋಯಿಷರು ಸೇರಿ ಇಬ್ಬರು ಅಥವಾ ಹೆಚ್ಚು ಸಹಾಯಕ ಜ್ಯೋತಿಷ್ಯರು ಇರ್ತಾರೆ. ಪ್ರಶ್ನೆ ಇಡೋರು ಕೊಟ್ಟ ವೀಳ್ಯದೆಲೆಗಳ ಲೆಕ್ಕಾಚಾರದಲ್ಲಿ ಗ್ರಹಗತಿಗಳು ತಿಳಿಯುತ್ತದೆ. ಆ ಶಾಸ್ತ್ರದ ಪ್ರಕಾರ ಯಾವ ಗ್ರಹ ಎಲ್ಲಿದೆ ಅನ್ನೋದರ ಮೇಲೆ ಒಂದು ಗ್ರಹಗತಿ ಗೊತ್ತಾಗುತ್ತದೆ. ವೀಳ್ಯದೆಲೆ ಸಂಖ್ಯೆಯ ಆಧಾರದಲ್ಲಿ ಶುಕ್ರ ಗ್ರಹದ ಬಗ್ಗೆ ಬಂದರೆ ಆ ಜಾಗದಲ್ಲಿ ದೇವಿ ಸಾನಿಧ್ಯ, ರವಿಯ ಬಗ್ಗೆ ಬಂದರೆ ಶಿವನ ಸಾನಿಧ್ಯ ಅಂತ ಹೇಳಲಾಗುತ್ತದೆ. ಆ ಬಳಿಕ ಹೆಚ್ಚಿನ ಪ್ರಶ್ನಾ ಚಿಂತನೆ ನಡೆಸಿ ಯಾವ ದಿಕ್ಕಿನಲ್ಲಿ ದೈವ ಸಾನಿಧ್ಯವಿದೆ ಅಂತ ನಿಖರವಾಗಿ ಹೇಳುವುದೇ ತಾಂಬೂಲ ಪ್ರಶ್ನೆ.
ಕೋರ್ಟ್ನಿಂದ ಮಸೀದಿ ನವೀಕರಣಕ್ಕೆ ತಡೆ
ಮಳಲಿಯ ಅಸಯ್ಯದ್ ಅಬ್ದುಲ್ಲಾಹಿಲ್ ಮದನಿ ದರ್ಗಾದೊಳಗೆ ನವೀಕರಣ ಕಾಮಗಾರಿ ವೇಳೆ ಹಿಂದೂ ಶೈಲಿಯ ಕೆತ್ತನೆ ಪತ್ತೆಯಾಗಿತ್ತು. ತಕ್ಷಣ ಮಧ್ಯ ಪ್ರವೇಶಿಸಿರುವ ದ.ಕ.ಜಿಲ್ಲಾಡಳಿತವು ಮಂಗಳೂರು ತಹಸೀಲ್ದಾರ್ ರವರ ಮೂಲಕ ದರ್ಗಾ ನವೀಕರಣ ಕಾಮಗಾರಿಯನ್ನು ಸ್ಥಗಿತಗೊಳಿಸಲು ಸೂಚನೆ ನೀಡಿತ್ತು. ಆ ಬಳಿಕ ಕೋರ್ಟ್ ನಿಂದಲೂ ದರ್ಗಾ ನವೀಕರಣ ಕಾಮಗಾರಿಗೆ ತಡೆಯಾಜ್ಞೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಈಗಲೂ ದರ್ಗಾದ ಕಾಮಗಾರಿ ಸ್ಥಗಿತಗೊಂಡಿದ್ದು, ದರ್ಗಾ ಇರುವ ಪ್ರದೇಶದ ಮೂಲ ಭೂ ದಾಖಲೆಗಳನ್ನು ಪರಿಶೀಲನೆ ನಡೆಸುವ ಕಾರ್ಯ ನಡೆಯುತ್ತಿದೆ.