ಡಿ. ಕೆ. ಶಿವಕುಮಾರ್ ವಿರುದ್ಧ ವಾರೆಂಟ್ ಜಾರಿ; ಪ್ರಕರಣದ ವಿವರ
ಮಂಗಳೂರು, ಸೆಪ್ಟೆಂಬರ್ 15; ಮಾಜಿ ಸಚಿವ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ವಿರುದ್ಧ ವಾರೆಂಟ್ ಜಾರಿಯಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿ ಎಂದು ಐಜಿಪಿ ಮತ್ತು ಡಿಐಜಿಗೂ ನೋಟಿಸ್ ನೀಡಲಾಗಿದೆ. ಡಿ. ಕೆ. ಶಿವಕುಮಾರ್ ಇಂಧನ ಸಚಿವರಾಗಿದ್ದಾಗ ದಾಖಲಾದ ದೂರಿನ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ನ್ಯಾಯಾಲಯ ಡಿ. ಕೆ. ಶಿವಕುಮಾರ್ ವಿರುದ್ಧ ವಾರೆಂಟ್ ಜಾರಿಗೊಳಿಸಿದೆ. ನ್ಯಾಯಾಲಯಕ್ಕೆ ಹಲವು ಬಾರಿ ಸಾಕ್ಷಿ ಹೇಳಲು ಗೈರಾಗಿರುವುದನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸೂಚನೆ ನೀಡಿದೆ.
25 ಬಿಜೆಪಿ ಸಂಸದರಿಗೆ ಸವಾಲು ಹಾಕಿದ ಡಿ. ಕೆ. ಶಿವಕುಮಾರ್
ಹಲವು ಬಾರಿ ಸಮನ್ಸ್ ನೀಡಿದರೂ ಸಾಕ್ಷಿ ಹೇಳಲು ಡಿ. ಕೆ. ಶಿವಕುಮಾರ್ ಹಾಜರಾಗಿರಲಿಲ್ಲ. ಆದ್ದರಿಂದ ವಾರೆಂಟ್ ಜಾರಿಗೊಳಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಆದೇಶಿಸಲಾಗಿದೆ. ಸೆಪ್ಟೆಂಬರ್ 29ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.
ಸುಳ್ಯ ಶಾಸಕ ಅಂಗಾರ ಅವರಿಗೆ ಒಲಿದು ಬರಲಿದೆಯೇ ಸಚಿವ ಸ್ಥಾನ
ಡಿ. ಕೆ. ಶಿವಕುಮಾರ್ ಇಂಧನ ಸಚಿವರಾಗಿದ್ದಾಗ ಬೆಳ್ಳಾರೆ ವರ್ತಕರ ಸಂಘದ ಮಾಜಿ ಅಧ್ಯಕ್ಷ ಸಾಯಿ ಗಿರಿಧರ ರೈ ದೂರವಾಣಿ ಕರೆ ಮಾಡಿದ್ದರು. ನಿರಂತರವಾಗಿ ಎದುರಾಗುತ್ತಿರುವ ವಿದ್ಯುತ್ ಸಮಸ್ಯೆ ಬಗ್ಗೆ ದೂರಿದ್ದರು. ಆಗ ಗಿರಿಧರ ರೈ ಮತ್ತು ಇಂಧನ ಸಚಿವ ಡಿ. ಕೆ. ಶಿವಕುಮಾರ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಕುರಿತು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ದಕ್ಷಿಣ ಕನ್ನಡದ ಕುಗ್ರಾಮದಲ್ಲಿ ಫಲನೀಡಿದ 30 ದೇಶದ ನೂರಾರು ಹಣ್ಣುಗಳು!
ದೂರು ನೀಡಿದ್ದ ಡಿ. ಕೆ. ಶಿವಕುಮಾರ್
ಇಂಧನ ಸಚಿವರಾಗಿದ್ದ ಡಿ. ಕೆ. ಶಿವಕುಮಾರ್ 2016ರ ಫೆಬ್ರವರಿ 28ರಂದು ಮಾತಿನ ಚಕಮಕಿ ನಡೆದ ಕುರಿತು ಸಾಯಿ ಗಿರಿಧರ ರೈ ವಿರುದ್ಧ ಮೆಸ್ಕಾಂ ಎಂಡಿ ಹಾಗೂ ಸುಳ್ಯ ಕಚೇರಿಯ ಅಂದಿನ ಪ್ರಭಾರ ಎಇಇ ಹರೀಶ್ ನಾಯ್ಕ್ ಮೂಲಕ ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಸಾಯಿ ಗಿರಿಧರ ರೈ ಬಂಧನವಾಗಿತ್ತು. ಈ ಪ್ರಕರಣದಲ್ಲಿ ಡಿ. ಕೆ. ಶಿವಕುಮಾರ್ ಸಾಕ್ಷಿಯಾಗಿದ್ದಾರೆ.
