ಕೊನೆಗೂ ಸಿಗಲಿಲ್ಲ ನ್ಯಾಯ; ಏಕಾಂಗಿ ಜೀವನದತ್ತ ಮುಖ ಮಾಡಿದ ಸುಳ್ಯದ ಆಸೀಯಾ
ಮಂಗಳೂರು, ಅಕ್ಟೋಬರ್ 22: ಆಕೆ ಕೇರಳದ ಪ್ರಸಿದ್ಧ ಹಿಂದೂ ಮನೆತನದ ಏಕೈಕ ಮಗಳು. ಸಾವಿರಾರು ಕೋಟಿ ರೂಪಾಯಿ ಆಸ್ತಿ, ಕಣ್ಣಿಗೆ ಕಾಣಿದನ್ನು ತೆಗೆದುಕೊಳ್ಳುವಷ್ಟು ಸಿರಿವಂತಿಕೆ ಎಲ್ಲವೂ ಇತ್ತು. ಆದರೆ ಮತಾಂತರ ಎಂಬ ಮಾಯಾಜಾಲದಲ್ಲಿ ಸಿಲುಕಿದ ಆಕೆ ಇಂದು ಎಲ್ಲವನ್ನೂ ಕಳೆದುಕೊಂಡಿದ್ದಾಳೆ.
ಬಿಟ್ಟು ಹೋದ ಗಂಡನ ವಿರುದ್ಧ ಸತತ ಎರಡು ವರ್ಷಗಳ ಕಾಲ ಹೋರಾಡಿ ನ್ಯಾಯ ಸಿಗದೇ ಈಗ ಏಕಾಂಗಿ ಜೀವನದತ್ತ ಮುಖ ಮಾಡಿದ್ದಾಳೆ. ಇದು ರಾಜ್ಯದ ಗಮನ ಸೆಳೆದ ಆಸೀಯಾ ಎಂಬ ಹೆಣ್ಣುಮಗಳ ಕರುಣಾಜನಕ ಕಥೆ.
ಕೇರಳದ ಕಣ್ಣೂರಿನ ಪ್ರಸಿದ್ಧ ಹಿಂದೂ ಮನೆತನದ ಏಕೈಕ ಮಗಳು ಶಾಂತಿ ಜೂಬಿಯನ್ನು ಬೆಂಗಳೂರಿನ ಉದ್ಯಮಿಯೋರ್ವನಿಗೆ ಮದುವೆ ಮಾಡಿ ನೀಡಲಾಗಿತ್ತು. ಶಾಂತಿ ಜೂಬಿಗೆ ಫೇಸ್ಬುಕ್ನಲ್ಲಿ ಸುಳ್ಯದ ಇಬ್ರಾಹಿಂ ಖಲೀಲ್ ಎಂಬಾತನ ಪರಿಚಯವಾಗಿತ್ತು. ಪರಿಚಯ ಸಲುಗೆಯನ್ನು ಪಡೆದುಕೊಂಡು ವಿಡಿಯೋ ಕಾಲ್ನಲ್ಲಿದ್ದಾಗ ಶಾಂತಿ ಜೂಬಿಯ ಗಂಡನಿಗೆ ಗೊತ್ತಾಗಿ ವಿಚ್ಚೇದನವನ್ನು ಪಡೆದಿದ್ದನು.
ಶಾಂತಿ ಜೂಬಿಯನ್ನು ಮದುವೆಯಾಗುವಾದಾಗಿ ಇಬ್ರಾಹಿಂ ಖಲೀಲ್ ಮುಂದೆ ಬಂದಿದ್ದು, ತಾನು ಮದುವೆಯಾಗಬೇಕಾದರೆ ಇಸ್ಲಾಂ ಧರ್ಮಕ್ಕೆ ಮತಾಂತರವಾಗಬೇಕೆಂದು ಹೇಳಿದ್ದ. ಖಲೀಲ್ ಮಾತು ಕೇಳಿ ನಾಲ್ಕು ತಿಂಗಳು ಇಸ್ಲಾಂ ಧರ್ಮ ಅಧ್ಯಯನ ಮಾಡಿ, ಶಾಂತಿ ಜೂಬಿ ನಂತರ ಆಸಿಯಾ ಆಗಿ ಬದಲಾಗಿದ್ದಳು. 2017ರಲ್ಲಿ ಇಬ್ರಾಹಿಂ ಖಲೀಲ್ ಮತ್ತು ಆಸಿಯಾ ಮುಸ್ಲಿಂ ಸಂಪ್ರದಾಯದಂತೆ ಮದುವೆಯಾಗಿದ್ದರು.
