Video: ಬಿಜೆಪಿ ಕಾರ್ಯಕರ್ತರ ಕೋಪಕ್ಕೆ ಅದರಿದ ನಾಯಕರು ಅಡಗಿ ಕೂತರು!
ದಕ್ಷಿಣ ಕನ್ನಡ, ಜುಲೈ 28: ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವು ಕೇಸರಿ ಪಡೆ ಕಾರ್ಯಕರ್ತರನ್ನು ಕೆರಳಿ ಕೆಂಡವಾಗಿಸಿದೆ. ತಮ್ಮದೇ ಬಿಜೆಪಿ ಪಕ್ಷದ ಕಾರ್ಯಕರ್ತರಿಂದ ತಪ್ಪಿಸಿಕೊಳ್ಳುವುದಕ್ಕೆ ಸಚಿವರು ಅಡಗಿ ಕುಳಿತಿರುವ ಘಟನೆ ನಡೆದಿದೆ.
ಪ್ರವೀಣ್ ನೆಟ್ಟಾರು ಅಂತಿಮ ದರ್ಶನಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಬೆಳ್ಳಾರೆ ಪಟ್ಟಣಕ್ಕೆ ತೆರಳಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಅಂಗಾರ ಮತ್ತು ಜಿಲ್ಲಾ ಬಿಜೆಪಿ ಉಸ್ತುವಾರಿ ಸಚಿವ ಸುನೀಲ್ ಕಾರ್ಕಳಗೆ ಕಾರ್ಯಕರ್ತರು ಮುತ್ತಿಗೆ ಹಾಕಿದರು. ಕಾರ್ಯಕರ್ತರ ಮಧ್ಯೆ ಸಿಲುಕಿಕೊಂಡ ನಾಯಕರನ್ನು ಪೊಲೀಸರೇ ಮಾನವ ಸರಪಳಿ ನಿರ್ಮಿಸುವ ಮೂಲಕ ಸುರಕ್ಷಿತವಾಗಿ ಬಚಾವ್ ಮಾಡಿದರು. ಇದರ ಮಧ್ಯೆ ಅದೊಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಮಾಡಿ ಬಿಟ್ಟಿದೆ.
ಬಿಜೆಪಿ ಕಾರ್ಯಕರ್ತರ ಕೋಪಕ್ಕೆ ಬೆಳ್ಳಾರೆ ಪ್ರವೇಶಿಸಿದ ರಾಜ್ಯಾಧ್ಯಕ್ಷರ ಕಾರು ನಡುಗಿತು. ಒಂದು ಕ್ಷಣ ಬಿಜೆಪಿ ನಾಯಕರೇ ಕಕ್ಕಾಬಿಕ್ಕಿ ಆಗಿದ್ದರು. ತಕ್ಷಣ ಮಧ್ಯಪ್ರವೇಶಿಸಿದ ಪೊಲೀಸರು ಮಾನವ ಸರಪಳಿ ನಿರ್ಮಿಸುವ ಮೂಲಕ ನಾಯಕರನ್ನು ಸುರಕ್ಷಿತವಾಗಿ ಅಲ್ಲಿಂದ ಸ್ಥಳಾಂತರಿಸಿದರು. ಈ ಹಂತದಲ್ಲಿ ಕಾರ್ಯಕರ್ತರ ಮಧ್ಯೆದಲ್ಲೇ ಸಚಿವ ಎಸ್ ಅಂಗಾರ ಮತ್ತು ಸುನೀಲ್ ಕಾರ್ಕಳ ಅಡಗಿಕೊಂಡು ಕುಳಿತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
|
ಬಿಜೆಪಿ ನಾಯಕರಿಗೆ ಬಿಸಿ ಮುಟ್ಟಿಸಿದ ಕಾರ್ಯಕರ್ತರು
ಮಂಗಳವಾರ ಪ್ರವೀಣ್ ನೆಟ್ಟಾರು ಹತ್ಯೆ ನಡೆದ ಬಳಿಕ ಬುಧವಾರ ಬೆಳಗ್ಗೆಯೇ ಬಿಜೆಪಿ ನಾಯಕರು ಅಂತಿಮ ದರ್ಶನಕ್ಕೆ ಬರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಬುಧವಾರ ಮಧ್ಯಾಹ್ನ 1 ಗಂಟೆ ವೇಳೆಗೆ ಬೆಳ್ಳಾರೆ ಪಟ್ಟಣಕ್ಕೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕಾರ್ಕಳ ಹಾಗೂ ಸಚಿವ ಅಂಗಾರ ವಿರುದ್ಧ ಕಾರ್ಯಕರ್ತರು ಘೇರಾವ್ ಹಾಕಿದರು. ಕಟೀಲ್ ಕಾರಿಗೆ ಮುತ್ತಿಗೆ ಹಾಕಿ, ಅವರ ಕಾರ್ ಪಕ್ಚರ್ ಮಾಡಿದರು. ಬಿಜೆಪಿ ನಾಯಕರ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿದರು.
