ಕುಕ್ಕೆ ಸುಬ್ರಹ್ಮಣ್ಯ; ಅಧಿಕಾರಿ V/S ಆಡಳಿತ ಮಂಡಳಿ ಜಟಾಪಟಿ
ಮಂಗಳೂರು, ಮೇ20: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆಡಳಿತ ಮಂಡಳಿ, ಕಾರ್ಯನಿರ್ವಹಣಾಧಿಕಾರಿ ನಡುವಿನ ಜಟಾಪಟಿ ತಾರಕಕ್ಕೇರಿದೆ. ಉಭಯ ಬಣಗಳು ಪರಸ್ಪರ ದೂರು ಹಾಗೂ ಪ್ರತಿದೂರಿನಲ್ಲಿ ತೊಡಗಿದ್ದು,ಇಬ್ಬರ ಜಗಳದಲ್ಲಿ ಭಕ್ತರು ಬಲಿಪಶುವಾಗಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ ವಿರುದ್ಧ ಕುಕ್ಕೆ ಸುಬ್ರಹ್ಮಣ್ಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ ದೂರಿನ ಸರಮಾಲೆಯನ್ನೇ ಹಾಕಿದ್ದಾರೆ.
ಕಾರ್ಯನಿರ್ವಹಣಾಧಿಕಾರಿ ಶೀಘ್ರವಾಗಿ ಕೆಲಸ ಮಾಡುವಲ್ಲಿ ಎಡವುತ್ತಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅವರು ವಾರದಲ್ಲಿ 4 ದಿನ ಮಾತ್ರ ಇರುತ್ತಾರೆ. ಫೈಲ್ಗಳನ್ನು ತ್ವರಿತವಾಗಿ ಕಳುಹಿಸುವ ಕೆಲಸ ಮಾಡುತ್ತಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಅವರು ಸಹಕಾರ ಕೊಡುತ್ತಿಲ್ಲ ಎಂದು ದೂರಿದ್ದಾರೆ.
ಈ ಬಗ್ಗೆ ಸಚಿವ ಅಂಗಾರ, ಶಶಿಕಲಾ ಜೊಲ್ಲೆಗೆ ಮನವಿ ಮಾಡಿದ್ದೇವೆ. ಒಳ್ಳೆಯ ಅಧಿಕಾರಿಯನ್ನು ಕುಕ್ಕೆ ಸುಬ್ರಹ್ಮಣ್ಯಕ್ಕೆ ನೇಮಿಸಲು ಮನವಿಯಲ್ಲಿ ತಿಳಿಸಲಾಗಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ ಹೇಳಿದ್ದಾರೆ.
ಆರೋಪ ತಳ್ಳಿಹಾಕಿದ ಅಧಿಕಾರಿ; ಮೋಹನ್ ರಾಂ ಸುಳ್ಳಿ ಆರೋಪದ ಕುಕ್ಕೆ ಸುಬ್ರಹ್ಮಣ್ಯ ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಮಾಡಿದ ಆರೋಪ ಸುಳ್ಳು. ಎರಡು ಮೂರು ತಿಂಗಳಿನಿಂದ ಈ ರೀತಿಯ ವಿರೋಧ ಪ್ರಕಿಯೆ ನಡೆಯುತ್ತಿದೆ ಎಂದರು.
"ಯಾಕೆ ಭಿನ್ನಾಭಿಪ್ರಾಯ ಇದೆ ಅನ್ನೋದು ನನಗೆ ಗೊತ್ತಿಲ್ಲ. ಎರಡು ದಿನ ಮಾತ್ರ ಸುಬ್ರಹ್ಮಣ್ಯದಲ್ಲಿ ಎಂದು ಹೇಳಿದ್ದಾರೆ. ನನಗೆ ಸುಬ್ರಹ್ಮಣ್ಯ ಜೊತೆಗೆ ಉಪ್ಪಿನಂಗಡಿ ದೇವಸ್ಥಾನ, ಚಾರ್ಜ್ ಇದೆ. ಬೆಂಗಳೂರಿನಲ್ಲಿ ಹಲವು ದಿನ ಧಾರ್ಮಿಕ ದತ್ತಿ ಇಲಾಖೆಯ ಸಭೆಯೂ ಇರುತ್ತದೆ. ಕಚೇರಿ ಕೆಲಸ ಹೊರತುಪಡಿಸಿ ಬೇರೆ ಸಂದರ್ಭದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಬಿಟ್ಟು ಹೊರಗೆ ಹೋಗುವುದಿಲ್ಲ. ನಾನು ಕಚೇರಿ ಕೆಲಸವನ್ನು ದೇವರ ಕೆಲಸ ಅಂತಾ ಭಾವಿಸುತ್ತೇನೆ" ಎಂದು ತಿಳಿಸಿದ್ದಾರೆ.