ಆಸೀಯಾ ಜೊತೆ 2019ರವರೆಗೆ ಮೂರು ವರ್ಷಗಳ ಕಾಲ ಸಂಸಾರ ಮಾಡಿದ ಖಲೀಲ್ ಬೆಂಗಳೂರಿನ ಮನೆಯಿಂದ ಧಿಡೀರ್ ನಾಪತ್ತೆಯಾಗಿದ್ದ. ಖಲೀಲ್ನ್ನು ಸಂಪರ್ಕಿಸುವ ಪ್ರಯತ್ನ ಮಾಡಿದರೂ ಯಾವದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಬೆಂಗಳೂರಿನಿಂದ ಸುಳ್ಯದ ಖಲೀಲ್ ಮನೆಗೆ ಬಂದ ಆಸೀಯಾಳನ್ನು ಖಲೀಲ್ ಮನೆಯವರು ಹೊಡೆದು ಓಡಿಸಿದ್ದರು. ಬಳಿಕ ಮಾನವ ಹಕ್ಕುಗಳು, ಹಿಂದೂ ಸಂಘಟನೆಗಳು ಆಸಿಯಾ ನೆರವಿಗೆ ಬಂದು ಹೋರಾಟದಲ್ಲಿ ಸಹಾಯ ಮಾಡುವುದಾಗಿ ಹೇಳಿದ್ದರು.
ಎರಡು ವರ್ಷಗಳ ಕಾಲ ಸುಳ್ಯದಲ್ಲಿ ನೆಲೆಸಿದ್ದ ಆಸಿಯಾ ಕೆಲವು ತಿಂಗಳ ಲಾಡ್ಜ್ನಲ್ಲಿ ಉಳಿದಿದ್ದರು. ಈ ಸಂದರ್ಭದಲ್ಲಿ ಆಸಿಯಾ ಖಲೀಲ್ ಜೊತೆ ಮಾತನಾಡಲು ಯತ್ನಿಸಿದ್ದರೂ, ಖಲೀಲ್ ಮನೆಯವರು ಮಾತನಾಡುವುದಕ್ಕೆ ಬಿಟ್ಟಿರಲಿಲ್ಲ. ಆದರೆ ಕಳೆದ ಒಂದು ವಾರದ ಹಿಂದೆ ಮುಸ್ಲಿಂ ಸಂಘಟನೆಗಳು ಮಧ್ಯಪ್ರವೇಶ ಮಾಡಿ, ಖಲೀಲ್ನ್ನು ಆಸೀಯಾ ಮುಂದೆ ತಂದು "ನೀನು ನನಗೆ ಬೇಡ, ನಿನ್ನ ಜೊತೆ ಮುಂದೆ ಜೀವನ ಮಾಡಲು ಸಾಧ್ಯವಿಲ್ಲ' ಅಂತಾ ಹೇಳಿದ್ದಾನೆ.
ಇದರಿಂದ ಬೇಸರಗೊಂಡಿರುವ ಆಸೀಯಾ ತಾನು ಇನ್ಮುಂದೆ ಖಲೀಲ್ ಮತ್ತು ಆತನ ಕುಟುಂಬದ ವಿಷಯಕ್ಕೆ ಹೋಗದೇ ಬಿಟ್ಟು ಬಿಡುವುದಾಗಿ ಹೇಳಿದ್ದಾರೆ. ಈ ಬಗ್ಗೆ ಮಂಗಳೂರಿನಲ್ಲಿ ಆಸೀಯಾ ಸುದ್ದಿಗೋಷ್ಠಿ ನಡೆಸಿ ತನ್ನ ಮುಂದಿನ ನಿರ್ಧಾರವನ್ನು ಹೇಳಿದ್ದಾರೆ.