ಸಾಕ್ಷಿ ಹೇಳಲು ಆಗಮಿಸಿಲ್ಲ
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ನ್ಯಾಯಾಲಯದಲ್ಲಿ ಈಗ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಪ್ರಕರಣದ ಸಾಕ್ಷಿಯಾದ ಡಿ. ಕೆ. ಶಿವಕುಮಾರ್ಗೆ ಹಲವು ಬಾರಿ ಸಾಕ್ಷಿ ಹೇಳಲು ಆಗಮಿಸುವಂತೆ ಸಮನ್ಸ್ ಜಾರಿಗೊಳಿಸಲಾಗಿತ್ತು. ಆದರೆ ಹಾಜರಾಗದ ಕಾರಣ ವಾರೆಂಟ್ ಜಾರಿಗೊಳಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಲು ಐಜಿಪಿ ಮತ್ತು ಡಿಐಜಿಗೂ ನೋಟಿಸ್ ನೀಡಲಾಗಿದೆ.
ಅವಾಚ್ಯ ಶಬ್ದಗಳ ಬಳಕೆ
2016ರ ಫೆಬ್ರವರಿ 28ರಂದು ರಾತ್ರಿ ಡಿ. ಕೆ. ಶಿವಕುಮಾರ್ಗೆ ಕರೆ ಮಾಡಿದಾಗ ಸಾಯಿ ಗಿರಿಧರ ರೈ ಮತ್ತು ಡಿ. ಕೆ. ಶಿವಕುಮಾರ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಅವಾಚ್ಯ ಶಬ್ದಗಳನ್ನು ಸಹ ಬಳಕೆ ಮಾಡಲಾಗಿತ್ತು. ಅಂದು ರಾತ್ರಿಯೇ ಸುಳ್ಯ ಪೊಲೀಸರು ಬೆಳ್ಳಾರೆಗೆ ಹೋಗಿ ಸಾಯಿ ಗಿರಿಧರ ರೈ ಬಂಧಿಸಿದ್ದರು. ಸಚಿವರ ಜೊತೆಗಿನ ಮಾತುಕತೆಯ ಆಡಿಯೋ ವೈರಲ್ ಆಗಿತ್ತು. ಈ ಪ್ರಕರಣದಲ್ಲಿ ಸಾಕ್ಷಿ ಹೇಳಲು ಬರುವಂತೆ ಸುಳ್ಯ ಕೋರ್ಟ್ ಡಿ. ಕೆ. ಶಿವಕುಮಾರ್ಗೆ 3 ಬಾರಿ ಸಮನ್ಸ್ ನೀಡಿತ್ತು.
ಬಂಧಿಸಲು ಹೋದಾಗ ಹೈಡ್ರಾಮ ನಡೆದಿತ್ತು
ಸುಳ್ಯ ಪೊಲೀಸರು ಸಾಯಿ ಗಿರಿಧರ ರೈ ಬಂಧಿಸಲು ಹೋದಾಗ ಹೈಡ್ರಾಮ ನಡೆದಿತ್ತು. ತಾಯಿ, ಪತ್ನಿ, ಮಗಳ ಜೊತೆ ಇದ್ದ ಸಾಯಿ ಗಿರಿಧರ ರೈ ಪೊಲೀಸರ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಮನೆಯ ಬಾಗಿಲು ತೆರೆಯಲು ನಿರಾಕರಿಸಿದ್ದರು. ಪೊಲೀಸರು ಮನೆಯ ಛಾವಣಿ ಏರಿ, ಹೆಂಚುಗಳನ್ನು ಒಡೆದು ಮನೆಯೊಳಗೆ ಹೋಗಿ ಸಾಯಿ ಗಿರಿಧರ ರೈ ಬಂಧಿಸಿದ್ದರು. ಈಗ ಪ್ರಕರಣದ ವಿಚಾರಣೆ ಕೋರ್ಟ್ ನಡೆಯುತ್ತಿದೆ.