ತಹಶೀಲ್ದಾರ್ ಶ್ರಮದಿಂದ ನಿರ್ಗತಿಕ ಕುಟುಂಬಕ್ಕೆ ಸಿಕ್ಕಿತು 'ಬೆಳಕು'
ಮಂಗಳೂರು, ಆಗಸ್ಟ್ 30: ಸರ್ಕಾರಿ ಅಧಿಕಾರಿ ಹಾಗೂ ಕೆಲ ಉತ್ಸಾಹಿ ತರುಣರ ಶ್ರಮ, ಸೇವೆಯಿಂದ ರಸ್ತೆ ಬದಿ ಜೀವನ ಸಾಗಿಸುತ್ತಿದ್ದ ನಿರ್ಗತಿಕ ಕುಟುಂಬವೊಂದಕ್ಕೆ ಸೂರೊಂದು ದೊರಕಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದಲ್ಲಿ ದಾನಿಗಳ ಸಹಕಾರ, ಯುವ ಸಂಘಟನೆಗಳ ಶ್ರಮದಾನದಿಂದ ತಹಶೀಲ್ದಾರ್ ಎನ್.ಎ.ಕುಂಞಿ ಅಹಮ್ಮದ್ ನೇತೃತ್ವದಲ್ಲಿ ಮನೆ ನಿರ್ಮಾಣಗೊಂಡಿದೆ.
ಕಳೆದ ಕೆಲ ವರ್ಷಗಳಿಂದ ಇಲ್ಲಿನ ರಾಮಣ್ಣ ನಾಯ್ಕ ಮತ್ತು ಲಲಿತಾ ದಂಪತಿ ರಸ್ತೆ ಬದಿ ಜೋಪಡಿಯಲ್ಲಿ ವಾಸವಾಗಿದ್ದರು. ಆದರೆ ಇತ್ತೀಚೆಗೆ ಸುರಿದ ಭಾರೀ ಮಳೆ ಗಾಳಿಗೆ ಗುಡಿಸಲು ಕುಸಿದು ಬಿದ್ದಿತ್ತು. ಈ ಕುರಿತು ಮಾಹಿತಿ ಪಡೆದ ತಹಶೀಲ್ದಾರ್ ಎನ್.ಎ.ಕುಂಞಿ ಅಹಮ್ಮದ್ ಸ್ಥಳಕ್ಕೆ ತೆರಳಿ ಈ ಕುಟುಂಬವನ್ನು ಬೇರೆಡೆಗೆ ಸ್ಥಳಾಂತರಿಸಿದ್ದರು.
ಅನಾರೋಗ್ಯ ಪೀಡಿತನನ್ನು ತನ್ನ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಿದ ಬೆಳ್ತಂಗಡಿ ತಹಶೀಲ್ದಾರ್
ಬಳಿಕ ತಹಶೀಲ್ದಾರ್ ಸಮಾನ ಮನಸ್ಕರೊಂದಿಗೆ ಚರ್ಚಿಸಿ ಈ ಕುಟುಂಬಕ್ಕೆ ಒಂದು ಮನೆ ನಿರ್ಮಿಸಿ ಕೊಡುವ ಯೋಜನೆ ರೂಪಿಸಿದರು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ದಾನಿಗಳಿಂದ ಸಹಾಯ ಹಸ್ತ ಚಾಚುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಆ ನಿರ್ಗತಿಕ ಕುಟುಂಬಕ್ಕೆ ನೆರವಿನ ಮಹಾಪೂರವೇ ಹರಿದು ಬಂದಿತ್ತು.
ಮನೆ ನಿರ್ಮಾಣಕ್ಕೆ ಅಗತ್ಯವಾದ ಕಲ್ಲು, ಸಿಮೆಂಟ್, ಇಟ್ಟಿಗೆ, ಮರಳು, ಶೀಟ್, ಪೇಯಿಂಟ್, ಬಾಗಿಲು, ಕಿಟಕಿ ಹೀಗೆ ಎಲ್ಲವನ್ನೂ ಸುಳ್ಯದ ದಾನಿಗಳು ಉಚಿತವಾಗಿ ಒದಗಿಸಿಕೊಟ್ಟರು. ನಿರ್ಮಾಣ ಕಾರ್ಯಕ್ಕೆ ಯುವ ಬ್ರಿಗೇಡ್, ಎಸ್ಕೆಎಸ್ಎಸ್ಎಫ್ ವಿಖಾಯ ತಂಡ, ಎಸ್ಎಸ್ಎಫ್, ಎಸ್ವೈಎಸ್ ಇತ್ಯಾದಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಕೈ ಜೋಡಿಸಿದರು.
ಕೆಲ ದಾನಿಗಳು ಮನೆ ನಿರ್ಮಾಣ ಸಾಮಗ್ರಿಗಳನ್ನು ನೀಡಿದರೆ, ವಿವಿಧ ಸಂಘಟನೆಗಳ ಕಾರ್ಯಕರ್ತರು ನಿರ್ಮಾಣ ಕಾರ್ಯದಲ್ಲಿ ಭಾಗಿಯಾದರು. ಈಗ ಕೇವಲ 13 ದಿನದಲ್ಲಿ ಪುಟ್ಟ ಮನೆಯೊಂದು ತಲೆ ಎತ್ತಿ ನಿಂತಿದೆ.
ಪ್ರತಿದಿನ ಒಂದೊಂದು ಸಂಘಟನೆಗಳ ಕಾರ್ಯಕರ್ತರು ಮಳೆ ಬಿಸಿಲು ಲೆಕ್ಕಿಸದೆ ನಿರಂತರ ಕೆಲಸ ಮಾಡಿದ್ದರಿಂದ 13 ದಿನದಲ್ಲೇ ಶ್ರಮಧಾಮ ಪೂರ್ಣಗೊಂಡಿತು. ಮನೆ ನಿರ್ಮಾಣಕ್ಕಾಗಿ ಎರಡು ಲಕ್ಷ ರೂ. ವೆಚ್ಚದ ಸಾಮಗ್ರಿಗಳನ್ನು ದಾನಿಗಳು ಕೊಡುಗೆಯಾಗಿ ನೀಡಿದ್ದರು. ರಾಮಣ್ಣ ನಾಯ್ಕ ಕುಟುಂಬಕ್ಕಾಗಿ ನಿರ್ಮಿಸಿದ ಈ ಮನೆಗೆ 'ಬೆಳಕು' ಎಂದು ಹೆಸರಿಡಲಾಗಿದೆ. ತಹಶೀಲ್ದಾರ್ ಕುಂಞಿ ಅಹಮ್ಮದ್ ಇಂದು ಮನೆ ಹಸ್ತಾಂತರ ಮಾಡಲಿದ್ದಾರೆ.