ಎರಡು ವರ್ಷಗಳಿಂದ ತನಗೆ ನ್ಯಾಯ ಸಿಗಬೇಕೆಂದು ಹೋರಾಟ ಮಾಡಿದ್ದೇನೆ. ಆದರೆ ಕೊನೆಯವರೆಗೂ ನನ್ನ ಹೋರಾಟಕ್ಕೆ ಜಯವಾಗಿಲ್ಲ. ಎಲ್ಲರ ಮೂಲಕವೂ ಖಲೀಲ್ನ್ನು ಒಪ್ಪಿಸಲು ಪ್ರಯತ್ನ ಮಾಡಿದ್ದೆ. ಆದರೆ ಖಲೀಲ್ ನೀನು ಬೇಡ ಅಂತಾ ಹೇಳಿದ ಕಾರಣಕ್ಕಾಗಿ ನನ್ನ ಹೋರಾಟ ನಿಲ್ಲಿಸಿದ್ದೇನೆ ಎಂದು ತಿಳಿಸಿದ್ದಾಳೆ.
ನಾನು ಮತ್ತೆ ಮುಸ್ಲಿಂ ಧರ್ಮದಿಂದ ಹಿಂದೂ ಧರ್ಮಕ್ಕೆ ಹೋಗಲ್ಲ. ಹಿಂದೂ ಧರ್ಮದಲ್ಲಿ ಇರುವುದಾದರೆ ಮನೆಗೆ ಬರುವುದಕ್ಕೆ ಹೆತ್ತವರು ಹೇಳಿದ್ದಾರೆ. ಆದರೆ ನಾನು ಮುಸ್ಲಿಂ ಧರ್ಮದಲ್ಲೇ ಇರುತ್ತೇನೆ. ಮುಸ್ಲಿಂ ಧರ್ಮದಲ್ಲಿ ನನ್ನ ರೀತಿ ಅನ್ಯಾಯಕ್ಕೊಳಗಾದ ಮಹಿಳೆಯರ ಪರ ನಿಂತು ಕೆಲಸ ಮಾಡುತ್ತೇನೆ ಅಂತಾ ಆಸೀಯಾ ಹೇಳಿದ್ದಾರೆ.
ಗಂಡನಿಂದ ಆದ ದೌರ್ಜನ್ಯದ ಬಗ್ಗೆ ನಡೆಸಿದ ಎಲ್ಲಾ ಹೋರಾಟಗಳಿಂದ ಹೊರಬಂದಿದ್ದೇನೆ. ಎರಡು ವರ್ಷಗಳ ಕಾಲ ನಡೆಸಿದ ಹೋರಾಟದಿಂದ ಯಾವುದೇ ಪ್ರಯೋಜನ ಆಗಿಲ್ಲ. ಗಂಡನ ಮನೆಯವರ ಮುಂದೆ ತನಾಗದ ಅನ್ಯಾಯ ಮರೀಚಿಕೆಯಾಗಿದೆ. ಇನ್ನು ಹೋರಾಟವನ್ನು ಮುಂದುವರಿಸಲು ನನ್ನಲ್ಲಿ ಯಾವುದೇ ಶಕ್ತಿ ಇಲ್ಲ. ಹೀಗಾಗಿ ಮುಂದೆ ಎಲ್ಲಾ ಹೋರಾಟಗಳಿಂದ ಮುಕ್ತವಾಗಿ ಸುಖವಾದ ಜೀವನ ನಡೆಸುತ್ತೇನೆ ಅಂತಾ ಆಸೀಯಾ ಹೇಳಿದ್ದಾರೆ.
ಪ್ರೀತಿ ಮಾಡುವ ಯುವತಿಯರು ಒತ್ತಾಯಪೂರ್ವಕವಾಗಿ ಮತಾಂತರ ಆಗಬೇಡಿ. ಧರ್ಮವನ್ನು ಅರಿತು ಮತಾಂತರ ಆಗಿ ಅಂತ ಆಸೀಯಾ ಸಲಹೆ ನೀಡಿದ್ದಾರೆ.
ಒಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಆಸೀಯಾ ಪ್ರಕರಣ ಅಂತ್ಯಗೊಂಡಿದೆ. ವ್ಯವಸ್ಥೆಯ ಮುಂದೆ ಹೋರಾಡಲಾರದೇ ಹೆಣ್ಣುಮಗಳು ತನಗಾದ ಅನ್ಯಾಯಕ್ಕೆ ಹೋರಾಟ ನಡೆಸಲಾಗದೇ ಶಸ್ತ್ರತ್ಯಾಗ ಮಾಡಿದ್ದಾಳೆ.
Recommended Video