ಇಬ್ಬರ ಜಗಳದಲ್ಲಿ ಭಕ್ತರಿಗೆ ಸಮಸ್ಯೆ; ಕುಕ್ಕೆ ಸುಬ್ರಮಣ್ಯ ಅವ್ಯವಸ್ಥೆಯ ಆಗರವಾಗಿದೆ. ಆಮೆಗತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳಿಂದ ಭಕ್ತರು ಭಾರೀ ತೊಂದರೆ ಅನುಭವಿಸುತ್ತಿದ್ದಾರೆ. ಅಭಿವೃದ್ಧಿಗಾಗಿ ದೇವಸ್ಥಾನದ ವಸತಿಗೃಹಗಳು ಧರೆಗುರುಳಿರೋದರಿಂದ ಭಕ್ತರು ಪಡಬಾರದ ಕಷ್ಟ ಪಡುತ್ತಿದ್ದಾರೆ. ರಾತ್ರಿ ತಂಗಲು ವ್ಯವಸ್ಥೆ ಇಲ್ಲದೇ ರಸ್ತೆಯಲ್ಲಿ ಭಕ್ತರು ರಸ್ತೆಯಲ್ಲೇ ಮಲಗುವಂತಾಗಿದೆ. ಭಕ್ತರ ಸಮಸ್ಯೆಯ ಲಾಭವನ್ನು ಖಾಸಗಿ ಲಾಡ್ಜ್ ಗಳು ಪಡೆಯುತ್ತವೆ. ವಿಶೇಷ ದಿನದಲ್ಲಿ ಮೂರು ಸಾವಿರಕ್ಕೂ ಅಧಿಕ ಆಶ್ಲೇಷ ಬಲಿ ಸೇವೆಯ ಬೇಡಿಕೆಯಿದ್ದರೂ ಪೂರೈಕೆ ಅಸಾಧ್ಯವಾಗಿದೆ. ಆನ್ ಲೈನ್ ಸೇವೆಯಲ್ಲೂ ಭಾರೀ ವ್ಯತ್ಯಯವಾಗಿದ್ದು ಸರ್ಕಾರದ ಮಧ್ಯಪ್ರವೇಶಕ್ಕೆ ಭಕ್ತರು ಒತ್ತಾಯ ಮಾಡಿದ್ದಾರೆ.
ದೇವಸ್ಥಾನದಲ್ಲಿ ಸಮಸ್ಯೆಗಳ ಸರಮಾಲೆ; ಆಡಳಿತ ಮಂಡಳಿ-ಅಧಿಕಾರಿ ನಡುವಿನ ತಿಕ್ಕಾಟದಿಂದ ದೇವಸ್ಥಾನದಲ್ಲಿ ಸಮಸ್ಯೆಗಳ ಸರಮಾಲೆ ಉಂಟಾಗಿದ್ದು ಕುಕ್ಕೆ ಸುಬ್ರಹ್ಮಣ್ಯ ರಾಜ್ಯದ ನಂಬರ್ ಒನ್ ಶ್ರೀಮಂತ ದೇವಸ್ಥಾನದಲ್ಲೇ ಸಮಸ್ಯೆ ಬಿಗಾಡಾಯಿಸುತ್ತಿದೆ..
ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಆಡಳಿತ ಮಂಡಳಿ ಮತ್ತು ಕಾರ್ಯನಿರ್ವಾಹಣಾಧಿಕಾರಿ ನಡುವಿನ ಜಟಾಪಟಿ ವಿಚಾರವಾಗಿ ಕುಕ್ಕೆ ಸುಬ್ರಹ್ಮಣ್ಯ ಭಕ್ತರ ಹಿತರಕ್ಷಣಾ ವೇದಿಕೆ ಪ್ರತಿಕ್ರಿಯೆ ನೀಡದೆ. ಸರಿಯಾದ ವ್ಯವಸ್ಥೆ ಇಲ್ಲದೇ ರಥ ಬೀದಿಯಲ್ಲಿ ಭಕ್ತರು ಮಲಗುವುದು ಹಿಂದಿನಿಂದ ನಡೆದುಕೊಂಡು ಬಂದ ರಾಜಕೀಯವಾಗಿದೆ.
ಈ ಹಿಂದಿನ ಸಮಿತಿ ಒಂದು ಕೋಟಿ ವೆಚ್ಚದ ಛತ್ರ ನಿರ್ಮಿಸುವ ಪ್ಲಾನ್ ಮಾಡಿತ್ತು. ಆದರೆ ರಾಜಕೀಯದಿಂದ ಆನಂತರ ಬಂದ ಅಧಿಕಾರಿಗಳು ಈ ಯೋಜನೆಗೆ ತಡೆ ಹಾಕಿದರು. ಹೀಗಾಗಿ ಭಕ್ತರು ಸರಿಯಾದ ವ್ಯವಸ್ಥೆ ಇಲ್ಲದೇ ರಸ್ತೆಯಲ್ಲಿ ಮಲಗುವ ಹಾಗೆ ಆಗಿದೆ. ಸರ್ಕಾರ ಈ ಕೂಡಲೇ ಮಧ್ಯಪ್ರದೇಶ ಮಾಡಬೇಕು ಅಂತಾ ಕುಕ್ಕೆ ಸುಬ್ರಹ್ಮಣ್ಯ ಭಕ್ತರ ಹಿತರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿ ಶ್ರೀನಾಥ್ ಒತ್ತಾಯಿಸಿದ್ದಾರೆ.