ಅಂತ್ಯಕ್ರಿಯೆಯಿಂದ ಬಿಜೆಪಿ ನಾಯಕರು ಅಂತರ
ಬಿಜೆಪಿ ನಾಯಕರ ವಿರುದ್ಧ ಕಾರ್ಯಕರ್ತರ ಆಕ್ರೋಶವನ್ನು ಕಂಡು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಭದ್ರತಾ ದೃಷ್ಟಿಯಿಂದ ಪ್ರವೀಣ್ ನೆಟ್ಟಾರು ಅಂತ್ಯಕ್ರಿಯೆಯಲ್ಲಿ ನಳಿನ್ ಕುಮಾರ್ ಕಟೀಲ್, ಸಚಿವ ಸುನೀಲ್ ಕಾರ್ಕಳ ಮತ್ತು ಅಂಗಾರ ಭಾಗವಹಿಸದಂತೆ ಪೊಲೀಸರು ಸಲಹೆ ನೀಡಿದ್ದರು. ಪೊಲೀಸರ ಸೂಚನೆ ಹಿನ್ನೆಲೆ ಪ್ರವೀಣ್ ನೆಟ್ಟಾರು ಅಂತ್ಯ ಸಂಸ್ಕಾರದಲ್ಲಿ ನಾಯಕರು ಭಾಗವಹಿಸಲಿಲ್ಲ.
ಸುಳ್ಯ, ಬೆಳ್ಳಾರೆ ಸೇರಿ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಕಡಬ, ಸುಳ್ಯ ಹಾಗೂ ಬೆಳ್ಳಾರೆ ಪಟ್ಟಣಗಳು ಸೇರಿದಂತೆ ಮಂಗಳೂರು ಹೊರತುಪಡಿಸಿ ಜಿಲ್ಲಾದ್ಯಂತ ಶುಕ್ರವಾರ ಬೆಳಗ್ಗೆವರೆಗೂ ಸೆಕ್ಷನ್ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಯಾವುದೇ ರೀತಿ ಅಹಿತಕರ ಘಟನೆಗಳು ನಡೆಯದಂತೆ ಜಾಗೃತಿ ವಹಿಸಲಾಗಿದೆ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಹಿನ್ನೆಲೆ
ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಬೆಳ್ಳಾರೆ ಪಟ್ಟಣದಲ್ಲಿ ಜುಲೈ 26ರಂದು ರಾತ್ರಿ 9 ಗಂಟೆ ವೇಳೆಗೆ ಪ್ರವೀಣ್ ನೆಟ್ಟಾರು ಮೇಲೆ ದಾಳಿ ನಡೆಸಲಾಗಿತ್ತು. ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ದುಷ್ಕರ್ಮಿಗಳು ಅಲ್ಲಿಂದ ಎಸ್ಕೇಪ್ ಆಗಿದ್ದರು. ಸ್ಥಳದಲ್ಲಿ ಕುಸಿದು ಬಿದ್ದ ಪ್ರವೀಣ್ ಅನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಅಷ್ಟರಲ್ಲಿ ಅವರು ಮೃತಪಟ್ಟಿರುವ ಬಗ್ಗೆ ವೈದ್ಯರು ತಿಳಿಸಿದರು. ಬಿಜೆಪಿ ಕಾರ್ಯಕರ್ತನ ಈ ಹತ್ಯೆ ಕರಾವಳಿಯ ಬಿಜೆಪಿ ಕಾರ್ಯಕರ್ತರನ್ನು ಕೆರಳಿಸಿದೆ.
Recommended Video