ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆ ಶಂಕಿತ ಯಾರು?
ಮಂಗಳೂರು, ಜನವರಿ 21: ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ನಿನ್ನೆ ಸಜೀವ ಬಾಂಬ್ ಪತ್ತೆಯಾಗಿದ್ದು, ಬಾಂಬ್ ಇಟ್ಟ ಶಂಕಿತನಿಗಾಗಿ ಪೊಲೀಸರು ತೀವ್ರ ಶೋಧ ಮುಂದುವರೆಸಿದ್ದಾರೆ.
ಆ ವ್ಯಕ್ತಿ ಬಂದಿದ್ದ ಖಾಸಗಿ ಬಸ್ ಹಾಗೂ ಆಟೋ ಚಾಲಕನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಸಿಸಿ ಟಿವಿ ದೃಶ್ಯಾವಳಿಗಳಿಂದ ಆತನ ಗುರುತು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ.
ಮಂಗಳೂರಿನಲ್ಲಿ ಬಾಂಬ್ ಪತ್ತೆ ಪ್ರಕರಣ; ಎನ್ ಐಎ ಅಧಿಕಾರಿಗಳ ಭೇಟಿ
ಈ ನಡುವೆ ನಿನ್ನೆ ಪೊಲೀಸರು ಬಿಡುಗಡೆಗೊಳಿಸಿದ್ದ ಶಂಕಿತನ ಚಿತ್ರದಿಂದ, ಆತ ಉಡುಪಿ ಮೂಲದವನಾಗಿದ್ದು, ಎಂಜಿನಿಯರ್ ಪದವೀಧರ ಎಂದು ತಿಳಿದುಬಂದಿದೆ. ಏರ್ಪೋರ್ಟ್ ಅಧಿಕಾರಿಗಳ ವಿರುದ್ಧ ಸೇಡಿನಿಂದ ಈ ಕೃತ್ಯ ಎಸಗಿರಬಹುದು ಎಂದು ಅಂದಾಜಿಸಲಾಗಿದೆ. ಈ ಹಿಂದೆಯೂ ಇದೇ ರೀತಿ ಹುಸಿ ಬಾಂಬ್ ಕರೆ ಮಾಡಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ.
ಮಂಗಳೂರು: ಬಾಂಬ್ ಪತ್ತೆಯಿಂದ ಸ್ಫೋಟದವರೆಗೆ ನಡೆದಿದ್ದೇನು?
"ಇದೇ ವಿಷಯಕ್ಕೆ ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸಕ್ಕೆ ಆ ವ್ಯಕ್ತಿ ಅರ್ಜಿ ಸಲ್ಲಿಸಿದ್ದು, ಸೂಕ್ತ ದಾಖಲೆ ಕೊಡದ ಹಿನ್ನೆಲೆಯಲ್ಲಿ ನೌಕರಿ ದೊರೆತಿರಲಿಲ್ಲ. ಆ ಸಿಟ್ಟಿಗೆ ಬಾಂಬ್ ಇಟ್ಟಿದ್ದೇನೆ ಎಂದು ಎರಡು ಬಾರಿ ಫೋನ್ ಮಾಡಿದ್ದ. ವಿಮಾನ, ಪಾರ್ಕಿಂಗ್ ಲಾಟ್ ನಲ್ಲಿ ಬಾಂಬ್ ಇಟ್ಟಿದ್ದೇನೆ ಎಂದು ಫೋನ್ ಮಾಡಿ ಬೆದರಿಕೆ ಒಡ್ಡಿದ್ದ. ಆಗಸ್ಟ್ 2018ರಲ್ಲಿ ಬೆಂಗಳೂರು ಏರ್ಪೋರ್ಟ್ ಪೊಲೀಸರಿಂದ ಈತ ಬಂಧಿತನಾಗಿದ್ದ" ಎಂದು ಪೊಲೀಸ್ ಮೂಲಗಳು ತಿಳಿಸಿವೆ.