ದಲಿತ ಪೊಲೀಸ್ ಪೇದೆಯನ್ನು ಹೊರಹಾಕಿದ ದೇವಸ್ಥಾನ ಅರ್ಚಕರು
ಮಂಗಳೂರು, ಡಿಸೆಂಬರ್ 04: ಕರ್ತವ್ಯ ನಿರತ ದಲಿತ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ದೇವಸ್ಥಾನದಿಂದ ಹೊರಹಾಕಿದ ಅಮಾನವೀಯ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಮಂಗಳೂರಿನ ಮೂಡುಬಿದಿರೆ ತಾಲ್ಲೂಕಿನ ಕಡಂದಲೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ದಲಿತ ಮಹಿಳಾ ಪೊಲೀಸ್ ಪೇದೆಯನ್ನು ದೇವಸ್ಥಾನದಿಂದ ಹೊರ ಕಳುಹಿಸಿದ್ದಾರೆ. ಈ ದೇವಸ್ಥಾನ ಮುಜರಾಯಿ ಇಲಾಖೆಯ ಅಡಿಯಲ್ಲಿ ಬರುತ್ತದೆ.
ಕಳೆದ ಸೋಮವಾರ ಈ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ ನಡೆದಿತ್ತು. ಈ ಕ್ಷೇತ್ರಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಿದ್ದರಿಂದ ಶಾಂತಿ ಸುವ್ಯವಸ್ಥೆ ಕಾಪಾಡಲೆಂದು ಪೊಲೀಸ್ ಇಲಾಖೆ ದೇವಸ್ಥಾನಕ್ಕೆ ಭದ್ರತೆ ಬಿಗಿ ಭದ್ರತೆ ಒದಗಿಸಿತ್ತು.
ದೇವಸ್ಥಾನದಲ್ಲಿ ಭಕ್ತರು ಹೆಚ್ಚಾಗಿದ್ದರಿಂದ ಮಹಿಳಾ ಪೊಲೀಸ್ ಪೇದೆಯು ಅವರನ್ನು ನಿಯಂತ್ರಿಸುವ ಕಾರ್ಯದಲ್ಲಿ ತೊಡಗಿದ್ದರು, ಮಹಿಳಾ ಪೇದೆ ದಲಿತ ಎಂಬುದು ಗೊತ್ತಾಗಿದ್ದೇ ತಡ, ಅಲ್ಲಿನ ದೇವಸ್ಥಾನ ಅರ್ಚಕ ಮಂಡಳಿಯವರು ಕೂಡಲೇ ಅವರನ್ನು ಹೊರಕ್ಕೆ ಕಳುಹಿಸಿದ್ದಾರೆ.
ನಿಮ್ಮನ್ನು ದೇವಸ್ಥಾನದ ಒಳಗೆ ಬಿಟ್ಟುಕೊಂಡಿದ್ದು ಯಾರು..? ದೇವಸ್ಥಾನದ ಹೊರಗಡೆ ಪಾರ್ಕಿಂಗ್ ಸ್ಥಳದಲ್ಲಿ ಬಂದೋಬಸ್ತ್ ಮಾಡಿ, ನಿಮ್ಮಿಂದಾಗಿ ದೇವಸ್ಥಾನ ಮೈಲಿಗೆಯಾಗಿದೆ ಎಂದು ಎಲ್ಲ ಭಕ್ತರೆದುರೇ ಅವಮಾನ ಮಾಡಿ ಹೊರ ಹಾಕಿದ್ದಾರೆ.
ಪೊಲೀಸ್ ಮಹಿಳಾ ಪೇದೆಯನ್ನು ಹೊರಹಾಕಿದ್ದನ್ನು ಅಲ್ಲಿದ್ದ ಕೆಲವರು ಪ್ರಶ್ನಿಸಿದರು, ಆದರೂ ಅದಕ್ಕೆ ತಲೆಕೆಡಿಸಿಕೊಳ್ಳದ ಅರ್ಚಕ ಸಿಬ್ಬಂದಿ ಅವರನ್ನು ಹೊರ ಕಳುಹಿಸಿದರು. ಭೋಜನಾ ಸ್ಥಳದಲ್ಲೂ ತಾರತಮ್ಯ ಮಾಡಿದ್ದು ಎಲ್ಲರ ಸಿಟ್ಟಿಗೆ ಕಾರಣವಾಗಿದೆ ಅರ್ಚಕರ ನೆಡೆ.
ದೇವಸ್ಥಾನದ ಪೂಜೆ ನಡೆದ ಬಳಿಕ ಬ್ರಾಹ್ಮಣ ಸಮುದಾಯದವರಿಗೆ ಪ್ರತ್ಯೇಕ ಭೋಜನಾ ವ್ಯೆವಸ್ಥೆ ಮಾಡಿ, ಅವರು ಊಟ ಮಾಡಿದ ನಂತರವೇ ಉಳಿದ ಸಮುದಾಯದ ಭಕ್ತರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.
ಶಾಂತ ಕಾಪಾಡುವ ಉದ್ದೇಶದಿಂದ ನಿಯೋಜಿನೆಗೊಂಡಿದ್ದ ಪೊಲೀಸ್ ಸಿಬ್ಬಂದಿಗೆ ಮಾಡಿದ ಅವಮಾನದಿಂದಾಗಿ ಬೇಸರಗೊಂಡ ಎಲ್ಲಾ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯವರು ಸ್ಥಳೀಯ ಹೋಟೆಲ್ ನಲ್ಲಿ ಊಟ ಮಾಡಿದರು.
ದೇವಸ್ಥಾನದಲ್ಲಿ 10 ಸಾವಿರ ಜನಕ್ಕೆ ಊಟದ ವ್ಯೆವಸ್ಥೆ ಮಾಡಿಸಲಾಗಿತ್ತು, ದಲಿತ ಮಹಿಳಾ ಪೇದೆಯನ್ನು ಹೊರಹಾಕಿದ್ದರಿಂದ ಆಕ್ರೋಶಗೊಂಡ ಭಕ್ತರು ದೇವಸ್ಥಾನದ ಊಟ ಸೇವಿಸದೇ ಅವರವರ ಮನೆಗಳಲ್ಲಿ ಊಟ ಮಾಡಿ, ದೇವಸ್ಥಾನದ ಅರ್ಚಕರಿಗೆ ಹಿಡಿಶಾಪ ಹಾಕಿದರು.
ಎಲ್ಲ ಸಮುದಾಯದವರು ಸಹಪಂಕ್ತಿ ಭೋಜನಕ್ಕೆ ಪೇಜಾವರ ಶ್ರೀಗಳು ಸೇರಿದಂತೆ ಅನೇಕ ಸ್ವಾಮೀಜಿಗಳು ಹೇಳುತ್ತಿದ್ದರೂ, ಈ ತರಹದ ಜಾತಿ ತಾರತಮ್ಯದ ಘಟನೆಗಳು ನಡೆಯುತ್ತಿರುವುದು ನಮ್ಮ ಸಾಮಾಜಿಕ ಅಸಮಾನತೆಗೆ ಹಿಡಿದ ಕೈಗನ್ನಡಿಯಾಗಿದೆ.