ಅಸ್ಪೃಶ್ಯತೆ ಅನುಸರಿಸಿದ ಶಿಕ್ಷಕಿಗೆ ಅಮಾನತು ಶಿಕ್ಷೆ!
ಮಂಗಳೂರು, ಡಿಸೆಂಬರ್ 26: ಮುಗೇರು ಮಣಿಮಜಲು ಶಾಲೆ ಪಕ್ಕದಲ್ಲಿ ನಡೆದ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಶಾಲಾ ಮಕ್ಕಳನ್ನು ಊಟಕ್ಕೆ ಕರೆದೊಯ್ದು, ಪರಿಶಿಷ್ಟ ಪಂಗಡದ 8 ಮಕ್ಕಳನ್ನು ಹೊರಗೆ ನಿಲ್ಲಿಸಿದ ಆರೋಪಕ್ಕೆ ಗುರಿಯಾಗಿದ್ದ ಶಿಕ್ಷಕಿ ಪದ್ಮಾವತಿ ಅವರನ್ನು ಡಿಡಿಪಿಐ ಅಮಾನತು ಮಾಡಿದ್ದಾರೆ.
ಮುಗೇರು ಶಾಲಾ ಶಿಕ್ಷಕಿ ಪದ್ಮಾವತಿ ಪಕ್ಕದ ಮನೆಯೊಂದರ ಗೃಹ ಪ್ರವೇಶಕ್ಕೆ ಶಾಲೆಯ 28 ಮಕ್ಕಳನ್ನು ಕರೆದುಕೊಂಡು ಹೋಗಿದ್ದರು. ಈ ಸಂದರ್ಭದಲ್ಲಿ ಎಂಟು ಮಂದಿ ದಲಿತ ಮಕ್ಕಳನ್ನು ಮನೆ ಹೊರಗೆ ಬಿಟ್ಟು ಉಳಿದ ವಿದ್ಯಾರ್ಥಿಗಳನ್ನು ಮನೆಯ ಒಳಗೆ ಕರೆದುಕೊಂಡು ಹೋಗಿದ್ದರು.[ಆಳ್ವಾಸ್ ವಿದ್ಯಾರ್ಥಿಗಳಿಂದ ವೈಜ್ಞಾನಿಕ ವಿಜ್ಞಾನ ಪ್ರದರ್ಶನ]
ಬಳಿಕ ಓರ್ವ ವಿದ್ಯಾರ್ಥಿಯ ತಾಯಿ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಿದ್ದರು. ಕೆಲವು ದಲಿತ ಮುಖಂಡರ ಮಧ್ಯಸ್ಥಿಕೆಯಲ್ಲಿ ರಾಜಿ- ಪಂಚಾಯಿತಿ ನಡೆದು ಪ್ರಕರಣ ಇತ್ಯರ್ಥಪಡಿಸಲಾಗಿತ್ತು. ಇದರಿಂದ ಅನ್ಯಾಯವಾಗಿದೆ ಎಂದು ನೊಂದ ವಿದ್ಯಾರ್ಥಿಗಳ ಹೆತ್ತವರು ಜಿಲ್ಲಾ ಮೊಗೇರ ಸಂಘದ ಗಮನಕ್ಕೆ ಬಂದಿದ್ದರು. ಜಿಲ್ಲಾ ಮೊಗೇರ ಸಂಘದ ಅಧ್ಯಕ್ಷ, ಪದಾಧಿಕಾರಿಗಳು ಸುಳ್ಯಕ್ಕೆ ಆಗಮಿಸಿ ಪೊಲೀಸರಿಗೆ ದೂರು ನೀಡಿದ್ದರು. ಆ ನಂತರ ಪದ್ಮಾವತಿ ವಿರುದ್ಧ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.